
ಮಡಿಕೇರಿ NEWS DESK ನ.17 : ವಿರಾಜಪೇಟೆ ಗೌಡ ಸಮಾಜಕ್ಕೆ ಭೂಮಿಯನ್ನು ದಾನವಾಗಿ ನೀಡಿದ ಸಮಾಜ ಸೇವಕ ಸುಳ್ಯದ ಕುರುಂಜಿ ವೆಂಕಟರಮಣ ಗೌಡ ಹಾಗೂ ಜಾನಕಿ ದಂಪತಿಗಳ ಪುತ್ರರಾದ ಡಾ.ಚಿದಾನಂದ ಗೌಡರು ಮತ್ತು ಡಾ.ರೇಣುಕಾ ಪ್ರಸಾದ್ ಅವರಿಗೆ ಅಭಿನಂದನಾ ಸಮಾರಂಭ ವಿರಾಜಪೇಟೆ ಗೌಡ ಸಮಾಜದಲ್ಲಿ ನಡೆಯಿತು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಡಾ.ಚಿದಾನಂದ ಅವರು ಸುಮಾರು 20 ವರ್ಷಗಳಿಂದ ಬಾಕಿ ಉಳಿದಿದ್ದ ಭೂಮಿಯ ನೋಂದಣಿ ಪ್ರಕ್ರಿಯೆಯನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಹಾಗೂ ಅವರ ತಂಡವು ನಮ್ಮೊಂದಿಗೆ ಚರ್ಚಿಸಿ ಅಂತಿಮಗೊಳಿಸಿದ್ದಾರೆ. ಇದೀಗ ಜಾಗ ಗೌಡ ಸಮಾಜದ ಅಧೀನದಲ್ಲಿದ್ದು, ಶೀಘ್ರ ಉತ್ತಮವಾದ ಗೌಡ ಸಮಾಜವನ್ನು ನಿರ್ಮಿಸಿ ಎಂದು ಕರೆ ನೀಡಿದರು. ನೂತನ ಕಟ್ಟಡ ನಿರ್ಮಾಣದ ಸಂದರ್ಭ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ ಅವರು, ಸನ್ಮಾನವನ್ನು ತಂದೆ, ತಾಯಿಯರಿಗೆ ಅರ್ಪಿಸುವುದಾಗಿ ಹೇಳಿದರು. ಡಾ.ಕೆ.ವಿ.ರೇಣುಕಾ ಪ್ರಸಾದ್ ಅವರು ಮಾತನಾಡಿ ಗೌಡ ಸಮಾಜಕ್ಕೆ ದೊರೆತ್ತಿರುವ ಜಾಗದಲ್ಲಿ ಸುಂದರವಾದ ಸಮಾಜ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿ ಎಂದು ಸಲಹೆಯನ್ನು ನೀಡಿದರು. ವಿರಾಜಪೇಟೆ ಗೌಡ ಸಮಾಜದ ಯೋಜನೆಗಳಿಗೆ ನಮ್ಮ ಕುಟುಂಬದ ಸಂಪೂರ್ಣ ಬೆಂಬಲ ಇದೆ ಎಂದರು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಅವರು ಮಾತನಾಡಿ ಸುಮಾರು 20 ವರ್ಷಗಳಿಂದ ಸಮಾಜದ ಪ್ರಮುಖರು ಜಾಗಕ್ಕಾಗಿ ನಿರಂತರ ಪ್ರಯತ್ನ ಮಾಡಿದ್ದಾರೆ. ಒಕ್ಕೂಟದ ಎಲ್ಲಾ ನಿರ್ದೇಶಕರು ಹಾಗೂ ದಾನಿಗಳ ಸಹಕಾರದಿಂದ ಇದೀಗ ನೋಂದಣಿ ಮಾಡಲಾಗಿದೆ. ಉತ್ತಮವಾದ ಸಮಾಜ ನಿರ್ಮಾಣದ ಯೋಜನೆಗೆ ಒಕ್ಕೂಟ ಬೆಂಬಲವಾಗಿ ನಿಲ್ಲಲಿದೆ. ಶೀಘ್ರ ಮಹಾಸಭೆ ನಡೆಸಿ ಅನುಭವಸ್ಥರು ಹಾಗೂ ಯುವಕರಿಂದ ಕೂಡಿದ ಆಡಳಿತ ಮಂಡಳಿಯನ್ನು ರಚಿಸಿ ಮುಂದಿನ ಕಾರ್ಯಚಟುವಟಿಕೆಗಳಿಗೆ ಕಾರ್ಯೋನ್ಮುಖರಾಗಿ ಎಂದು ಸಲಹೆ ನೀಡಿದರು.
