
ಮಡಿಕೇರಿ ಸೆ.8 NEWS DESK : ಸಮಾನತೆ ಮತ್ತು ಮೌಲ್ಯವನ್ನು ಬೋಧಿಸಿದ ಮಹಾಸಂತ ನಾರಾಯಣ ಗುರುಗಳು ಎಂದು ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು. ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು, ಒಂದು ಸಂದೇಶ ಎಂಬುವುದು ಎಂದಿಗೂ ಜೀವಂತ. ತತ್ವಜ್ಞಾನ ಮತ್ತು ಸಮಾಜ ಸುಧಾರಣೆಗಾಗಿ ನಾರಾಯಣ ಗುರು ಅವರು ಶ್ರಮಿಸಿದ್ದಾರೆ ಎಂದು ಉಪ ವಿಭಾಗ ಅಧಿಕಾರಿ ಹೇಳಿದರು. ಕರ್ನಾಟಕ ರೇಷ್ಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ, ನಾರಾಯಣ ಗುರುಗಳು ಕೇರಳದ ತಿರುವನಂತಪುರ ಬಳಿಯ ಚೆಂಬಳಂತಿ ಎಂಬ ಗ್ರಾಮದಲ್ಲಿ ಜನಿಸಿದರು ಎಂದು ತಿಳಿಸಿದರು. ಕೇರಳ ರಾಜ್ಯದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ‘ನಾರಾಯಣ ಗುರು ಅವರು ಒಬ್ಬ ಸಮಾಜದ ಸುಧಾರಕ ಉದಯಿಸಿ, ಸಮಾಜದ ತಾರತಮ್ಯ ಹೋಗಲಾಡಿಸಲು ಪ್ರಯತ್ನಿಸಿದರು ಎಂದರು. ಸಮಾನತೆಯ ಸಮಾಜ ನಿರ್ಮಾಣಕ್ಕೆ ಇಡೀ ಜೀವನವನ್ನು ಮುಡಿಪಾಗಿಟ್ಟ ನಾರಾಯಣ ಗುರು ಅವರು, ಅವರ ತತ್ವ, ಸಿದ್ದಾಂತ ಹಾಗೂ ಪ್ರತಿಪಾದಿಸಿದ ಸಂದೇಶಗಳು ಇಡೀ ಸಮಾಜಕ್ಕೆ ಮಾದರಿ ಎಂದು ಟಿ.ಪಿ.ರಮೇಶ್ ಅವರು ನುಡಿದರು. ದುರ್ಬಲರಿಗೆ ಆಸ್ಪತ್ರೆ, ಶಾಲೆ, ಶಿಕ್ಷಣ, ದೇವಾಲಯಗಳನ್ನು ಸ್ಥಾಪಿಸಲು ಶಕ್ತಿಯುತವಾಗಿ ನಿಂತರು ಎಂದು ತಿಳಿಸಿದರು. ಬಿಲ್ಲವ ಸಮಾಜ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷರಾದ ಬಿ.ಎಸ್.ಲೀಲಾವತಿ ಮಾತನಾಡಿ, ವಿದ್ಯೆಯಿಂದ ಸ್ವತಂತ್ರರಾಗಿರಿ ಮತ್ತು ಸಂಘಟನೆಯಿಂದ ಬಹೀನರಾಗಿರಬೇಕು ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ನಿಷ್ಠೆ ಪರಿಪಾಲಿಸಿ ಎಂದರು. ಬಿಲ್ಲವ ಸಮಾಜದ ಜಿಲ್ಲಾಧ್ಯಕ್ಷರು ಹಾಗೂ ನಿವೃತ್ತ ಪೊಲೀಸ್ ಉಪ ಅಧೀಕ್ಷಕರಾದ ಬಿ.ಆರ್.ಲಿಂಗಪ್ಪ, ಮಾತನಾಡಿ
ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಪಾಲನೆ ಮಾಡುವುದರಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು. ನಾರಾಯಣ ಗುರು ಅವರು ಹಿಂದುಳಿದ ವರ್ಗಗಳಿಗೆ ಸಮಾನತೆ ಹಕ್ಕನ್ನು ತಂದು ಕೊಟ್ಟಿದ್ದಾರೆ ಎಂದು ಹೇಳಿದರು. ಪ್ರಮುಖರಾದ ದಿವಾಕರ, ಹಿಂದುಳಿದ ವರ್ಗದ ತಾಲೂಕು ಅಧಿಕಾರಿ ಮೋಹನ್ ಕುಮಾರ್, ಸಿಂಚನ ಇತರರು ಇದ್ದರು. ಬ್ರಹ್ಮಶ್ರೀ ನಾರಾಯಣ ಗುರು ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಅವರು ಸ್ವಾಗತಿಸಿದರು. ಮಣಜೂರು ಮಂಜುನಾಥ್ ಅವರು ನಿರೂಪಿಸಿ ವಂದಿಸಿದರು. ಆಚಾರ್ಯ ನಾಡಗೀತೆ ಹಾಡಿದರು.









