ಮಡಿಕೇರಿ NEWS DESK ನ.16 : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಅತ್ಯುತ್ತಮ ವಿದ್ಯಾ ಸಂಸ್ಥೆಯಾಗಿದ್ದು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಸಾಕಷ್ಟು ಸಾಧಕರನ್ನು ನೀಡಿದೆ. ಈ ಕಾಲೇಜ್ ನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹಳೇ ವಿದ್ಯಾರ್ಥಿ ಸಂಘ ಆಂದೋಲನದ ರೂಪದಲ್ಲಿ ಶ್ರಮ ವಹಿಸಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಕರೆ ನೀಡಿದ್ದಾರೆ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜ್ ನಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗು ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತ ಮತ್ತು ಮನೋಹರವಾದ ಜಿಲ್ಲೆಯಾಗಿದ್ದು, ಇಲ್ಲಿನ ಜನರ ಸೃಜನಶೀಲತೆ ರಕ್ತಗತವಾಗಿ ಬಂದಿದೆ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಬಹಳ ಹಿಂದಿನಿಂದಲೂ ಅತ್ಯಂತ ಹೆಸರು ಮಾಡಿದ ವಿದ್ಯಾಸಂಸ್ಥೆಯಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ದೇಶಕ್ಕೆ ಕೊಡುಗೆ ನೀಡಿದ್ದಾರೆ. ಕಾಲೇಜು ಇಂದು ನೋವಿನಲ್ಲಿರುವಾಗ ಕಾಲೇಜ್ ನ ಅಭಿವೃದ್ಧಿಗೆ ಹಳೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು, ಇದು ನಮ್ಮ ಅಸ್ತಿತ್ವದ ಪ್ರಶ್ನೆ ಎಂದರು. ಕಾಲೇಜ್ ನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಪ್ರತಿಯೊಬ್ಬರು ತಾವು ಕಲಿತ ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಕರನ್ನು ಪ್ರೀತಿಸಬೇಕು, ಗೌರವಿಸಬೇಕು. ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಕೊಡಗು ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲೂ ಮುಂದೆ ಬರಬೇಕು. ಜಿಲ್ಲೆಯಲ್ಲಿ ಕೊಡಗು ವಿಶ್ವವಿದ್ಯಾಲಯದ ಬೆಳವಣಿಗೆಗೆ ಪ್ರತಿಯೊಬ್ಬರು ಪ್ರೋತ್ಸಾಹ ನೀಡಬೇಕು ಮತ್ತು ವಿದ್ಯಾರ್ಥಿಗಳು ಹೊರ ಜಿಲ್ಲೆಗಳಿಗೆ ತೆರಳಿ ಶಿಕ್ಷಣ ಪಡೆಯುವ ಬದಲು ಸುಂದರ ಪರಿಸರದ ಕೊಡಗಿನಲ್ಲಿ ವ್ಯಾಸಂಗ ಮಾಡಬೇಕು. ಒಂದು ಶಿಕ್ಷಣ ಸಂಸ್ಥೆಯನ್ನು ಹೇಗೆ ಉಳಿಸಿಕೊಳ್ಳಬಹುದು ಎನ್ನುವ ವಿಚಾರವನ್ನು ಹಿರಿಯರೊಂದಿಗೆ ಚರ್ಚಿಸಬೇಕು. ಆ ನಿಟ್ಟಿನಲ್ಲಿ ಕಾಲೇಜ್ ನ ಹಳೇ ವಿದ್ಯಾರ್ಥಿ ಸಂಘದ ಕಾರ್ಯವೈಖರಿ ಶ್ಲಾಘನೀಯ ಎಂದು ಪ್ರೊ.