ಮಡಿಕೇರಿ ನ.18 NEWS DESK : ಕೊಡವರು ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದವರಲ್ಲ. ಆದರೆ ಇಂದು ಜನಗಣತಿಯೂ ಸೇರಿದಂತೆ ರಾಜ್ಯದ ದಾಖಲೆಗಳ ಎಲ್ಲಾ ಕಾಲಂಗಳು ಈ ದೇಶದ ಬಹುಧರ್ಮ, ಪ್ರಬಲಧರ್ಮ ಮತ್ತು ಬಲಾಢ್ಯ ಜಾತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಲ್ಪಟ್ಟಿದೆ. ಧರ್ಮ ಮತ್ತು ಜಾತಿ ಬಗ್ಗೆ ಮಾತ್ರ ಉಲ್ಲೇಖ ಇರುವುದರಿಂದ ಆನಿಮಿಸ್ಟಿಕ್ ನಂಬಿಕೆಯ ಕೊಡವರು ಅನಿವಾರ್ಯವಾಗಿ ಧರ್ಮ ಮತ್ತು ಜಾತಿ ಕಾಲಂಗಳನ್ನು ಒಪ್ಪಿಕೊಂಡು ಕೊಡವ ಎಂದು ದಾಖಲಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಆದಿಮ ಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರು 2026-27ರಲ್ಲಿ ನಡೆಯಲಿರುವ 16ನೇ ರಾಷ್ಟ್ರೀಯ ಜನಗಣತಿ ಸಂದರ್ಭ ಪ್ರತ್ಯೇಕವಾಗಿ ‘ಕೊಡವ’ ಎಂದು ದಾಖಲೀಕರಣಗೊಳ್ಳುವಂತೆ ಜನಜಾಗೃತಿ ಮೂಡಿಸುವ ಸಲುವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಕುಟ್ಟದಲ್ಲಿ ನಡೆದ 20ನೇ ಮಾನವ ಸರಪಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಸಂಸತ್ ಮತ್ತು ವಿಧಾನಸಭೆಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಬೇಕು. ಕೊಡವರ ಪೂರ್ವಾರ್ಜಿತ ಭೂ ಹಕ್ಕು ಮತ್ತು ಧಾರ್ಮಿಕ ಸಂಸ್ಕಾರ ತೋಕ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕು ಸೇರಿದಂತೆ ಕೊಡವರ ಸಬಲೀಕರಣಕ್ಕೆ ಪೂರಕವಾಗಿರುವ ಸಂವಿಧಾನಬದ್ಧವಾದ ಹಲವು ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆದರು. ಆದಿಮಸಂಜಾತ ಏಕ ಜನಾಂಗೀಯ ಆ್ಯನಿಮಿಸ್ಟಿಕ್ ನಂಬಿಕೆಯ ಕೊಡವರು ಯಾವುದೇ ಜಾತಿ, ಧರ್ಮದ ಬಂಧನ ಅಥವಾ ಕಳಂಕವಿಲ್ಲದೆ ಸ್ವತಂತ್ರವಾಗಿ ಬದುಕಿದ ಮತ್ತು ಬದುಕುತ್ತಿರುವ ಅತೀ ಅಪರೂಪದ ಸೂಕ್ಷ್ಮ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಕೊಡವ ನೆಲ ಬಿಟ್ಟರೆ ಬೇರೆ ಎಲ್ಲೂ ಕೊಡವರಿಗೆ ಸ್ವಂತ ಸ್ಥಳವಿಲ್ಲ. ಇಂದಿನ ಕಾಲಮಾನದಲ್ಲಿ ಕೊಡವರ ರಕ್ಷಣೆಯಾಗಬೇಕಾಗಿದೆ ಮತ್ತು ಸಂಪೂರ್ಣ ಸಬಲೀಕರಣವಾಗಬೇಕಾಗಿದೆ. ಇದು ದೇಶದ ಸಂವಿಧಾನದಿಂದ ಮಾತ್ರ ಸಾಧ್ಯ ಎಂದು ವಿವರಿಸಿದರು. ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಕೊಡವರಿಗೆ ಪಾರ್ಲಿಮೆಂಟ್ ಮತ್ತು ಎಸೆಂಬ್ಲಿಯಲ್ಲಿ ವಿಶೇಷ ಪ್ರಾತಿನಿಧ್ಯ ಸಿಗಬೇಕಾದರೆ, ಕೊಡವರ ಪೂರ್ವರ್ಜಿತ ಭೂ ಹಕ್ಕು ಮತ್ತು ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕಾದರೆ ಕೊಡವರ ಪ್ರತ್ಯೇಕ ಗುರುತು ರಾಷ್ಟ್ರೀಯ ಜನಗಣತಿಯ ಸಂದರ್ಭ ‘ಕೊಡವ’ ಎಂದು ದಾಖಲೀಕರಣವಾಗಬೇಕು. ಹೀಗೆ ಮಾಡಿದಾಗ ಮಾತ್ರ ನಮಗೆ ಸಂವಿಧಾನ ಬದ್ಧ ಹಕ್ಕು ದೊರೆಯಲಿದೆ ಎಂದರು. 2026-27 ರಲ್ಲಿ ನಡೆಯಲಿರುವ 16ನೇ ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಅಳವಡಿಸಬೇಕು. ಇದರ ಆಧಾರದಡಿ ಮುಂದೆ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕ್ಷೇತ್ರ ಪುನರ್ ವಿಂಗಡಣೆಗೆ ಮಾನದಂಡವಾಗಲಿರುವ ಈ ಜನಗಣತಿಯು ಕೊಡವರ ರಾಜಕೀಯ ಸಬಲೀಕರಣ, ಸ್ವಯಂ ನಿರ್ಧಾರದ ಹಕ್ಕು ಸ್ಥಾಪಿಸಲು ಮೆಟ್ಟಿಲಾಗಲಿದೆ. ಅಲ್ಲದೆ ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರಿಯಲು ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕೊಡವರು ರಾಷ್ಟ್ರೀಯ ಜನಗಣತಿಯ ಸಂದರ್ಭ ಸ್ವತಂತ್ರ್ಯವಾಗಿ ‘ಕೊಡವ’ ಎಂದು ಗುರುತಿಸಿಕೊಳ್ಳುವಂತೆ ಸಿಎನ್ಸಿ ಕರೆ ನೀಡಿದೆ. ಆದರೆ ಈ ಕರೆಗೆ ವಿರುದ್ಧವಾಗಿ ಕೆಲವು ಪಟ್ಟಭದ್ರಹಿತಾಸಕ್ತಿಗಳು ಈ ರೀತಿ ಪ್ರತ್ಯೇಕವಾಗಿ ಗುರುತಿಸಿಕೊಂಡರೆ ಕೊಡವರಿಗೆ ರಕ್ಷಣೆ ಇರುವುದಿಲ್ಲ ಎಂದು ಅಪಪ್ರಚಾರ ಮಾಡುವ ಮೂಲಕ ಕೊಡವರ ಹಾದಿ ತಪ್ಪಿಸುತ್ತಿದ್ದಾರೆ. ಕೊಡವರನ್ನು ನಿರಂತರವಾಗಿ ವಂಚಿಸುತ್ತಿರುವ ಕೆಲವು ಕೂಟಗಳ ಬಗ್ಗೆ ಕೊಡವರು ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದರು. ಕೊಡವರು ಸಂವಿಧಾನದ ಭದ್ರತೆ ಬೇಕೆಂದು ಕೇಳುವ ಸಂದರ್ಭ ಕೆಲವು ಕೂಟ ಕೊಡವರನ್ನು ಸದಾಕಾಲ ವಂಚಿಸಲು ತೊಡಗಿದೆ. ಅವರ ಕಾರ್ಯಾಸೂಚಿ ಕೊಡವರಿಗೆ ಏನೇನು ದೊರಕಬಾರದು ಎಂಬುದಾಗಿದೆ. ನೀವು ದೇಶವನ್ನು ರಕ್ಷಣೆ ಮಾಡಿದ ಜನ, ಶೂರರು, ಧೀರರು ಎಂದು ಹೊಗಳಿ ಹೊನ್ನಶೂಲಕ್ಕೇರಿಸಿ ನಿಮಗೆ ಸಂವಿಧಾನದ ರಕ್ಷಣೆ ಯಾಕೆ ಬೇಕು ಎಂದು ಪ್ರಶ್ನಿಸುವ ಮೂಲಕ ಹಾದಿ ತಪ್ಪಿಸುತ್ತಿದ್ದಾರೆ. ಮತ್ತದೇ ಕೂಟ ಕೊಡವರು ಜನಗಣತಿಯ ಸಂದರ್ಭ ‘ಕೊಡವ’ ಎಂದು ಪ್ರತ್ಯೇಕವಾಗಿ ಗುರುತಿಸಿಕೊಳ್ಳದಂತೆ ನೋಡಿಕೊಳ್ಳುತ್ತಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. 1871-72 ರಿಂದ 1931ರ ವರೆಗೆ ನಡೆದ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರನ್ನು ಧರ್ಮೇತರ ಮತ್ತು ಜಾತಿಯೇತರ ಜನಾಂಗ/ಮೂಲವಂಶಸ್ಥ (ರೇಸ್) ಎಂದು ದಾಖಲಿಸಲ್ಪಡುವ ಮೂಲಕ ಕೊಡವರ ಪ್ರತ್ಯೇಕ ಅಸ್ತಿತ್ವ ಮತ್ತು ಸ್ವತಂತ್ರ ವ್ಯಕ್ತಿತ್ವವನ್ನು ಗುರುತಿಸಿ ನಮ್ಮ ಹೆಗ್ಗುರುತು ರಾಜ್ಯ ದಾಖಲೆಯಲ್ಲಿ ನಳನಳಿಸುವಂತಾಗಿತ್ತು. ತದನಂತರ ನಮ್ಮನ್ನು 2021ರ ವರೆಗೆ ಪ್ರತಿ ದಶಮಾನಗಳಿಗೊಮ್ಮೆ ನಡೆಸುವ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರನ್ನು ಬಲಾಡ್ಯ ಧಾರ್ಮಿಕ ಮತ್ತು ಜಾತಿಯೊಂದಿಗೆ ವಿಲೀನಗೊಳಿಸಿ ನಮ್ಮ ಅಸ್ತಿತ್ವ ಮತ್ತು ಹೆಗ್ಗುರುತು ವಿನಾಶದೊಂದಿಗೆ ಕೊಡವರ ಅಸ್ಮಿತೆ ಮತ್ತು ಸತ್ವವನ್ನು ಧ್ವಂಸ ಮಾಡಲಾಯಿತು. ಮುಂದೆ ಅದು ಕೊಡವರ ಸ್ವಯಂ ನಿರ್ಣಯ ಹಕ್ಕು ಹಾಗೂ ಸಂವಿಧಾನಿಕ ಹಕ್ಕುಗಳ ಧ್ವನಿಯೂ ಪ್ರತಿಪಾಧಿಸಲು ಆಗಲಾರದಷ್ಟು ಕ್ಷೀಣಗೊಂಡು