
ವಿರಾಜಪೇಟೆ ಆ.19 NEWS DESK : ರಾಜ್ಯದಾದ್ಯಂತ ಪ್ರಖ್ಯಾತವಾಗಿರುವ ವಿರಾಜಪೇಟೆಯ ಐತಿಹಾಸಿಕ ಗೌರಿ ಗಣೇಶ ಉತ್ಸವ ಕಾನೂನು ಕಟ್ಟಳೆಗಳನ್ನು ಪಾಲನೆ ಮಾಡುವುದರೊಂದಿಗೆ ಅಹಿತಕರ ಘಟನೆಗಳಿಗೆ ಅನುವು ಮಾಡಿಕೊಡದೆ ಸಾಮರಸ್ಯದ ಹಬ್ಬವಾಗಿ ಆಚರಣೆ ಆಗಲಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಕರೆ ನೀಡಿದರು. ವಿರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ, ವಿರಾಜಪೇಟೆ ನಗರ ಐತಿಹಾಸಿಕ ಜನೋತ್ಸವ ಸಮಿತಿ ಸಭೆಯಲ್ಲಿ ಈ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಪೊನ್ನಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷ ಅದ್ದೂರಿಯಿಂದ ಆಚರಿಸಲ್ಪಡುವ ಶ್ರೀ ಗಣೇಶೋತ್ಸವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ಹಲವು ಸಲಹೆ ಸೂಚನೆಗಳನ್ನು ನೀಡಿದರು. ಅತೀ ಮುಖ್ಯವಾಗಿ ಪರಿಸರ ಕಾಳಜಿಯೊಂದಿಗೆ ಈ ಗಣೇಶೋತ್ಸವವನ್ನು ಆಚರಿಸುವಂತೆ ಸಲಹೆ ನೀಡಿದ ಶಾಸಕರು, ಪ್ರಕೃತಿಗೆ ಹಾನಿಕಾರವಾದ, ಪ್ರಾಣಿ-ಪಕ್ಷಿಗಳಿಗೆ ಹಾಗೂ ಪರಿಸರಕ್ಕೆ ಮಾರಕವಾಗಬಹುದಾದಂತಹ ಯಾವುದೇ ಬಣ್ಣವಾಗಲಿ, ಪೇಪರ್ ವಸ್ತುಗಳನ್ನಾಗಲಿ ಬಳಸದೇ ಗಣೇಶೋತ್ಸವವನ್ನು ಆಚರಿಸೋಣ ಎಂದರು. ನಾಡಿನ ಪರಂಪರೆ, ಸಂಸ್ಕೃತಿ ಹಾಗೂ ಕಲೆಯನ್ನು ಪೆÇ್ರೀತ್ಸಾಹಿಸುವಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವ ವಿರಾಜಪೇಟೆ ನಗರ ಐತಿಹಾಸಿಕ ಜನೋತ್ಸವ ಸಮಿತಿಯ ಕೆಲಸ ಕಾರ್ಯಗಳನ್ನು ಮತ್ತಷ್ಟು ಅದ್ದೂರಿಯಾಗಿ ಮಾಡುವ ಸಲಹೆ ನೀಡಿದ ಶಾಸಕರು, ತನ್ನ ವ್ಯಾಪ್ತಿಯಲ್ಲಿ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಉತ್ಸವದ ಶೋಭಾಯಾತ್ರೆಯಲ್ಲಿ ಮಂಟಪಗಳು ಚಲಿಸುವ ಮುಖ್ಯ ರಸ್ತೆ ಒಳಗೊಂಡಂತೆ ಗುಂಡಿ ಬಿದ್ದ ನಗರದ ರಸ್ತೆಗಳನ್ನು ದುರಸ್ತಿ ಪಡಿಸುವುದು ಸೇರಿದಂತೆ ಪಟ್ಟಣದಲ್ಲಿ ಮತ್ತು ಗಡಿಯಾರಕಂಬಕ್ಕೆ ವಿದ್ಯುತ್ ಅಲಂಕಾರ ಮಾಡುವಂತೆ ಮುಖ್ಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆiÀುನ್ನು ನೀಡಿದರು. ಅಬ್ಬರದ ಡಿಜೆ ಶಬ್ದದಿಂದ ಹಿರಿಯರು ಮತ್ತು ಪುಟ್ಟ ಮಕ್ಕಳಿಗೆ ಅಪಾಯವಾಗುವ ಸಾಧ್ಯತೆಗಳಿರುತ್ತದೆ ಜೊತೆಗೆ ಸುಂದರ ಪರಿಸರ ಹೊಂದಿರುವ ಕೊಡಗಿನಲ್ಲಿ ಪರಿಸರ ಮಾಲಿನ್ಯವಾಗದಂತೆ ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಉತ್ಸವದ ಸಂದರ್ಭ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಶಾಂತಿಯೊಂದಿಗೆ ಹಬ್ಬ ಆಚರಿಸಲು ಸಹಕರಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಹಾಜರಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರಘುರಾಮ್ ಅವರು ಮಾತನಾಡಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶ ಪಾಲಿಸುವ ಮೂಲಕ ಪರಿಸರವನ್ನು ಕಾಪಾಡಬೇಕಿದೆ ಡಿಜೆ ಶಬ್ದ ಮಾಲಿನ್ಯಕ್ಕೆ ಕಡಿವಾನ ಹಾಕುವಂತೆ ಮನವಿ ಮಾಡಿದರು, ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ನಿರ್ಮಿಸಿದ ಗಣಪನ ವಿಗ್ರಹಗಳನ್ನು ಉತ್ಸವದಲ್ಲಿ ಬಳಸದಂತೆ ಕೋರಿಕೊಂಡರು. ಬದಲಾಗಿ ಪರಿಸರಕ್ಕೆ ಪೂರಕವಾದ ನೈಸರ್ಗಿಕ ಬಣ್ಣ ಮತ್ತು ಮಣ್ಣಿನ ಗಣಪ ಬಳಸುವಂತೆ ತಿಳಿಸಿದರು. ಪೆÇಲೀಸ್ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ ಮಾತನಾಡಿ, ಪೆÇಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ಇಲಾಖೆಯಿಂದ ಸಮಿತಿಗಳೊಂದಿಗೆ ಸಭೆ ನಡೆಸಲಾಗಿದೆ. ಸಮಿತಿಗಳು ಕಾನೂನಿನ ನಿಯಮ ಪಾಲನೆ ಮಾಡಬೇಕು ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಸೌಹಾರ್ದತೆಯಿಂದ ಆಚರಿಸಿ ಶಾಂತಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದರು. ಐತಿಹಾಸಿಕ ಜನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಬರೀಶ್ ಶೆಟ್ಟಿ ಮಾತನಾಡಿ, ವೀರಾಜಪೇಟೆ ನಗರದ ಐತಿಹಾಸಿಕ ಗೌರಿ ಗಣೇಶ ಹಬ್ಬವೂ ಎಂದಿನಂತೆ ಅದೇ ಹಳೆ ವೈಭವದೊಂದಿಗೆ ನಡೆಯಲಿದೆ. ವಿರಾಜಪೇಟೆಯಲ್ಲಿ ಹಿಂದಿನಿಂದಲು ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವ ಗೌರಿ-ಗಣೇಶೋತ್ಸವವನ್ನು ಎಲ್ಲಾರ ಸಹಕಾರದಿಂದ ಯಾವುದೇ ಅಡೆತಡೆ ಇಲ್ಲದೆ ಅದ್ದೂರಿಯಾಗಿ ಆಚರಿಸುವಂತಾಗಬೇಕು. ಯಾವುದೇ ಗೊಂದಲಗಳು ಬೇಡ ಈಗಾಗಲೇ ಶಾಸಕರು ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಹಬ್ಬದ ಸಂದರ್ಭಕ್ಕೆ ಆಗಬೇಕಾದ ವ್ಯವಸ್ಥೆಗಳಿಗೆ ಬೇಕಾದ ಸಿದ್ಧತೆಗಳಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಉಳಿದಂತೆ ಜನೋತ್ಸವ ಸಮಿತಿ ವತಿಯಿಂದಲೂ ಹಬ್ಬದ ರಂಗು ಹೆಚ್ಚಿಸಲು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ ಎಂದರು. ಪ್ರಮುಖರಾದ ಟಿ.ಪಿ.ಕೃಷ್ಣ ಮಾತನಾಡಿ ಇಲಾಖೆಯಿಂದ ವಿಪರೀತ ನಿಯಮ ನಿಬಂಧನೆಗಳು ಸುಪ್ರಿಂಕೋರ್ಟ್ ರಾಜ್ಯ ಉಚ್ಚನ್ಯಾಯಾಲಯ ಏನೇ ತೀರ್ಪು ನೀಡಿದ್ದರು ಒತ್ತಾಯವಾಗಿ ಹೇರಿಕೆ ಬೇಡ. ವಿರಾಜಪೇಟೆಯಲ್ಲಿ ಗೌರಿ-ಗಣೇಶೋತ್ಸವ ಶತಮಾನಗಳಿಂದ ಶಾಂತಿಯುತವಾಗಿ ಸೌರ್ಹಾದತೆಯಿಂದ ಆಚರಿಸಲಾಗುತ್ತಿದೆ. ಜನರ ಆಚಾರ ವಿಚಾರಗಳಿಗೆ ಇಂತಹ ಕಟ್ಟುನಿಟ್ಟಿನ ಕಾನೂನುಗಳನ್ನು ಹೇರಿದರೆ ಹಬ್ಬವನ್ನು ಆಚರಿಸುವುದಾರು ಹೇಗೆ. ಆಚರಣೆಗೆ ಮುಕ್ತ ಅವಕಾಶ ಇರಲಿ. ಸಮಿತಿಗಳಿಗೆ ಹೊರೆಯಾಗದಂತೆ ಶಾಸಕರು ಹಾಗೂ ಜನೋತ್ಸವ ಸಮಿತಿ ಅಧ್ಯಕ್ಷರು ಗಮನ ಹರಿಸಿ ಕ್ರಮ ಕೈಗೊಳ್ಳಬೇಕೆಂದರು. ಬಸವೇಶ್ವರ ದೇವಾಲಯ ಗೌರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರವಿಂದ್ರ ಕಾಮತ್, ಸೇರಿದಂತೆ ಮತ್ತಿತರರು ಸಭೆಯನ್ನು ಉದ್ದೇಶಸಿ ಮಾತನಾಡಿದರು. ಸಭೆಯಲ್ಲಿ ತಹಶೀಲ್ದಾರ್ ಪ್ರವೀಣ್, ಪುರಸಭೆ ಮುಖ್ಯಾಧಿಕಾರಿ ಹಾಗೂ ಜನೋತ್ಸವ ಸಮಿತಿ ಕಾರ್ಯದರ್ಶಿ ನಾಚಪ್ಪ, ಪುರಸಭೆ ಉಪಾಧ್ಯಕ್ಷರಾದ ಫಸಿಯಾ ತಬ್ಸುಂ, ಸ್ಥಾಯಿ ಸಮಿತಿ ಅಧ್ಯಕ್ಷ ಜಲೀಲ್, ಪುರಸಭೆಯ ಸದಸ್ಯ ರಜನಿಕಾಂತ್, ಜೂನಾ ಸುನೀತ, ಲೋಕೊಪಯೋಗಿ ಸಹಾಯಕ ಅಭಿಯಂತರ ಸತೀಶ್, ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್, ಪೋಲಿಸ್ ಇಲಾಖೆ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್, ನಗರದ 22 ಉತ್ಸವ ಸಮಿತಿಯ ಪದಾಧಿಕಾರಿಗಳು, ಹಾಗೂ ಪ್ರಮುಖರು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಈಶಾನ್ವಿ