ಪಿ.ಎಲ್.ಧರ್ಮ ತಿಳಿಸಿದರು. ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಅವರು ಮಾತನಾಡಿ, ಹಳೇ ವಿದ್ಯಾರ್ಥಿ ಸಂಘದ ಈ ಸಭೆ ಕೇವಲ ನೆನಪುಗಳ ವಿನಿಮಯದ ಕಾರ್ಯಕ್ರಮವಾಗದೆ ಹಳೇ ವಿದ್ಯಾರ್ಥಿಗಳು ಹಾಗೂ ಹಿರಿಯರು ತಮ್ಮ ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು ತಾವು ಕಲಿತ ಮಾತೃ ಸಂಸ್ಥೆಗೆ ಕೊಡುಗೆ ನೀಡುವ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜ್ ನಲ್ಲಿ ಶಿಕ್ಷಣ ಪಡೆದ ಹಲವರು ಸಮಾಜದಲ್ಲಿ ವಿವಿಧ ನಾಯಕತ್ವದ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ. ಕೊಡಗು ವಿಶ್ವವಿದ್ಯಾಲಯ ಕಾಲೇಜ್ ನ ಅಭಿವೃದ್ಧಿಗೆ ಇತಿಮಿತಿಗಳ ನಡುವೆ ವಿವಿಧ ಯೋಜನೆಗಳನ್ನು ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದರು. ಹಳೇ ಸಂಘವು ಸಕಾರಾತ್ಮಕ ಬದಲಾವಣೆಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿರುವ ಜೀವಂತ, ಉಸಿರಾಡುವ ಜಾಲವಾಗಿದೆ. ಇದು ಮಾರ್ಗದರ್ಶನ, ವೃತ್ತಿಪರ ಅಭಿವೃದ್ಧಿ ಮತ್ತು ಸಹಯೋಗದ ಯೋಜನೆಗಳ ಮೂಲಕ ನಿರಂತರ ಕಲಿಕೆಯನ್ನು ಬೆಳೆಸುತ್ತದೆ. ಸಮಾಜವು ತ್ವರಿತ ಬದಲಾವಣೆಗಳನ್ನು ಎದುರಿಸುತ್ತಿರುವಾಗ, ಕೊಡಗಿನ ಹಳೆಯ ವಿದ್ಯಾರ್ಥಿಗಳ ಸಂಘವು ನಾವಿನ್ಯತೆ ಮತ್ತು ಜವಾಬ್ದಾರಿಯಲ್ಲಿ ಮುಂಚೂಣಿಯಲ್ಲಿದ್ದು, ಮುಂದಿನ ಪೀಳಿಗೆಗೆ ಬೆಂಬಲ, ಸ್ಫೂರ್ತಿ ಮತ್ತು ಸೇವೆಯ ದಾರಿದೀಪವಾಗಿ ಉಳಿಯಲಿ ಎಂದು ಹಾರೈಸಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ. ಅವರು ಮಾತನಾಡಿ, ಎರಡು ವಿಶ್ವವಿದ್ಯಾಲಯದ ನಡುವೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರ ಅನುದಾನ ಕೊರತೆ ಇದ್ದರೂ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘ ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬೆನ್ನೆಲುಬಾಗಿ ನಿಂತಿದೆ. ಇದರಿಂದ ಕಾಲೇಜ್ ಗೆ ನೈತಿಕ ಸ್ಥೈರ್ಯ ಸಿಕ್ಕಿದೆ ಎಂದು ತಿಳಿಸಿದರು. ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ ಕಾಲೇಜು ವತಿಯಿಂದ ವಿದ್ಯಾರ್ಥಿಗಳಿಗಾಗಿ ಹಲವು ಕಾರ್ಯ ಯೋಜನೆಯನ್ನು ರೂಪಿಸಲಾಗಿದೆ. ಪೋಷಕರು ಮಕ್ಕಳಿಗೆ ಹೊರ ಜಿಲ್ಲೆಗಳಲ್ಲಿ ಶಿಕ್ಷಣ ನೀಡುವ ಬದಲು ಜಿಲ್ಲೆಯ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ನೀಡುವಂತೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಹಳೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದುಕೊಂಡರೆ ಕಾಲೇಜ್ ನ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ದೇಶದ ಆಸ್ತಿ, ಆ ನಿಟ್ಟಿನಲ್ಲಿ ಸರಕಾರ ವಿದ್ಯಾಸಂಸ್ಥೆಗಳ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡಬೇಕು. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದಿದರೆ ದೇಶ ಉತ್ತಮವಾಗಿರಲು ಸಾಧ್ಯ ಎಂದರು. ಕಾರ್ಯಕ್ರದಲ್ಲಿ ಸಂಘದ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ನಿರ್ದೇಶಕರಾದ ಲೋಹಿತ್ ಮಾಗಲು, ದಿಶಾಂತ್ ಗಾಳಿಬೀಡು, ಕೇಲೆಟ್ಟಿರ ದೇವಯ್ಯ, ಆದರ್ಶ್ ಅದ್ಕಲೆಗಾರ್, ಚೀಯಕಪೂವಂಡ ಸಚಿನ್ ಪೂವಯ್ಯ, ಚರಣ್ ಬಲ್ಯದ, ಬಿ.ಜಿ.ಹರ್ಷಿತ್, ಕರವಂಡ ಸೀಮಾ ಗಣಪತಿ, ಖುರ್ಷಿದ್ ಬಾನು ಕೆ.ಎಚ್, ಎಸ್.ಆರ್.ವತ್ಸಲ ಹಾಜರಿದ್ದರು. ಸಂಘದ ನಿರ್ದೇಶಕರಾದ ಐಚಂಡ ರಶ್ಮಿ ಮೇದಪ್ಪ, ಆಪಾಡಂಡ ಜಾನ್ಸಿ ಗಣಪತಿ ಪ್ರಾರ್ಥಿಸಿದರು, ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಬೊಟ್ಟಂಗಡ ಗಣಪತಿ ಸ್ವಾಗತಿಸಿದರು, ಸಂಘದ ನಿರ್ದೇಶಕರಾದ ಕರವಂಡ ಸೀಮಾ ಗಣಪತಿ, ಚಿಯಕಪೂವಂಡ ಶ್ವೇತನ್ ಚಂಗಪ್ಪ, ಪೆಬ್ಬಟ್ಟೀರ ಶೀತಲ್ ಕಾರ್ಯಪ್ಪ ಅತಿಥಿಗಳ ಪರಿಚಯ ಮಾಡಿದರು. ಸಬ್ಬಂಡ್ರ ಜಗದೀಶ್ ವಂದಿಸಿದರು. *ಸನ್ಮಾನ* ಕಾರ್ಯಕ್ರಮದಲ್ಲಿ ಬಡ್ತಿ ಹೊಂದಿದ ಪ್ರಾಂಶುಪಾಲರಾದ ಪ್ರೊ. ಮೇಜರ್ ರಾಘವ ಬಿ., ಪ್ರೊ.ಇ.ತಿಪ್ಪೇಸ್ವಾಮಿ ಈ, ಪ್ರೊ.ಗಾಯತ್ರಿ ದೇವಿ ಎ., ಪ್ರೊ.ಶ್ರೀಧರ್ ಹೆಗ್ಗಡೆ, ಪ್ರೊ.ಕೃಷ್ಣ ಎಂ.ಪಿ, ಪ್ರೊ.ನಯನ ಕಶ್ಯಪ್ ಹಾಗೂ ಕಾಲೇಜ್ ಗೆ ಅತಿ ಹೆಚ್ಚು ಅಂಕ ಪಡೆದ ಮೋನಿಶಾ ರೈ (ಬಿಎಸ್ಸಿ), ಕೆ.ಎಂ.ಬ್ರೆಂಟನ್ ಮ್ಯಾಥ್ಯೂ (ಎಂ.ಎ ಇಂಗ್ಲೀಷ್), ಸಹನಾ ಸಿ.ಕೆ (ಎಂ.ಎ ಕೊಡವ), ಕ್ರೀಡಾ ಸಾಧಕರಾದ ಮೊಹಮ್ಮದ್ ಶಾಹಿಲ್, ಗಡೇಲಾ ಗಾಯತ್ರಿ, ಎಂ.ಡಿ.ಕಾವ್ಯಶ್ರೀ, ಸೀಮಾ ಆನಂದ್ ಪವರ್, ಎನ್ಸಿಸಿ ಸಾಧಕರಾದ ಎಂ.ಆರ್.ಹೇಮAತ್ ಸೇರಿದಂತೆ ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಅತಿಥಿಗಳಾದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಡಾ.ಶಾನಿ ಹಾಗೂ ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಅಶೋಕ್ ಆಲೂರ ಸಂಗಪ್ಪ ಅವರನ್ನು ಕೂಡ ಸನ್ಮಾನಿಸಲಾಯಿತು. *ಬಹುಮಾನ ವಿತರಣೆ* ಉತ್ತಮ ಎನ್ಸಿಸಿ ಕೆಡೆಟ್ ಸ್ಪರ್ಧೆಯಲ್ಲಿ ಸೀನಿಯರ್ ಅಂಡರ್ ಆಫೀಸರ್ ಕೆ.ಎಂ.ತಿಮ್ಮಯ್ಯ (ತೃತೀಯ ಬಿ.ಕಾಂ) ಪ್ರಥಮ, ಕೆಡೆಟ್ ಕೆ.ಕೆ.ಮುತ್ತಪ್ಪ (ದ್ವಿತೀಯ ಬಿ.ಎ.) ದ್ವಿತೀಯ, ಜೂನಿಯರ್ ಅಂಡರ್ ಆಫೀಸರ್ ಎ.ಕೆ.ಸೋಮಣ್ಣ (ತೃತೀಯ ಬಿ.ಕಾಂ) ತೃತೀಯ ಸ್ಥಾನ ಬಹುಮಾನ ಪಡೆದರು. ಕಾಲೇಜ್ ನ ದೈಹಿಕ ಶಿಕ್ಷಣ ವಿಭಾಗ ಹಳೇ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ನಡೆಸಿದ ವಾಲಿಬಾಲ್ ಸ್ಪರ್ಧೆಯಲ್ಲಿ ವಿಜೇತರಾದ ಚಿಂತನ್ ಹೆಚ್.ಎಲ್, ಪ್ರಥಮ ಬಿ.ಕಾಂ, ಪ್ರತೀಕ್ ರಾಥೋಡ್, ಪ್ರಥಮ ಬಿ.ಕಾಂ, ವಿಷ್ಣು ವಿ.ಪಿ., ಪ್ರಥಮ ಬಿ.ಕಾಂ ಮಹಮ್ಮದ್ರಫಿ, ಪ್ರಥಮ ಬಿ.ಕಾಂ, ಮಹಮ್ಮದ್ ಸ್ವಾಲಿಹ್, ಪ್ರಥಮ ಬಿ.ಕಾಂ ವಿಷ್ಣು ವಿ. ಪ್ರಥಮ ಬಿ.ಕಾಂ, ವರುಣ್ ಕೆ. ಪ್ರಥಮ ಬಿ.ಕಾಂ, ಮಹಮ್ಮದ್, ಸಲ್ಮಾನ್ ಫಾರಿಸ್, ದ್ವಿತೀಯ ಸ್ಥಾನ ಪಡೆದ ವಿಷ್ಣು, ಪ್ರಥಮ ಬಿ.ಕಾಂ, ವಿಜಯ್ ಎಂ., ತೃತೀಯ ಬಿ.ಎ., ಸಲಾವುದ್ದೀನ್. ಎಂ.ಹೆಚ್., ತೃತೀಯ ಬಿ.ಎ., ಸಬೀಬ್ ಸಿ. ಎ., ತೃತೀಯ ಬಿ.ಎ., ಮಂಜುನಾಥ್ ಹೆಚ್. ಆರ್., ತೃತೀಯ ಬಿ.ಎ., ಮೊಹಮ್ಮದ್ ಶಫ್ವಾನ್ಎನ್., ತೃತೀಯ ಬಿ.ಎ., ಫಾಯಿಜ್ ಕೆ. ಎಸ್., ತೃತೀಯ ಬಿ.ಎ., ಕಾರ್ತಿಕ್ ಪಿ.ಜಿ., ತೃತೀಯ ಬಿ.ಎ., ಲಕ್ಷಿತ್ ಎ. ಪಿ., ತೃತೀಯ ಬಿ.ಎ. ಸೇರಿದಂತೆ ಪ್ರಬಂಧ ಸ್ಪರ್ಧೆ, ರಂಗೋಲಿ ಸ್ಪರ್ಧೆ ವಿಜೇತರಿಗೆ ಕೂಡ ಬಹುಮಾನ ವಿತರಿಸಲಾಯಿತು. *ಮಹಾಸಭೆ* ಕಾರ್ಯಕ್ರಮಕ್ಕೂ ಮೊದಲು ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಹಳೇ ವಿದ್ಯಾರ್ಥಿ ಸಂಘದ ಮಹಾಸಭೆ ನಡೆಯಿತು. ಸಭೆಯಲ್ಲಿ ಸಂಘದ ಸದಸ್ಯತ್ವ ಹೆಚ್ಚಿಸುವುದು ಮತ್ತು ಹಳೇ ವಿದ್ಯಾರ್ಥಿ ಸಂಘಕ್ಕೆ ಸ್ವಂತ ಕಟ್ಟಡ ಹೊಂದುವ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು. ಕಾರ್ಯದರ್ಶಿ ಚಂದನ್ ನಂದರಬೆಟ್ಟು ವಾರ್ಷಿಕ ವರದಿ ವಾಚಿಸಿದರು. ಡಾ.ಅನಿಲ್ ಚಂಗಪ್ಪ, ನಿವೃತ್ತ ಎಸ್ಪಿ ಮುಕ್ಕಾಟಿರ ಚೋಟು ಅಪ್ಪಯ್ಯ, ಮಾಜಿ ಅಧ್ಯಕ್ಷ ನಂದಿನೆರವಂಡ ಅಪ್ಪಯ್ಯ, ಮಾಜಿ ಪ್ರಧಾನ ಕಾರ್ಯದರ್ಶಿ ಬೊಟ್ಟಂಗಡ ಶಾಮ್ ಪೂಣಚ್ಚ, ಬೊಳಕಾರಂಡ ವಿಠಲ್ ತಿಮ್ಮಯ್ಯ ಸೇರಿದಂತೆ ಪ್ರಮುಖರು, ಸಂಘದ ಪದಾಧಿಕಾರಿಗಳು ಹಾಗೂ ಹಳೇ ವಿದ್ಯಾರ್ಥಿಗಳು ಪಾಲ್ಗೊಂಡು ಅಗತ್ಯ ಸಲಹೆಗಳನ್ನು ನೀಡಿದರು.