ಧಮನಕ್ಕೊಳಗಾಯಿತು. ಕೊಡವರ ವಿರಳ ಸಂಖ್ಯೆಯು ಕೊಡವರ ಪ್ರತ್ಯೇಕ ಅಸ್ತಿತ್ವ ಮತ್ತು ಹೆಗ್ಗುರುತನ್ನು ಜೋಪಾನ ಮಾಡಲು ವಿಶೇಷ ಹಕ್ಕು ಕೇಳಲೆಬಾರದು, ಕೊಡವರೇನಿದ್ದರು ಬಲಾಡ್ಯ ಜನಸಂಖ್ಯಾ ಬಾಹುಳ್ಯದೊಂದಿಗೆ ಗುರುತಿಸಿಕೊಳ್ಳಬೇಕೆನ್ನುವ ಅವ್ಯಕ್ತ ಕಾರ್ಯಸೂಚಿಯೊಂದು ಪಿತೂರಿ ಮಾಡುತ್ತಾ ಬಂತು. ಕೊಡವರು ಭೂದೇವಿ ಅರ್ಥಾತ್ ಅವರ ಜನ್ಮಭೂಮಿ ಕೊಡವಲ್ಯಾಂಡ್, ಜಲದೇವಿ ಕಾವೇರಿ, ವನದೇವಿ/ದೇವಕಾಡ್, ಪಾರಮಾರ್ಥಿಕ ಮಂದ್, ಧಾರ್ಮಿಕ ಸಂಸ್ಕಾರ, ತೋಕ್-ಗನ್, ಗೆಜ್ಜೆತಂಡ್, ಸೂರ್ಯ-ಚಂದ್ರ, ಪರ್ವತ ದೇವಿ, ಗುರು-ಕಾರೋಣ, ಸ್ವರ್ಗೀಯ ದಿವ್ಯಾತ್ಮಗಳು, ತೂಟಂಗಳ-ಕ್ಯಾಕೋಳ (ಸಮಾಧಿ ಸ್ಥಳ) ಗಳನ್ನು ಪೂಜ್ಯಭಾವನೆಯಿಂದ ಆರಾಧಿಸುತ್ತಾರೆ. ಸಪ್ತಪಧಿ ಇಲ್ಲದ ಮದುವೆ, ಮಂಗಳ ಸೂತ್ರ ಪದ್ಧತಿ ಇಲ್ಲದ (ಮದುವೆಯ ಮುನ್ನದಿನ ರಾತ್ರಿ ಮಧುಮಗಳ ತಾಯಿ ಮಧುಮಗಳ ಕೊರಳಿಗೆ ಪವಿತ್ರ ‘ಪತ್ತಾಕ್’ ಕಟ್ಟುವ ವಿಶಿಷ್ಟ ಪರಂಪರೆ ನಡೆದು ಬಂದಿದೆ.) ಕೊಡವರ ಎಲ್ಲಾ ಶುಭಕಾರ್ಯ, ಅಶುಭಕಾರ್ಯಗಳಲ್ಲಿ ಮದ್ಯ ಸಮರಾಧನೆ ಮತ್ತು ಪಂದಿಕರಿ ಬೋಜನ ಕಡ್ಡಾಯ. ತೋಕ್-ಗನ್ ಎಲ್ಲಾ ಕಾರ್ಯದಲ್ಲೂ ಪೂಜಾ ಪರಿಕರವಾಗಿ ಬಳಸುತ್ತೇವೆ. ಈ ರೀತಿಯ ಸಂಸ್ಕಾರವನ್ನ ಆನಿಮಿಸ್ಟಿಕ್ ನಂಬಿಗೆಯ ಜನರೆಂದು ವಿಶ್ವರಾಷ್ಟ್ರ ಸಂಸ್ಥೆ ಗುರುತಿಸಿದೆ.
ಸಂವಿಧಾನವೇ ನಮಗೆ ರಾಜಗುರು, ಧರ್ಮಗುರು. ಆದ್ದರಿಂದ ಕೊಡವರಿಗೆ ರಾಜ್ಯಾಂಗ ಖಾತ್ರಿ ದೊರಕಬೇಕು. ಆ ಮೂಲಕ ಪ್ರಪಂಚದ ಅತ್ಯಂತ ದೊಡ್ಡ ಜನಾಂಗೀಯ ವೈವಿದ್ಯತೆಯ ಮತ್ತು ಬೃಹತ್ ಸಂವಿಧಾನಿಕ ಪಾರ್ಲಿಮೆಂಟರಿ ಪಾರ್ಟಿಸಿಪೇಟರಿ ಪ್ರಜಾತಂತ್ರ ರಾಷ್ಟ್ರವಾದ ಭಾರತದಲ್ಲಿ ನಮ್ಮ ಅಸ್ತಿತ್ವ, ಹೆಗ್ಗುರುತು, ಅಸ್ಮಿತೆ ಉಳಿಯುವುದರೊಂದಿಗೆ ನಮ್ಮ ಜನ್ಮಭೂಮಿಯಲ್ಲಿ ನಮ್ಮ ಚಾರಿತ್ರಿಕ ನಿರಂತರತೆಗೆ ಕಾಯ್ದೆ ಬದ್ಧ ರಕ್ಷಣೆ ದೊರಕಬೇಕಾದರೆ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವ ಎಂದು ದಾಖಲಿಸಬೇಕು. ಈ ಸಂಬಂಧ ಈಗಾಗಲೇ ಈ ರಾಷ್ಟ್ರದ ನುರಿತ ಸಂವಿಧಾನ ತಜ್ಞರು ಮಾನವ ಶಾಸ್ತ್ರ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು ಮತ್ತು ರಾಜಕೀಯ ಶಾಸ್ತ್ರ ವಿಜ್ಞಾನಿಗಳ ಜೊತೆ ಸಂಪರ್ಕ ಮತ್ತು ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಇದೇ ಸಂದರ್ಭ ಎನ್.ಯು.ನಾಚಪ್ಪ ಹೇಳಿದರು. ಹೊರ ರಾಷ್ಟ್ರದ ಬಾಂಗ್ಲದೇಶಿ ರೋಹಿಂಗ್ಯಗಳಿಗೆ ನೆಲೆ ಕಲ್ಪಿಸಲು ಅವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ ಮುಂದೆ ಜನಗಣತಿ ಸಂದರ್ಭ ಅವರನೆಲ್ಲ ಕೊಡವ ಎಂದು ದಾಖಲಿಸಿ ಮತಬ್ಯಾಂಕ್ ವೃದ್ಧಿ ಮಾಡಿಕೊಂಡು ಅವರ ಜನಸಂಖ್ಯಾ ವೃದ್ಧಿಯನ್ನು ತೋರಿಸಿ ಮುಂದೆ ಕೊಡಗಿಗೆ ದುಪ್ಪಟ್ಟು ಮತದಾರರ ಆಧಾರದಲ್ಲಿ ಪಾರ್ಲಿಮೆಂಟ್ ಸೀಟ್ ಬೇಕೆಂದು ಎರಡು ರಾಷ್ಟ್ರೀಯ ರಾಜಕೀಯ ಪಕ್ಷಗಳು ಲಜ್ಜೆಗೇಡಿ ಮತಭಿಕ್ಷೆ ಕಾರ್ಯದಲ್ಲಿ ತೊಡಗಿದ್ದು, ಇದಕ್ಕಾಗಿ ಕೊಡವರ ಭೂಮಿಗಳನ್ನು ಬಲವಂತ ತೆರವುಗೊಳಿಸಿ ಅಲ್ಲಿ ಇವರಿಗೆಲ್ಲ ಭೂಮಿ, ವಸತಿ ನಿರ್ಮಿಸುವ ಒಳಸಂಚು ನಡೆಲಾಗುತ್ತಿದೆ. ಇದಕ್ಕೆ ಪ್ರತಿಭಟಿಸಿದರೆ, ಕೊಡಗಿನಲ್ಲಿ ಕಾರ್ಮಿಕರ ಕೊರತೆಯ ನೆಪ ತೋರಿಸಲಾಗುತ್ತದೆ. ಮುಂದೆ ಹರಾಜಕತೆ ನಿರ್ಮಾಣವಾಗಿ ಸ್ಥಳೀಯರಿಗೆ ರಕ್ಷಣೆ ಇಲ್ಲದಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಕಾರ್ಮಿಕರ ಕೊರತೆ ಇದ್ದರೆ ಟರ್ಕಿ ದೇಶದ ವಲಸಿಗ ಕಾರ್ಮಿಕರನ್ನು ಪ್ಯಾರಿಸ್ನಲ್ಲಿ ಗೆಸ್ಟ್ ವರ್ಕರ್ ಎಂದು ಪರಿಗಣಿಸಲಾಗಿದೆ. ಮೋದಿ-ಶೇಖ್ ಹಸಿನಾ ಒಪ್ಪಂದ 2015ರಲ್ಲಿ ಢಾಕಾದಲ್ಲಿ ನಡೆದಾಗ ಈ ಗೆಸ್ಟ್ ವರ್ಕರ್ ರೀತಿ ಮುನ್ನಲೆಗೆ ಬಂದಿದೆ. ಅದೇ ರೀತಿ ಕೊಡಗಿನಲ್ಲಿ ಹೊರ ರಾಜ್ಯದ ಕಾರ್ಮಿಕರನ್ನು ಗೆಸ್ಟ್ ವರ್ಕರ್ ಪರ್ಮಿಟ್ ಮೇಲೆ ಆಹ್ವಾನಿಸಿ ಕೆಲಸ ಮುಗಿದ ನಂತರ ಅವರ ಊರುಗಳಿಗೆ, ದೇಶಗಳಿಗೆ ಹಿಂತಿರುಗಬೇಕು. ಪುನಃ ಕೃಷಿ ವರ್ಷ ಆರಂಭದಲ್ಲಿ ಅವರ ಗೆಸ್ಟ್ ವರ್ಕರ್ ಪರ್ಮಿಟ್ ನವೀಕರಿಸಬೇಕು, ಈ ನಿಯಮ ಜಾರಿಯಾಗಬೇಕು ಎಂದು ಎನ್.