
ಮಡಿಕೇರಿ ಸೆ.9 NEWS DESK : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಘಟಕದ ಪದಗ್ರಹಣ ಕಾರ್ಯಕ್ರಮ ನಡೆಯಿತು. ವಿರಾಜಪೇಟೆಯ ಪ್ರಗತಿ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ಉದ್ಘಾಟಿಸಿ, ಮಾತನಾಡಿ, ಮಕ್ಕಳು ಸಮಾಜದ ಭವಿಷ್ಯದ ಆಸ್ತಿಯಾಗಿದ್ದು, ಅವರನ್ನು ಸಮರ್ಥ ಮತ್ತು ಸ್ವಚ್ಛ ಸಮಾಜ ನಿರ್ಮಾಣದಲ್ಲಿ ಉತ್ತಮ ಪ್ರಜೆಗಳಾಗಿ ರೂಪಿಸಲು ಎಲ್ಲರೂ ಕೈಜೋಡಿಸಬೇಕು ಎಂದರು. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲೆಯಲ್ಲೂ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿದ್ದು ಶ್ಲಾಘನೀಯ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸಂಘಟನೆಯು ನಡೆಸುವ ಸೃಜನಾತ್ಮಕ ಮಕ್ಕಳ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಲ್ಲದೆ, ಸರ್ಕಾರದಿಂದ ಅನುದಾನ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಅತ್ಯಂತ ಪ್ರಾಮಾಣಿಕ ಮತ್ತು ನೈಜತೆಗೆ ಹತ್ತಿರವಾಗಿ ಮಕ್ಕಳ ಸೇವೆಯನ್ನು ಮಾಡುತ್ತಿರುವ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಅತ್ಯಂತ ಉನ್ನತ ಸ್ಥಾನಕ್ಕೆ ಬೆಳೆಯಬೇಕು ಮತ್ತು ಸರ್ಕಾರ ಇಂತಹ ಸಂಘಟನೆಗಳಿಗೆ ಹೆಚ್ಚಿನ ಅನುದಾನವನ್ನು ನೀಡಿ, ಮಕ್ಕಳ ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆಗಳನ್ನ ಹೊರಹಾಕಲು ಪ್ರೇರೇಪಿಸಬೇಕು ಎಂದು ಹೇಳಿದರು. ಅರಣ್ಯ ಇಲಾಖೆಯ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ರೂಪಿಸಲು ಯೋಜನೆ ಹಾಕಿಕೊಳ್ಳುವುದಾಗಿ ತಿಳಿಸಿದರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸಿದ್ದೇಶ್ ಮಾತನಾಡಿ, ಸಂಘಟನೆ ಬೆಳೆದು ಬಂದ ಹಾದಿ ಮತ್ತು ಕೊಡಗಿನಲ್ಲಿ ಈ ಸಂಘಟನೆ ಅಸ್ತಿತ್ವದ ಅವಶ್ಯಕತೆಯ ಬಗ್ಗೆ ವಿವರಿಸಿದರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಪ್ರಾಸ್ತವಿಕವಾಗಿ ಮಾತನಾಡಿ, ಕೊಡಗಿನಲ್ಲಿ ಸಾಹಿತ್ಯ ಲೋಕ ನಡೆದು ಬಂದ ಹಾದಿ ಮತ್ತು ಕೊಡಗು ಜಿಲ್ಲೆಗೆ ಮಕ್ಕಳ ಸಾಹಿತ್ಯ ಪರಿಷತ್ನ ಅನಿವಾರ್ಯತೆಯ ಬಗ್ಗೆ ವಿವರಿಸಿದರು. ಪ್ರಗತಿ ಶಾಲೆಯ ಮುಖ್ಯ ಶಿಕ್ಷಕಿ ಪ್ರತಿಮಾ ಅವರು ಸಂಘಟನೆಗೆ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಪರಿಸರ ಪ್ರಶಸ್ತಿ ವಿಜೇತ ಸಿ.