ಮಡಿಕೇರಿ ಸೆ.11 NEWS DESK : ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರದ ವತಿಯಿಂದ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ “ಸ್ಥಳೀಯ ಆಡಳಿತದಲ್ಲಿ ಮಹಿಳಾ ನಾಯಕರ ಸಬಲೀಕರಣ” ನಾಲ್ಕು ದಿನದ ತರಬೇತಿಗೆ ಚಾಲನೆ ದೊರೆಯಿತು. ಕೊಡಗು ಜಿಲ್ಲಾ ಪಂಚಾಯತ್ ನಲ್ಲಿ ನಡೆಯುವ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ ಮುಖ್ಯ ಯೋಜನಾಧಿಕಾರಿ ಅಬ್ದುಲ್ ನಬಿ, ರಾಜಕೀಯವನ್ನು ಪ್ರವೇಶಿಸಿದ ನಂತರ ಪಂಚಾಯಿತಿ ಅಧ್ಯಕ್ಷರಾಗಿ ಸಾರ್ವಜನಿಕ ಅಭಿವೃದ್ಧಿಗೆ ಶ್ರಮಿಸಿ, ಉತ್ತಮ ಸೇವೆ ಆಡಳಿತ ನೀಡಬೇಕೆಂಬ ಹಂಬಲ ಮಹಿಳಾ ಚುನಾಯಿತ ಪ್ರತಿನಿಧಿಗಳಲ್ಲಿರುತ್ತದೆ. ಇವರಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ತಮ್ಮ ಅಧಿಕಾರದ ವ್ಯಾಪ್ತಿ, ನೀತಿ, ನಿರ್ಣಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಪಾರದರ್ಶಕ ಹಾಗೂ ಪ್ರಜಾಸತ್ತಾತ್ಮಕ ಆಡಳಿತ ನೀಡುವ ಕುರಿತು ಸೂಕ್ತ ತರಬೇತಿಯನ್ನು 4 ದಿನದ ತರಬೇತಿಯಲ್ಲಿ ಪಡೆದು ತಾಲೂಕು ಹಂತದಲ್ಲಿ ನೀಡಲು ಸೂಚಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು, ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಮಹಿಳಾ ನಾಯಕರ ಸಬಲೀಕರಣಕ್ಕಾಗಿ ನೀಡುತ್ತಿರುವ ತರಬೇತಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡು ಬದಲಾವಣೆಯ ಹರಿಕಾರರಾಗಲು ನಮಗೊಂದು ಉತ್ತಮ ಅವಕಾಶವನ್ನು ಸರ್ಕಾರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೀಡಿದ್ದು, ಮಹಿಳಾ ನಾಯಕರ ಜ್ಞಾನ, ಕೌಶಲ್ಯ ವರ್ತನೆಗಳಲ್ಲಿ ಬದಲಾವಣೆ ಮಾಡಲು ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು. ಪಂಚಾಯತ್ ರಾಜ್ಯ ವ್ಯವಸ್ಥೆ, ಪ್ರತಿನಿಧಿಗಳ ಪಾತ್ರಗಳು ಮತ್ತು ಜವಾಬ್ದಾರಿಗಳು ಮತ್ತು ಕೌಶಲ್ಯಗಳನ್ನು ನಾಯಕತ್ವ ಗುಣಗಳನ್ನು ಅರಿತು ಅರಿವು ಮೂಡಿಸೋಣ ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೋಮವಾರಪೇಟೆ ತಾಲೂಕಿನ ಮೇಲ್ವಿಚಾರಕರಾದ ಸಾವಿತ್ರವ್ವ ಮರಿಗೌಡರ್, ಜಿಲ್ಲಾ ಪಂಚಾಯಿತಿಯ ಮಂಜುಳಾ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರದ ಆಡಳಿತ ಸಹಾಯಕರಾದ ಸಿ.ಡಿ ಗಾಯತ್ರಿ ದೇವಿಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿದರು.