ಯು.ನಾಚಪ್ಪ ಸಲಹೆ ನೀಡಿದರು. 2026-27ರ 16ನೇ ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಕೊಡವರಿಗೆ ಪ್ರತ್ಯೇಕ ಕೋಡ್ ಹಾಗೂ ಕಾಲಮ್ ವ್ಯವಸ್ಥೆ ಮಾಡಬೇಕು. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಸಂವಿಧಾನದಡಿ ಕೊಡವರನ್ನು ಎಸ್ಟಿ ಪಟ್ಟಿಯಲ್ಲಿ ವರ್ಗೀಕರಿಸಬೇಕು. ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಉಳಿಸಬೇಕು, ಸಿಕ್ಕಿಂನ ಬೌದ್ಧ ಸನ್ಯಾಸಿಗಳಿಗೆ ನೀಡಿದ “ಸಂಘ” ಕ್ಷೇತ್ರದಂತೆಯೇ 2026-27 ರ ಮತಕ್ಷೇತ್ರ ಪುನರ್ ವಿಂಗಡಣೆ ನಿರ್ಣಯದ ಸಂದರ್ಭ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ಪ್ರತ್ಯೇಕ ವಿಶೇಷ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು. ವಿಶ್ವರಾಷ್ಟ್ರ ಸಂಸ್ಥೆಯ ಅಂತರಾಷ್ಟ್ರೀಯ ಕಾನೂನಿನಡಿ ಆದಿಮಸಂಜಾತ (ಆನಿಮಿಸ್ಟಿಕ್) ಕೊಡವ ಸಮುದಾಯವನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಜಾತಿ ಜನಗಣತಿಯ ಮೂರೂ ಕಾಲಂಗಳಲ್ಲಿ ಕೊಡವರು ‘ಕೊಡವ’ ಎಂದು ನಮೂದಿಸುವಂತೆ ಕರೆ ನೀಡಿದರು. *ನ.30ರಂದು ಪಾಲಿಬೆಟ್ಟದಲ್ಲಿ ಜನಜಾಗೃತಿ* 21ನೇ ಕೊಡವ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನ.30 ರಂದು ಪಾಲಿಬೆಟ್ಟದಲ್ಲಿ ಮತ್ತು 22ನೇ ಕಾರ್ಯಕ್ರಮ ಡಿ.15 ರಂದು ತಿತಿಮತಿಯಲ್ಲಿ ನಡೆಯಲಿದೆ ಎಂದು ಎನ್.ಯು.ನಾಚಪ್ಪ ಇದೇ ಸಂದರ್ಭ ತಿಳಿಸಿದರು. ಇಲ್ಲಿಯವರೆಗೆ ಬಿರುನಾಣಿ, ಟಿ.