ಮಡಿಕೇರಿ ನ.15 NEWS DESK : ನಮ್ಮ ಇತಿಹಾಸ ನೋಡಿದಾಗ ಕೇವಲ ಪರಕೀಯರ ದಾಳಿ ಅವರ ಆಳ್ವಿಕೆಯನ್ನು ವೈಭವೀಕರಿಸಿ ಹೇಳಲಾಗಿದೆ ಹೊರತು ಸ್ಥಳೀಯ ವೀರರ ಕುರಿತು ಮಾಹಿತಿ ನೀಡಲಾಗುತಿಲ್ಲ ಎಂದು ವನವಾಸಿ ಕಲ್ಯಾಣ, ಕರ್ನಾಟಕ ಅಧ್ಯಕ್ಷ ಚಕ್ಕೇರ ಮನು ಕಾವೇರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ಮಂಗಳೂರು ವಿಭಾಗ ಮತ್ತು ವಿರಾಜಪೇಟೆ ಕಾವೇರಿ ಕಾಲೇಜು ಜಂಟಿ ಆಶ್ರಯದಲ್ಲಿ ನಡೆದ ಅಬ್ಬಕ್ಕ@500 ಪ್ರೇರಣಾದಾಯಿ 100 ಉಪನ್ಯಾಸಗಳ ಸರಣಿ- ಎಸಳು 91 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದ ಮೇಲೆ ದಾಳಿ ನಡೆಸಿ ಆಕ್ರಮಣ ಮಾಡಿಕೊಂಡು ಆಡಳಿತವನ್ನು ನಡೆಸಿದ ಮೊಘಲರಿಂದ ಹಿಡಿದು ಬ್ರಿಟಿಷರವರೆಗಿನ ಎಲ್ಲಾ ಇತಿಹಾಸವನ್ನು ನಾವು ತಿಳಿದುಕೊಳ್ಳುತ್ತೇವೆ. ಇದಕ್ಕೆ ಕಾರಣ ಬ್ರಿಟಿಷರು ಶೈಕ್ಷಣಿಕವಾಗಿ ದೈಹಿಕ ಮತ್ತು ಮಾನಸಿಕ ಗುಲಾಮರನ್ನಾಗಿ ಮಾಡಿಕೊಂಡದ್ದು, ಆದರೆ ಸ್ಥಳೀಯವಾಗಿ ಹೋರಾಟವನ್ನು ನಡೆಸಿದ ವೀರರ ಮೇಲೆ ನಮ್ಮ ಇತಿಹಾಸ ಹೆಚ್ಚಾಗಿ ಬೆಳಕು ಚೆಲ್ಲುತ್ತಿಲ್ಲ. ಶಿವಾಜಿ, ಅಬ್ಬಕ್ಕ , ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಮಹನೀಯರು ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಕೇವಲ ಒಂದೆರಡು ಪುಟಕ್ಕೆ ಸೀಮಿತರಾಗಿದ್ದಾರೆ. ಭಾರತೀಯರಾದ ನಾವು ಮೊದಲು ನಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ನಮ್ಮತನವನ್ನು ತಿಳಿದುಕೊಳ್ಳಬೇಕು. ಜಗತ್ತಿಗೆ ಅಸಂಖ್ಯಾತ ಜ್ಞಾನಿಗಳನ್ನು ಸೊನ್ನೆಯಂತಹ ಮಹಾಸಂಖ್ಯೆಯನ್ನು ನೀಡಿದಂತಹ ವಿಶ್ವಗುರು ಭಾರತ ಎಂಬುದನ್ನು ಅರಿತು ಬಾಳಬೇಕೆಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು ಮತ್ತು ಡೀನ್ ಪ್ರೊ.ಉದಯ ಕುಮಾರ್ ಶೆಣೈ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಬ್ಬಕ್ಕ ಬಹಳ ಚರ್ಚಿತಳಾಗುತ್ತಿದ್ದಾಳೆ. ಅಬ್ಬಕ್ಕನ ಕುರಿತ ಇತಿಹಾಸದಲ್ಲಿ ನೋಡುವಂತಹ ಸಂದರ್ಭ ಸುಧೀರ್ಘವಾಗಿ ಸಣ್ಣ ಪ್ರಾಂತ್ಯದ ಮೂಲಕ ಪೋರ್ಚುಗೀಸರಲ್ಲೇ ನಡುಕವನ್ನು ಹುಟ್ಟಿಸಿದ ವೀರ ವನಿತೆ. ಸೈನ್ಯ, ನೀರಾವರಿ ವ್ಯವಸ್ಥೆ ,ಆಡಳಿತದ ಮೂಲಕ ಪಾಶ್ಚಿಮಾತ್ಯ ರಾಷ್ಟಗಳವರೆಗೆ ತನ್ನ ಪ್ರಸಿದ್ಧಿ ಹರಡುವಂತೆ ಮಾಡಿದ ವೀರ ಮಹಿಳೆ. ರಾಷ್ಟ್ರ ಪ್ರಥಮ ಎಂಬ ಪರಿಕಲ್ಪನೆ ಮೊದಲು ಆರಂಭಿಸಿದವಳು ಅಬ್ಬಕ್ಕ ಸ್ಥಳೀಯರ ಮೂಲಕ ಪ್ರಬಲವಾದ ನೌಕಾಪಡೆ ಸ್ಥಾಪಿಸಿ ಕಡಲ ತಡಿಯಿಂದ ನಿರಂತರವಾಗಿ ಪೋರ್ಚುಗಿಸರನ್ನು ಹಿಮ್ಮೆಟ್ಟಿಸಿ ವಿವಿಧ ಧರ್ಮ ಜಾತಿ ಜನರ ಸಮಾನ ಅವಕಾಶ ನೀಡಿ ಸಮರ್ಥ ಸೈನ್ಯದ ಮೂಲಕ ಆಡಳಿತ ನಡೆಸಿ ಅಂತರ್ಜಾತಿ ವಿವಾಹದ ಮೂಲಕ ಸಾಮರಸ್ಯ ಬೆಳೆಸಿ ನೆಲ, ಜಲ, ಸಂಸ್ಕಾರ , ಸಂಸ್ಕೃತಿ ಉಳಿಸಿ ಬೆಳೆಸಿದವರು. ಇಂತಹವರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಯ ಪಡಿಸುವುದು ಬಹಳ ಅಗತ್ಯ ಎಂದರು. ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ಕೆ ಆರ್ ಎಂ ಎಸ್ ಎಸ್ . ರಾಜ್ಯ ಪ್ರಧಾನ ಜಂಟಿ ಕಾರ್ಯದರ್ಶಿ ಡಾ. ಮಾಧವ ಎಂ.ಕೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ದಾನ ಮಾತನಾಡಿದರು. ಕೆ ಆರ್ ಎಂ ಎಸ್ ಎಸ್, ಸಂಯೋಜಕಿ ಜಯಲಕ್ಷ್ಮಿ ಆರ್ ಶೆಟ್ಟಿ, ಕುಟ್ಟಂಡ ಪ್ರಿನ್ಸ್ ಗಣಪತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಆಡಳಿತಾತ್ಮಕ ಸಿಬ್ಬಂದಿಗಳು ಹಾಜರಿದ್ದರು.











