ಸೋಮವಾರಪೇಟೆ ಸೆ.10 NEWS DESK : ದುಷ್ಟರ ಸಂಹಾರಕ್ಕಾಗಿ ಅವತರಿಸಿದ ವೀರಭದ್ರ ಸ್ವಾಮಿಯಿಂದ ಲೋಕ ಕಲ್ಯಾಣವಾಯಿತೆಂದು ತಪೋಕ್ಷೇತ್ರ ಮನೆಹಳ್ಳಿ ಮಠದ ಶ್ರೀ ಮಹಾಂತಶಿವಲಿಂಗ ಸ್ವಾಮೀಜಿ ಹೇಳಿದರು. ತಾಲೂಕಿನ ತಪೋಕ್ಷೇತ್ರ ಮನೆಹಳ್ಳಿ ಮಠ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ವತಿಯಿಂದ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ವೀರಭದ್ರ ಸ್ವಾಮಿ ವರ್ಧಂತಿ ಮಹೋತ್ಸವದ ಅಂಗವಾಗಿ ನಡೆದ ಲಕ್ಷ ಬಿಲ್ವ ಹಾಗೂ ಪುಷ್ಪಾರ್ಚನೆ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ವರ್ಷದ ಮೊದಲಹಬ್ಬವಾದ ಗೌರಿ, ಗಣೇಶ ಚತುರ್ಥಿಗೂ ಮುನ್ನ ಶ್ರಾವಣ ಮಾಸದ ಬಳಿಕ ಬರುವ ಭಾದ್ರಪದ ಮಾಸದ ಮೊದಲ ಮಂಗಳವಾರ ವೀರಭದ್ರಸ್ವಾಮಿ ಅವತರಿಸಿದರೆದು ಪ್ರತೀತಿ ಇದೆ. ತನ್ನ ಸತಿಗೆ ಆದ ನೋವಿಗೆ ಪ್ರತಿಕಾರವಾಗಿ ಶಿವನು ವೀರಭದ್ರನ ಅವತರಿಸಲು ಕಾರಣೀಕರ್ತನಾದನು, ಉಗ್ರ ಸ್ವರೂಪಿಯಾದ ವೀರಭದ್ರನು ಅಂದಿನಿಂದ ಶಿಷ್ಟರ ರಕ್ಷಣೆ ಮಾಡುತ್ತಿದ್ದಾರೆ ಎಂದರು. ಕಳೆದ 7 ವರ್ಷಗಳಿಂದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯೊಂದಿಗೆ ಕ್ಷೇತ್ರದಲ್ಲಿ ಸ್ವಾಮಿಯ ವರ್ಧಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದ ಅವರು ಈ ಭಾರಿ ವಿಶೇಷವಾಗಿ ಲಕ್ಷ ಬಿಲ್ವಾರ್ಚನೆ, ಪುಷ್ಪಾರ್ಚನೆ ನಡೆಸಿದ್ದೇವೆ ಎಂದು ತಿಳಿಸಿದರು. ವರ್ಧಂತಿ ಅಂಗವಾಗಿ ಅರ್ಚಕರುಗಳಾದ ಹಿರೇಮಠ, ಮಲ್ಲೇಶ ಐನೂರು ಹಾಗೂ ಚಿಕ್ಕ ವೀರೇಶ್ ರವರುಗಳ ಪುತೋಹಿತ್ವದಲ್ಲಿ ತಪೋಕ್ಷೇತ್ರದ ವೀರಭದ್ರ ಸ್ವಾಮಿ, ಗುರುಸಿದ್ಧವೀರೇಶ್ವರ ಸ್ವಾಮಿ, ದೇವಿ ತಪೋವನೇಶ್ವರಿ, ಗಣಪತಿ ದೇವರಿಗೆ ವಿಶೇಷ ಪೂಜೆ, ಅರ್ಚನೆ ನಂತರ ಮಹಾಮಂಗಳಾರತಿ ನಡೆಯಿತು. ನಾಡಿನ ವಿವಿಧ ಭಾಗಗಳಿಂದ ಭಕ್ತಾದಿಗಳು ಪೂಜಾಕಾರ್ಯದಲ್ಲಿ ಪಾಲ್ಗೊಂಡು ಕೃತಾರ್ಥರಾದರು. ಪೂಜೆಯ ನಂತರ ದಾಸೋಹ ನೆರವೇರಿತು. ರಾತ್ರಿ ರಾತ್ರಿ ಮಂಗಳ ವಾದ್ಯಗೋಷಗಳೊಂದಿಗೆ ದೇವರ ಉತ್ಸವ ನಡೆಯಿತು. ಈ ಸಂದರ್ಭ ಅರಮೇರಿ ಕಳಂಚೇರಿ ಮಠದ ಶ್ರೀ.ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ, ಕಲ್ಲು ಮಠದ ಶ್ರೀ ಮಹಾಂತ ಸ್ವಾಮಿಜಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿಡಿಗಳಲೆ ಮಠದ ಶ್ರೀ ಇಮ್ಮಡಿಶಿವಲಿಂಗ ಸ್ವಾಮೀಜಿ, ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಚೀಲುಮೇ ಮಠದ ಶ್ರೀ ಜಯಾನಂದ ಸ್ವಾಮೀಜಿ ಹಾಜರಿದ್ದರು.