ಶೆಟ್ಟಿಗೇರಿ, ಕಡಂಗ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ಮಾದಾಪುರ, ಸುಂಟಿಕೊಪ್ಪ, ಸಿದ್ದಾಪುರ, ನಾಪೋಕ್ಲು, ಗೋಣಿಕೊಪ್ಪ, ವಿರಾಜಪೇಟೆ, ಮೂರ್ನಾಡು, ಚೇರಂಬಾಣೆ, ಚೆಟ್ಟಳ್ಳಿ, ಅಮ್ಮತ್ತಿ, ಶ್ರೀಮಂಗಲ, ಬಿಟ್ಟಂಗಾಲ ಮತ್ತು ಹುದಿಕೇರಿಯಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮಚ್ಚಮಾಡ ಪ್ರಕಾಶ್, ತೀತಿರ ರಘು, ಅಜ್ಜಿಕುಟ್ಟೀರ ಲೋಕೇಶ್, ಕಳ್ಳಿಚಂಡ ದಿಲೀಪ್, ಬಾಚರಣಿಯಂಡ ಚಿಪ್ಪಣ, ಮಾಚಿಮಾಡ ರಾಜು ಅಯ್ಯಣ್ಣ, ಮತ್ರಂಡ ನರೇಂದ್ರ, ಚೋಡುಮಾಡ ಸುಬಯ್ಯ, ಕೊಂಗಂಡ ಸುರೇಶ್ ದೇವಯ್ಯ, ಅಜ್ಜಮಾಡ ಹರೀಶ್, ಎಂ.ಎನ್.ತಿಮ್ಮಯ್ಯ, ಮಚ್ಚಮಾಡ ಕಾರ್ಯಪ್ಪ, ಕೊಟ್ಟಂಗಡ ಶಶಿ, ತೀತಿರ ತಿಮ್ಮಯ್ಯ, ತಾತೀರ ವಾಸು, ಚೋಡುಮಾಡ ರಾಜ, ತೀತಿರ ಮಣಿ, ಮೀದೇರಿರ ತಿಮ್ಮಯ್ಯ, ಕಿರಿಯಮಾಡ ಶೆರಿನ್ ಕೊಡವ, ಮುಕ್ಕಾಟೀರ ದೀಪಕ್, ಚೋಡುಮಾಡ ಅಯ್ಯಪ್ಪ, ತೀತೀರ ರವಿ, ಕಳ್ಳಂಗಡ ಮದನ್, ತಡಿಯಂಗಡ ಜಯರಾಜ್, ತಡಿಯಂಗಡ ಬಾಬು ಶಂಕರ್, ಅಪ್ಪಂಡೇರಂಡ ನಂದಾ, ಪೆಮ್ಮಣಮಾಡ ಡಾಲಿ, ಗುಡಿಯಂಗಡ ಮುತ್ತು, ಮುಕ್ಕಾಟಿರ ನವೀನ್, ಅಪ್ಪಂಡೇರಂಡ ಉತ್ತಪ್ಪ, ಕೊಟ್ರಂಗಡ ಚೆಂಗಪ್ಪ, ಗಾಣಂಗಡ ಬೋಪಯ್ಯ, ಹೊಟ್ಟೆಂಗಡ ಪ್ರಜ್ವಲ್, ಮುಕ್ಕಾಟಿರ ಸುಬ್ರಮಣಿ, ಬೊಟ್ಟಂಗಡ ಗಿರೀಶ್, ತೀತಿರ ದೇವಯ್ಯ, ಅಜ್ಜಿಕುಟ್ಟಿರ ದಿನೇಶ್, ಗುಡಿಯಂಗಡ ಚೆಂಗಪ್ಪ, ನೆಲ್ಲಿರ ದೇವಯ್ಯ, ಕೊಟ್ರಮಾಡ ಕಾರ್ಯಪ್ಪ, ಚಟ್ಟಮಾಡ ಅನಿಲ್, ಕೊಟ್ಟಂಗಡ ರಾಮು, ಕಾಳಮಾಡ ಬೋಸು, ಕಳ್ಳಿಚಂಡ ಸುಬ್ರಮಣಿ, ಮಾಚಿಮಾಡ ಅಪ್ಪಯ್ಯ, ಕಳ್ಳಿಚಂಡ ಬಿ.ಎಸ್.ಸುಬ್ರಮಣಿ, ಕೈಬುಲಿರ ಸುಜನ್ ಬೋಪಣ್ಣ, ನಾಳಿಯಂಡ ಧರ್ಮಜ, ಕೈಪಳೇರ ಬೋಪಯ್ಯ, ಕೊಟ್ರಂಗಡ ಅಪ್ಪಣ್ಣ, ಕಳ್ಳಂಗಡ ರವಿ ಮಾಚಯ್ಯ, ಹೊಟ್ಟೆಂಗಡ ತಿಮ್ಮಯ್ಯ, ಬೊಜ್ಜಂಗಡ ಕಟ್ಟಿ, ಚೇಮಿರ ಗಿರೀಶ್, ಮಾಪಣಮಾಡ ಕಿರಣ್, ಮಾದಪಂಡ ತಿಮ್ಮಯ್ಯ, ಮಲ್ಲಪನೆರ ಚಾಮಿ ಹಾಗೂ ಕೊಟ್ರಂಗಡ ಪ್ರಭು ಪಾಲ್ಗೊಂಡು ಸಿಎನ್ಸಿ ಹೋರಾಟದ ಪರ ಪ್ರತಿಜ್ಞಾವಿಧಿ ಸ್ವೀಕರಿಸಿದರು.











