


ಮಡಿಕೇರಿ ಸೆ.12 NEWS DESK : ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಮೈಸೂರು ತೋಟಗಾರಿಕೆ ಮಹಾವಿದ್ಯಾಲಯದ ಆವರಣದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳ ರೈತರಿಗೆ “ಬಾಳೆ ಕೃಷಿಯಲ್ಲಿ ಸುಧಾರಿತ ಉತ್ಪಾದನಾ ತಾಂತ್ರಿಕತೆಗಳು” ಕುರಿತು ತರಬೇತಿ ಹಾಗೂ ಕ್ಷೇತ್ರೋತ್ಸವವನ್ನು ಆಯೋಜಿಸಲಾಗಿತ್ತು. ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಜಿ.ಜನಾರ್ಧನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಕಾರ್ಯಕ್ರಮದಲ್ಲಿ ಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು, ಕೃಷಿಯತ್ತ ಅವರ ಒಲವನ್ನು ಬಿಂಬಿಸುತ್ತದೆ. ಇದು ಬಹಳ ಸಂತಸದ ವಿಷಯ ಎಂದು ಪ್ರಶಂಸಿದರು. ಬಾಳೆ ಬೆಳೆಯ ಎಲ್ಲಾ ಭಾಗವು ಉಪಯುಕ್ತವಾಗಿದು,್ದ ಬಾಳೆ ದಿಂಡಿನಿಂದ ಕೂಡ ಸಾಕಷ್ಟು ತಿನಿಸು ಹಾಗೂ ಕರಕುಶಲ ವಸ್ತುಗಳನ್ನು ಮಾಡಬಹುದಾಗಿದೆ. ಕೃಷಿಯಲ್ಲಿ ಸಾವಯವ ಹಾಗೂ ಜೈವಿಕ ಗೊಬ್ಬರಗಳ ಬಳಕೆ ಹೆಚ್ಚಿಸುತ್ತಾ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡುವುದು ಮಣ್ಣಿನ ಹಾಗೂ ಮಾನವನ ಆರೋಗ್ಯಕ್ಕೆ ಅತ್ಯವಶ್ಯಕ ಎಂದು ತಿಳಿಸಿದರು. ತಾಂತ್ರಿಕ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಡಾ. ಹೆಚ್.ಆರ್.ಮನುಕುಮಾರ್, ಬಾಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು ಮತ್ತು ಪೋಷಕಾಂಶಗಳ ನಿರ್ವಹಣೆಯ ಮಹತ್ವ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಡಾ.ಮಂಜುನಾಥ್ ಜಿ. ಅವರು ಬಾಳೆ ಕೃಷಿಯಲ್ಲಿ ಸಮಗ್ರ ರೋಗ ನಿರ್ವಹಣೆ ಹಾಗೂ ಜೈವಿಕ ಉತ್ಪನ್ನಗಳ ಮಹತ್ವ ಬಗ್ಗೆ ಪ್ರಸ್ತಾಪಿಸಿದರು. ಡಾ. ಜಿ.ಪಿ.ಮುತ್ತುರಾಜು, ಅವರು ಬಾಳೆ ಕೃಷಿಯಲ್ಲಿ ಸಮಗ್ರ ಕೀಟ ನಿರ್ವಹಣೆ ಹಾಗೂ ಡಾ.ಕೆ.ಚಂದನ್, ಬಾಳೆಯಲ್ಲಿ ಕೊಯ್ಲೋತ್ತರ ತಂತ್ರಜ್ಞಾನದ ಕುರಿತು ಮಾಹಿತಿ ನೀಡಿದರು. ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರಾದ ಡಾ.ತನ್ವೀರ್ ಅಹ್ಮದ್ ಹಾಗೂ ವಿಷಯ ತಜ್ಞರುಗಳಾದ ಡಾ.ಅರವಿಂದ ಕುಮಾರ್, ಜೆ.ಎಸ್., ಡಾ.ಶಿವಕುಮಾರ್ ಕೆ.ಎಂ., ಡಾ. ಮಮತಲಕ್ಷ್ಮಿ, ಎನ್. ಮತ್ತು ಡಾ.ಸಿದ್ದಪ್ಪ ಆರ್. ರೈತರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬಾಳೆ ಕೃಷಿಯ ಸಂಪೂರ್ಣ ಮಾಹಿತಿ ಬಗ್ಗೆ ಪರಸ್ಪರ ಚರ್ಚಿಸಿದರು. ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ ‘ಬಾಳೆಯ ವಿವಿಧ ತಳಿಗಳು, ರೋಗ ಹಾಗೂ ಕೀಟ ಭಾದಿತ ಮಾದರಿಗಳು, ಜೈವಿಕ ಉತ್ಪನ್ನಗಳು ಹಾಗೂ ಬಾಳೆಯ ಮೌಲ್ಯವರ್ಧಿತ ಪದಾರ್ಥಗಳನ್ನು ಪ್ರದರ್ಶಿಸಲಾಯಿತು. ಮಹಾವಿದ್ಯಾಲಯದ ಕ್ಷೇತ್ರದಲ್ಲಿ ಬಾಳೆಯ ಮಾದರಿ ತಾಕುಗಳನ್ನು ರೈತರು ವೀಕ್ಷಿಸಿದರು. ನಂತರ ಕಂದುಗಳ ಆಯ್ಕೆ ಮತ್ತು ಉಪಚಾರ, ಬಾಳೆ ಗೊನೆಗೆ ಪೋಷಕಾಂಶ ಉಪಚಾರ, ಮಣ್ಣು ಪರೀಕ್ಷೆ ಮಾದರಿ ತೆಗೆಯುವುದು, ಜೈವಿಕ ಉತ್ಪನ್ನಗಳ ಪುಷ್ಠೀಕರಣೆ, ಕಾಂಡ ಕೊರೆಯುವ ಹುಳುವಿನ ಹತೋಟಿಗೆ ಟ್ರ್ಯಾಪ್ ಬಳಕೆಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ರೈತರು ಪ್ರಾಯೋಗಿಕವಾಗಿ ತಿಳಿಯಲು ಅನುವು ಮಾಡಿಕೊಡಲಾಯಿತು.











