ಮಡಿಕೇರಿ ಆ.21 NEWS DESK : ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಏರಿಕೆಯಾಗಿದ್ದರೂ ಕೊಡಗಿನ ಕಾಫಿ ಬೆಳೆಗಾರರಿಗೆ ಸೂಕ್ತ ಬೆಲೆ ಸಿಗದೆ ಅನ್ಯಾಯವಾಗುತ್ತಿದೆ. ಅಂತರಾಷ್ಟ್ರೀಯ ಬೆಲೆಗೆ ಅನುಗುಣವಾಗಿ ಸೂಕ್ತ ಬೆಲೆಯನ್ನು ನೀಡದ ಕಾಫಿ ಖರೀದಿದಾರರ ಪರವಾನಗಿಯನ್ನು ಜಿಲ್ಲೆಯ ಗ್ರಾ.ಪಂ ಗಳ ಮಟ್ಟದಲ್ಲಿ ರದ್ದುಗೊಳಿಸುವ ಅನಿವಾರ್ಯತೆ ಇದೆ ಎಂದು ಮಾಯಮುಡಿ ಗ್ರಾ.ಪಂ ಅಧ್ಯಕ್ಷ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾಫಿ ಖರೀದಿ ಮಾಡುವ ರಫ್ತುದಾರರು ಹಾಗೂ ಮಧ್ಯವರ್ತಿಗಳಿಂದ ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ. ಅಂತರಾಷ್ಟ್ರೀಯ ಬೆಲೆಗೆ ಅನುಗುಣವಾಗಿ ಬೆಲೆ ನಿಗದಿ ಮಾಡದವರ ಪರವಾನಗಿಯನ್ನು ರದ್ದು ಮಾಡುವ ಕುರಿತು ಆಯಾ ಗ್ರಾ.ಪಂ ಗಳು ಚಿಂತನೆ ನಡೆಸಬೇಕಾಗಿದೆ ಮತ್ತು ಬೆಳೆಗಾರರ ಹಿತ ಕಾಯಬೇಕಾಗಿದೆ ಎಂದು ಹೇಳಿದ್ದಾರೆ. ಹಲವು ಸಂಕಷ್ಟಗಳ ನಡುವೆಯೂ ಕಾಫಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಸಣ್ಣ ಮತ್ತು ಮಧ್ಯಮ ಬೆಳೆಗಾರರು ಕಾಫಿ ಧಾರಣೆಯಲ್ಲಿ ಚೇತರಿಕೆ ಕಾಣುವುದನ್ನೇ ಎದುರು ನೋಡುತ್ತಿದ್ದರು. ಆದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಯಾದರೂ ಅದಕ್ಕೆ ಸರಿಯಾಗಿ ಇಲ್ಲಿ ಕಾಫಿಗೆ ಬೆಲೆ ನಿಗಧಿ ಮಾಡದ ಕಾರಣ ಬೆಳೆಗಾರರು ನಿರಾಶೆ ಮತ್ತು ಆತಂಕಕ್ಕೆ ಒಳಗಾಗಿದ್ದಾರೆ. ಬೆಳೆಗಾರರಿಗೆ ಅನ್ಯಾಯ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲೆಯ ಎಲ್ಲಾ ಬೆಳೆಗಾರರ ಸಹಕಾರದೊಂದಿಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ. ಕೊಡಗಿನ ಜೀವಾಳವಾಗಿರುವ ಕಾಫಿಯನ್ನೇ ನಂಬಿ ಬೆಳೆಗಾರರು ಮಾತ್ರವಲ್ಲದೆ, ಕೂಲಿ ಕಾರ್ಮಿಕರ ಕುಟುಂಬಗಳು ಕೂಡ ಜೀವನ ಸಾಗಿಸುತ್ತಿವೆ. ಬೆಳೆಗಾರರು ಹಾಗೂ ಕಾರ್ಮಿಕರಿಗೆ ನ್ಯಾಯ ಸಿಗಬೇಕಾದರೆ ಅಂತರಾಷ್ಟ್ರೀಯ ಬೆಲೆಗೆ ಅನುಗುಣವಾಗಿ ಕಾಫಿಗೆ ಸೂಕ್ತ ಬೆಲೆಯನ್ನು ನೀಡಬೇಕು ಎಂದು ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ಒತ್ತಾಯಿಸಿದ್ದಾರೆ.











