


ಮಡಿಕೇರಿ ಆ.25 NEWS DESK : ಮಡಿಕೇರಿ ನಗರ ಯುವ ದಸರಾ ಸಮಿತಿ ವತಿಯಿಂದ ಆಯೋಜಿಸುವ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗೆ ಸೆ.6 ರಂದು ತಂಡಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಯುವ ದಸರಾ ಸಮಿತಿಯ ಅಧ್ಯಕ್ಷ ಕವನ್ ಕೊತ್ತೋಳಿ ತಿಳಿಸಿದ್ದಾರೆ. ನಗರದ ಹೊಟೇಲ್ ರಾಜ್ ದರ್ಶನ್ ಸಭಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಯ್ಕೆಯಾದ ತಂಡಗಳ ನಡುವೆ ಸೆ.27 ರಂದು ನಗರದ ಗಾಂಧಿ ಮೈದಾನದ ವೇದಿಕೆಯಲ್ಲಿ ಸ್ಪರ್ಧೆಯನ್ನು ಆಯೋಜಿಸುವುದಾಗಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಇದು ರಾಜ್ಯ ಮಟ್ಟದ ಸ್ಪರ್ಧೆಯಾಗಿದ್ದು, ಸ್ಪರ್ಧಿಗಳು ಶಾಸ್ತ್ರೀಯ ಪ್ರಕಾರ ಹಾಗೂ ದೇವರಿಗೆ ಸಂಬಂಧಪಟ್ಟ ಪ್ರಕಾರವನ್ನು ಹೊರತುಪಡಿಸಿ ಇತರೆ ಯಾವುದೇ ಪ್ರಕಾರವನ್ನು ಆಯ್ದುಕೊಳ್ಳಬಹುದು. ಸ್ಪರ್ಧೆಗೆ ವಯೋಮಿತಿಯ ನಿರ್ಬಂಧವಿಲ್ಲ, ತಂಡವು ಕನಿಷ್ಠ 12 ಹಾಗೂ ಗರಿಷ್ಟ 30 ಮಂದಿ ಕಲಾವಿದರನ್ನು ಹೊಂದಿರಬೇಕು. ನೃತ್ಯಗಳು ಸಾಮಾಜಿಕ ಪರಿಕಲ್ಪನೆ ಹಾಗೂ ಸಂದೇಶಗಳನ್ನು ಹೊಂದಿರಬೇಕು.
ಹಾಡಿನ ಭಾಷೆ ಹಾಗೂ ಉಡುಗೆ ತೊಡುಗೆಗಳು ಸಭ್ಯವಾಗಿರಬೇಕು, ಯಾರ ನಂಬಿಕೆ ಹಾಗೂ ಭಾವನೆಗೆ ನೋವುಂಟು ಮಾಡಬಾರದು. 10+2 ನಿಮಿಷ ಕಾಲಾವಕಾಶ ಕಲ್ಲಿಸಲಾಗಿದ್ದು, ಬೆಂಕಿ, ಬಣ್ಣ, ನೀರು ಇತರ ಯಾವುದೇ ಹಾನಿ ಉಂಟುಮಾಡುವ ಪರಿಕರಗಳನ್ನು ಬಳಸುವಂತಿಲ್ಲ. ಸ್ಪರ್ಧಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ತರುವಂತೆ ಕವನ್ ಕೊತ್ತೋಳಿ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ಕವನ್ ಕೊತ್ತೋಳಿ 9741292825 ಹಾಗೂ ಲೀನೆಶ್ 9986619262 ನ್ನು ಸಂಪರ್ಕಿಸಬಹುದಾಗಿದೆ.