ವಿಧಾನಸಭೆಯ ಮಾಜಿ ಅಧ್ಯಕ್ಷ ಕೊಂಬಾರನ ಜಿ.ಬೋಪಯ್ಯ ಅವರು ಮಾತನಾಡಿ ಸಮಾಜಕ್ಕೆ ಬರುವ ಸರಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ನಾನು ಶಾಸಕನಾಗಿದ್ದಾಗ ಅನುದಾನ ಕೊಡಿಸಲು ಸಾಧ್ಯವಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಅನುದಾನ ಕ್ರೋಢೀಕರಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಅವರು ಮಾತನಾಡಿ ಗೌಡರು ಹಾಗೂ ಕೊಡವರು ಸಹಬಾಳ್ವೆಯಿಂದ ಇರಬೇಕು, ನಮ್ಮ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಬೇಕು ಎಂದರು. ವಿರಾಜಪೇಟೆ ಗೌಡ ಸಮಾಜಕ್ಕೆ ಎಂಎಲ್ಸಿ ಅನುದಾನದಿಂದ 5ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು. ವಿರಾಜಪೇಟೆ ಗೌಡ ಸಮಾಜದ ಅಧ್ಯಕ್ಷ ಮುಕ್ಕಾಟ್ಟಿ ವಾಸು ಗಣಪತಿ ಅವರು ಮಾತನಾಡಿ ಒಂದೊಳ್ಳೆಯ ಗೌಡ ಸಮಾಜವನ್ನು ನಿರ್ಮಿಸಲು ನಿರ್ಧರಿಸಿದ್ದು, ಸರ್ವರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ ಅನುಪಸ್ಥಿತಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರಿಗೆ ವಿರಾಜಪೇಟೆ ಗೌಡ ಸಮಾಜದ ವತಿಯಿಂದ ಮನವಿ ಪತ್ರವನ್ನು ನೀಡಲಾಯಿತು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷ ಡಾ.ರಾಜೇಶ್ ತೇನನ ಸ್ವಾಗತಿಸಿದರು. ಪಟ್ಟಡ ಶಿವಕುಮಾರ್ ನಿರೂಪಿಸಿದರು, ಗೌಡದಾರೆ ಬಿದ್ದಪ್ಪ ವಂದಿಸಿದರು. ಚೆಟ್ಟಿನೆರವನ ಚಂದ್ರಶೇಖರ್ ಗೌಡ ಸಮಾಜ ನಡೆದು ಬಂದ ಹಾದಿಯನ್ನು ವಿವರಿಸಿದರು. ಮಂಜoದ್ರ ರೇಖಾ ಉಲ್ಲಾಸ್ ಪ್ರಾರ್ಥಿಸಿದರು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ ಕುಮಾರ್, ಸರ್ವ ನಿರ್ದೇಶಕರುಗಳು, ಕೊಡಗು, ಬೆಂಗಳೂರು, ಮೈಸೂರು ಸೇರಿದಂತೆ ಕೊಡಗಿನ ಎಲ್ಲಾ ಭಾಗಗಳ ಗೌಡ ಸಮಾಜಗಳ ಅಧ್ಯಕ್ಷರುಗಳು, ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.









