ವಿರಾಜಪೇಟೆ ನ.12 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಯಮುಡಿ ಕಾರ್ಯಕ್ಷೇತ್ರ, ಪೊನ್ನಪ್ಪಸಂತೆ ಸರ್ಕಾರಿ ಅನುದಾನಿತ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಒಕ್ಕೂಟದ ಅಧ್ಯಕ್ಷ ಸೀನ ಕಾರ್ಯಕ್ರಮ ಉದ್ಘಾಟಿಸಿದರು. ವೈದ್ಯರಾದ ಡಾ. ಗಾನಶ್ರೀ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಹದಿ ಹರೆಯದ ಮಕ್ಕಳು ದುಶ್ಚಟಕ್ಕೆ ಬಲಿಯಾಗುತ್ತಿದ್ದು, ಮಾದಕ ವಸ್ತುಗಳ ಸೇವನೆಯಿಂದ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಅಲ್ಲದೆ ತಮ್ಮ ಓದಿನ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳಾದ ಗುಟ್ಕಾ ಸೇವನೆ ಮಧ್ಯಪಾನ, ಅಮಲು ಪದಾರ್ಥಗಳ ಸೇವನೆಯಿಂದ ಆರೋಗ್ಯಕ್ಕೆ ಮಾತ್ರ ಹಾನಿಕಾರವಲ್ಲದೆ ನಮ್ಮ ಪರಿವಾರಕ್ಕೂ ಹಾನಿಯನ್ನು ಉಂಟುಮಾಡುತ್ತದೆ. ಈ ರೀತಿಯ ಮಾದಕ ವಸ್ತುಗಳ ಸೇವನೆಯಿಂದ ಕ್ಯಾನ್ಸರ್ ಕಾಯಿಲೆಗಳು ಬರಬಹುದು. ಒಂದು ವೇಳೆ ಯಾರಾದರೂ ವ್ಯಸನಕ್ಕೆ ಒಳಗಾದಲ್ಲಿ ಅಥವಾ ಈ ರೀತಿಯ ಅಮಲು ಪದಾರ್ಥಗಳ ಸೇವನೆಯನ್ನು ಕಂಡಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮಕ್ಕಳಿಗೆ ಮನವರಿಕೆ ಮಾಡಿದರು. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳು ಏಕಾಗ್ರತೆ ಕೊರತೆ ಹಾಗೂ ಕಲಿಕೆಯ ಮೇಲಿನ ನಿಯಂತ್ರಣ ತಪ್ಪುತ್ತಿದ್ದಾರೆ. ಅಲ್ಲದೆ ಇದು ಅವರ ಭವಿಷ್ಯಕ್ಕೆ ಮಾರಕವು ಆಗಿದೆ ಎಂದರು. ಬೈಕ್ ಸಂಚಾರದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದರಿಂದ ಆಗುತ್ತಿರುವ ಅಪಘಾತದ ಕುರಿತು ಜಾಗೃತಿ ಮೂಡಿಸಿದರು. ಮಾದಕ ವಸ್ತು ಸೇವನೆಯಿಂದ ಆಗುವ ಆರೋಗ್ಯ ಸಮಸ್ಯೆ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಒಳಗಾದ ಜನರ ಪರಿಸ್ಥಿತಿಯನ್ನು ವಿವರಣೆ ನೀಡುವ ಮೂಲಕ ಮಾದಕ ವಸ್ತು ಮುಕ್ತ ವಿದ್ಯಾರ್ಥಿ ಜೀವನ ನಮ್ಮದಾಗಲಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಲಯ ಕೃಷಿ ಮೇಲ್ವಿಚಾರಕರಾದ ವಸಂತ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ರಾಧ, ಯೋಜನೆ ಕಾರ್ಯಕ್ರಮಗಳ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ನಂತರ ಯೋಜನೆಯ ಎಲ್ಲಾ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು. ಈ ಸಂದರ್ಭ ಶಿಕ್ಷಕರಾದ ಗುಡುದಪ್ಪ, ಕಂಡ್ರೆಲಿ , ಸತೀಶ, ರಮ್ಯಾ, ರೂಪ, ಕವಿತಾ ಹಾಗೂ ಶಾಲೆಯ ಇತರ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.











