ಮಡಿಕೇರಿ ನ.6 NEWS DESK : ಆಟೋ ರಿಕ್ಷಾಗಳ ಚಾಲನ ಪರಿಮಿತಿಯನ್ನು 55 ಕಿ.ಮೀ.ಗೆ ಹೆಚ್ಚಿಸಬೇಕೆನ್ನುವ ಆಟೋ ಚಾಲಕರ ಮನವಿಗೆ ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ವಿವಿಧ ಸಂಘಟನೆಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿವೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರದ ಪ್ರವಾಸಿ ವಾಹನ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ತೆಕ್ಕಡ ಸಂತೋಷ್ ಕಾರ್ಯಪ್ಪ ಅವರು, ಈಗಾಗÀಲೇ ಸರಕಾರದ ಕೆಲವು ನಿಯಮಾವಳಿಗಳು, ರೆಂಟಲ್ ಬೈಕ್ಗಳಿಂದಾಗಿ ಅಗತ್ಯ ಬಾಡಿಗೆ ಇಲ್ಲದೆ ವಾಹನ ಮಾಲೀಕರು ಮತ್ತು ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಆಟೋ ಚಾಲನ ಪರಿಮಿತಿಯನ್ನು ಹೆಚ್ಚಿಸಿದಲ್ಲಿ ಅದರ ನೇರ ದುಷ್ಪರಿಣಾಮ ಪ್ರವಾಸಿ ವಾಹನ ಮಾಲೀಕರ ಮತ್ತು ಚಾಲಕರ ಮೇಲೆ ಬೀಳುತ್ತದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು. ಜಿಲ್ಲೆಯ ಆಟೋ ಚಾಲಕರ ಸಂಘದ ನಿಯೋಗ ಇತ್ತೀಚೆಗೆ ಮುಖ್ಯಮಂತ್ರಿಗಳು ಮತ್ತು ಜಿಲ್ಲೆಯ ಶಾಸಕರನ್ನು ಭೇಟಿಯಾಗಿ, ಜಿಲ್ಲೆಯಲ್ಲಿ ಆಟೋ ಚಾಲನ ಪರಿಮಿತಿಯನ್ನು 15 ಕಿ.ಮೀ. ನಿಂದ 55 ಕಿ.ಮೀ.ಗೆ ಹೆಚ್ಚಿಸಬೇಕೆಂದು ಮನವಿ ಮಾಡಿದೆ. ಯಾವುದೇ ಕಾರಣಕ್ಕೂ ಜನಪ್ರತಿನಿಧಿಗಳು ಹಾಗೂ ಸರಕಾರ ಆಟೋ ರಿಕ್ಷಾಗಳ ಚಾಲನ ಪರಿಮಿತಿಯನ್ನು ಹೆಚ್ಚಿಸುವ ನಿರ್ಧಾರಕ್ಕೆ ಬರಬಾರದು ಎಂದು ಒತ್ತಾಯಿಸಿದರು. ಬಾಡಿಗೆ ವಾಹನಗಳಿಗೆ ಪ್ಯಾನಿಕ್ ಬಟನ್ ಅಳವಡಿಕೆ ಮಾಡಬೇಕು, ಜಿಪಿಆರ್ಎಸ್ ಅಳವಡಿಸಬೇಕು ಎನ್ನುವ ನಿಯಮಗಳೊಂದಿಗೆ, ಹೆಚ್ಚಿನ ತೆರಿಗೆಯನ್ನು ವಿಧಿಸಲಾಗುತ್ತಿದೆ. ಈ ಎಲ್ಲಾ ನಿಯಮಗಳೊಂದಿಗೆ ತೆರಿಗೆ ಪಾವತಿಸಿಕೊಂಡು ಬಾಡಿಗೆ ವಾಹನಗಳಲ್ಲಿ ದುಡಿಯುತ್ತಿರುವ ನಮಗೆ ಪ್ರಸ್ತುತ ಅಗತ್ಯ ಬಾಡಿಗೆ ದೊರಕುತ್ತಿಲ್ಲ. ಇದರ ನಡುವೆಯೇ ಆಟೋ ರಿಕ್ಷಾಗಳ ಚಾಲನ ಪರಿಮಿತಿಯನ್ನು ಹೆಚ್ಚಿಸಿದಲ್ಲಿ ಜಿಲ್ಲೆಗೆ ಬರುವ ಪ್ರವಾಸಿಗರು ಬಾಡಿಗೆ ವಾಹನಗಳನ್ನು ಬಿಟ್ಟು, ಆಟೋ ರಿಕ್ಷಾಗಳಲ್ಲೆ ತೆರಳುವ ಸಾಧ್ಯತೆಗಳು ಹೆಚ್ಚಿದೆ. ಜಿಲ್ಲೆಯ ಸಾಕಷ್ಟು ಕಡೆಗಳಲ್ಲಿ ಬಾಡಿಗೆ ವಾಹನ ಬಿಟ್ಟು ಆಟೋ ರಿಕ್ಷಾಗಳನ್ನೇ ಪ್ರವಾಸಿಗರು ಅವಲಂಬಿಸುತ್ತಿದ್ದಾರೆ ಎಂದರು. *ಶಾಸಕರಿಗೆ ಮನವಿ* ಜಿಲ್ಲೆಯ ಶಾಸಕರುಗಳನ್ನು ಭೇಟಿಯಾಗಿ ಮನವಿ ಸಲ್ಲಿಸುವುದಲ್ಲದೆ, ಆಟೋ ರಿಕ್ಷಾಗಳ ಚಾಲನ ಪರಿಮಿತಿಯನ್ನು ವಿಸ್ತರಿಸದಂತೆ ಒತ್ತಾಯಿಸಲಾಗುವುದು ಎಂದು ಸಂತೋಷ್ ಕಾರ್ಯಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಪ್ರವಾಸಿ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಉಪಾಧ್ಯಕ್ಷ ಅರಸು ಮುಕ್ಕಾಟಿ, ಕಾವೇರಿ ವಾಹನ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಬಿ.ಜೆ.ಸತೀಶ್, ಕಾಫಿನಾಡು ಪ್ರವಾಸಿ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಗಗನ್ ಹಾಗೂ ಕಾರ್ಯದರ್ಶಿ ಬ್ರಿಜೇಶ್ ಉಪಸ್ಥಿತರಿದ್ದರು.