ಎನ್.ಅಶೋಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿಗಳಾದ ಸಚಿನ್, ಕೊಡಗು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕರಿನೆರವಂಡ ಡ್ಯಾನಿ ಕುಶಾಲಪ್ಪ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷೆ ಮುಕ್ಕಾಟಿರ ಕಾವೇರಮ್ಮ ಕರುಂಬಯ್ಯ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಪಾಲೆರ ಮಂದಣ್ಣ, ಪೊನ್ನಂಪೇಟೆ ತಾಲ್ಲೂಕು ಅಧ್ಯಕ್ಷ ವಿನೋದ್ ಮೋಡಗದ್ದೆ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಅಪ್ಪುಡ ಸುದೀಶ್ ಕುಶಾಲಪ್ಪ, ಕುಶಾಲನಗರ ತಾಲ್ಲೂಕು ಅಧ್ಯಕ್ಷೆ ಚೈತನ್ಯ ಸಿ.ಮೋಹನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ಕುಶಾಲನಗರದ ತ್ರ್ಷ್ಯ ಪೊನ್ನೆಟ್ಟಿ ಪ್ರಾರ್ಥಿಸಿದರು, ಮಡಿಕೇರಿ ತಾಲೂಕಿನ ಪ್ರಧಾನ ಕಾರ್ಯದರ್ಶಿ ಹರ್ಷಿತ ಶೆಟ್ಟಿ ಮನವಳಿಕೆಗುತ್ತು ಸ್ವಾಗತಿಸಿದರು, ವಿರಾಜಪೇಟೆಯ ಕಣಿಯರ ಕೌಶಲ್ಯ ಹರೀಶ್ ನಿರೂಪಿಸಿದರು. ಪೊನ್ನಂಪೇಟೆ ತಾಲ್ಲೂಕು ಅಧ್ಯಕ್ಷರಾದ ವಿನೋದ್ ಮೂಡಗದ್ದೆ ವಂದಿಸಿದರು. ಕೇಂದ್ರ ಸಮಿತಿ ವತಿಯಿಂದ ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಯಪ್ಪ ಅವರಿಗೆ ಅಧಿಕೃತ ಆದೇಶ ಪತ್ರದೊಂದಿಗೆ ಸನ್ಮಾನಿಸಿ, ಅಧಿಕಾರ ನೀಡಲಾಯಿತು. ನಂತರ ಜಿಲ್ಲಾ ಸಮಿತಿ ಮತ್ತು 5 ತಾಲ್ಲೂಕು ಸಮಿತಿಗಳ ಪದಗ್ರಹಣ ಮಾಡಲಾಯಿತು. ಪುಟಾಣಿಗಳಾದ ಯಶಸ್ವಿನಿ ನೀಲಮ್ಮ, ಕೆ.ಬಿ.ಭೋಜಮ್ಮ , ಕೆ.ಬಿ.ಭೂಮಿಕಾ, ಸಿ.ಜೆ.ವಿಹಾನಿ, ತಶ್ಮ, ರೀತು, ದೇವಿಕ, ವರ್ಷಿಣಿ, ಧೃತಿ, ತಶ್ವಿತ, ಕೆ.ಬಿ.ವಿಹಾನ್ ಅಯ್ಯಪ್ಪ, ಬಿ.ಆರ್.ಹರ್ಷಿತಾ, ಚೇಂದಿರ ದೀಪ್ತಿ ದೇಚಮ್ಮ, ಚೇಂದಿರ ದೀಕ್ಷಿತ್ ಬೋಪಣ್ಣ, ಚೇನಂಡ ರಕ್ಷಾ ಮುತ್ತಮ್ಮ, ಚಾಮೆರ ನಕ್ಷ ದೇಚಮ್ಮ, ದೃಶ್ಯ ಪೊನ್ನೇಟಿ, ತಷ್ಮಿತ, ಅಷ್ಮಿತ, ದೃಷ್ಟಿ ಕಾವೇರಮ್ಮ, ಟಿ.ವಿ.ಗಾಯತ್ರಿ, ಆರ್.ಸಾರಜಾಬ್ಸನ್., ಕೆ.ಎನ್.ತ್ರ್ಷ, ವೈ.ಕೆ.ನಿಧಿ, ಎಂ.ಆರ್.ನಿತಿನ್, ಎಂ.ಆರ್.ಯಶ್ವಂತ್, ಸಿ.ಎಸ್.ಶ್ರೀನಂದ, ಆರ್.ಆರ್.ಸಿಂಚನ, ಕೆ.ಬಿ,ರೇವತಿ ಹಾಡು, ನೃತ್ಯ, ಕವನ ವಾಚನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ರಂಜಿಸಿದರು.









