
ಮಡಿಕೇರಿ ಆ.22 NEWS DESK : ಮಡಿಕೇರಿ ತಾಲ್ಲೂಕಿನ ಮುಕ್ಕೋಡ್ಲು ಗ್ರಾಮದಲ್ಲಿ ವೃದ್ಧ ದಂಪತಿಯ ತೋಟವನ್ನು ನಾಶ ಮಾಡಿದ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿರುವ ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಅವರು, ಅರಣ್ಯ ಇಲಾಖೆಯ ವಿರುದ್ಧ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾನೂನು ಉಲ್ಲಂಘಿಸಿ ವೃದ್ಧ ದಂಪತಿಯ ತೋಟವನ್ನು ನಾಶ ಮಾಡುವ ಮೂಲಕ ಅರಣ್ಯ ಇಲಾಖೆ ಅಮಾನುಷವಾಗಿ ನಡೆದುಕೊಂಡಿದೆ. ತೋಟದಲ್ಲಿ ಬೆಳೆಯಲಾಗಿದ್ದ ಕಾಫಿ, ಏಲಕ್ಕಿ ಮತ್ತಿತರ ಗಿಡಗಳನ್ನು ಯಾವುದೇ ನೋಟಿಸ್ ನೀಡದೆ ಕಡಿದು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಕಾಳಚಂಡ ನಾಣಿಯಪ್ಪ ಅವರು ಕಳೆದ 50 ವರ್ಷಗಳಿಂದ ಪೈಸಾರಿ ಭೂಮಿಯಲ್ಲಿ ಕೃಷಿ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ಆದರೆ ಅರಣ್ಯ ಇಲಾಖೆ ತನಗೆ ಸೇರಿದ ಭೂಮಿ ಎಂದು ಕಾರ್ಯಾಚರಣೆ ನಡೆಸಿದೆ. ಜಾಗದ ಒಡೆತನದ ಕುರಿತು ಗೊಂದಲಗಳಿದ್ದರೆ ನೋಟಿಸ್ ನೀಡಲು ಮತ್ತು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಲು ಅವಕಾಶವಿತ್ತು. ಆದರೆ ಅರಣ್ಯ ಅಧಿಕಾರಿಗಳು ಕಾನೂನು ವ್ಯಾಪ್ತಿಯಲ್ಲಿ ಕ್ರಮಕ್ಕೆ ಮುಂದಾಗದೆ ಏಕಾಏಕಿ ದಾಳಿ ಮಾಡಿ ಆತಂಕ ಸೃಷ್ಟಿಸಿರುವುದು ಅರಣ್ಯ ಇಲಾಖೆಯ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಣಿಯಪ್ಪ ಅವರು ಈಗಾಗಲೇ ತೋಟದ ಜಾಗವನ್ನು ಸಕ್ರಮಗೊಳಿಸಿಕೊಳ್ಳಲು ಸರಕಾರಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಅಲ್ಲದೆ 30 ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡುವ ಸರಕಾರದ ನೂತನ ಯೋಜನೆಯಡಿಯೂ ಅರ್ಜಿಯನ್ನು ನೀಡಿದ್ದಾರೆ. ಇದು ಯಾವುದನ್ನೂ ಪರಿಗಣಿಸದೆ ಅರಣ್ಯ ಇಲಾಖೆ ಕಾನೂನು ಮೀರಿ ದಬ್ಬಾಳಿಕೆ ನಡೆಸಿರುವುದು ಖಂಡನೀಯ. ಫಸಲು ಬರುತ್ತಿದ್ದ ಗಿಡಗಳನ್ನು ಕಳೆದುಕೊಂಡ ವೃದ್ಧ ದಂಪತಿಗೆ ಅರಣ್ಯ ಇಲಾಖೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಮತ್ತು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿರುವ ಮನು ಮುದ್ದಪ್ಪ ಅವರು, ತಪ್ಪಿದಲ್ಲಿ ರೈತಪರ ಸಂಘಟನೆಗಳು ನಡೆಸುವ ಎಲ್ಲಾ ಹೋರಾಟಗಳಿಗೆ ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ. ಕಳೆದ ನೂರಾರು ವರ್ಷಗಳಿಂದ ಕೊಡಗಿನ ಜನ ಅಕ್ಕಪಕ್ಕದ ಪೈಸಾರಿ ಜಾಗವನ್ನು ಬಳಸಿಕೊಂಡು ಜೀವನೋಪಾಯಕ್ಕಾಗಿ ಕೃಷಿ ಮಾಡುತ್ತಿದ್ದಾರೆ ಹಾಗೂ ದನ ಕರುಗಳಿಗೆ ಮೇವು ಮತ್ತು ನೀರನ್ನು ಬಳಸಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಯಾರೂ ಈ ಜೀವನ ಕ್ರಮಕ್ಕೆ ಅಡ್ಡಿಪಡಿಸಿರಲಿಲ್ಲ, ಆದರೆ ಇತ್ತೀಚೆಗೆ ಅರಣ್ಯ ಇಲಾಖೆ ಜಿಲ್ಲೆಯ ಕೃಷಿಕರ ಭಾವನೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ದಿಢೀರ್ ಕಾರ್ಯಾಚರಣೆಯ ಮೂಲಕ ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ. ಇದನ್ನು ಕೊಡಗಿನ ರೈತಾಪಿ ವರ್ಗ ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಮುಕ್ಕೋಡ್ಲು ಗ್ರಾಮದ ವೃದ್ಧ ದಂಪತಿಯ ತೋಟ ನಾಶದ ಪ್ರಕರಣದ ಕುರಿತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕರಾದ ಡಾ.ಮಂತರ್ ಗೌಡ ಅವರ ಗಮನ ಸೆಳೆದು ಕ್ರಮಕ್ಕೆ ಒತ್ತಾಯಿಸುವುದಾಗಿ ಹೇಳಿದ್ದಾರೆ.









