ಸೋಮವಾರಪೇಟೆ ನ.14 NEWS DESK : ಓಣಂ ಎಂದರೆ ಕೇವಲ ಹಬ್ಬವಲ್ಲ ಅದು ಸಮಾನತೆಯ ಸಂಕೇತ, ಪ್ರೀತಿ–ಸೌಹಾರ್ದದ ಪರಂಪರೆ, ಪ್ರಕೃತಿ, ಕೃಷಿ ಮತ್ತು ಮಾನವೀಯ ಮೌಲ್ಯಗಳ ಆಚರಣೆ ಎಂದು ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯಿಸಿದರು. ಸೋಮವಾರಪೇಟೆ ತಾಲ್ಲೂಕು ಹಿಂದೂ ಮಲೆಯಾಳಿ ಸಮಾಜದ ವತಿಯಿಂದ ಜಾನಕಿ ಕನ್ವೆನಸನ್ ಹಾಲ್ನಲ್ಲಿ ನಡೆದ ಓಣಂ ಉತ್ಸವದ ಸಭಾ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ವಿಶೇಷ ಸಂಸ್ಕೃತಿಯನ್ನು ಮಲೆಯಾಳಿ ಸಮುದಾಯವು ಸೋಮವಾರಪೇಟೆಯಲ್ಲಿಯೂ ಹೀಗೇ ಉಳಿಕೊಂಡಿರುವುದು ಶ್ಲಾಘನೀಯ ಎಂದು ಪ್ರಶಂಸೆ ಸಲ್ಲಿಸಿದರು. ಇಂತಹ ಸಾಂಸ್ಕೃತಿಕ ಹಬ್ಬಗಳು ನಾಡಿನ ಒಗ್ಗಟ್ಟು ಹೆಚ್ಚಿಸುತ್ತವೆ. ಮಕ್ಕಳಲ್ಲಿ ಕಲೆ-ಸಂಸ್ಕೃತಿಯ ಅರಿವು ಬೆಳೆಸುತ್ತವೆ. ನಾವು ಸದಾ ಸಮಾಜದ ಒಳ್ಳೆಯ ಕಾರ್ಯಗಳಿಗೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು. ಮಾಜಿ ಸಚಿವ ಅಪ್ಪಚ್ಚು ರಂಜನ್, ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ, ಹಿಂದೂ ಮಲೆಯಾಳಿ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ, ತಾಲ್ಲೂಕು ಸಮಾಜದ ಸ್ಥಾಪಕ ಅಧ್ಯಕ್ಷ ಪಿ.ಡಿ.ಪ್ರಕಾಶ್ ಮಾತನಾಡಿದರು. ಸಮಾರಂಭದ ದಿವ್ಯಸಾನಿಧ್ಯವನ್ನು ಸೋಲೂರು ಆರ್ಯ ಈಡಿಗಾ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ವಿಖ್ಯಾತನಂದ ಸ್ವಾಮೀಜಿ, ಕೇರಳ ಕಾಞಂಗಾಡ್ ಗೃಹಸ್ಥಾಶ್ರಮದ ಶ್ರೀ ಗಂಗಾಜೀ ನಾಯರ್ ದಿವ್ಯಸಾನಿಧ್ಯ ವಹಿಸಿದ್ದರು. ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಮಾದವನ್, ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಭರತ್ ಕುಮಾರ್, ಪ್ರಮುಖರಾದ ರಾಜೇಶ್, ಉಣ್ಣಿಕೃಷ್ಣ, ಎಲ್.ರಾಜೇಶ್, ವಿ.ಕೆ. ಲೋಕೇಶ್, ಪದ್ಮನಾಭ, ವಿನೋದ್ ಕುಮಾರ್, ಸಂತೋಷ್, ಬಾಲಕೃಷ್ಣ, ಹರೀಂದ್ರನ್ ಮತ್ತಿತರ ಗಣ್ಯರು ಇದ್ದರು. 40 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.











