


ನಾಪೋಕ್ಲು ನ.20 NEWS DESK : ಕ್ರೀಡೆಯು ವ್ಯಾಯಾಮ ಮಾತ್ರವಲ್ಲದೆ ಮನೋರಂಜನೆಯನ್ನು ಸಹ ನೀಡುತ್ತದೆ. ಕ್ರೀಡೆಗಳ ಆಯೋಜನೆಯಿಂದ ಸಮಾಜದಲ್ಲಿ ಪರಸ್ಪರ ಬಾಂಧವ್ಯ ವೃದ್ಧಿಯಾಗಲು ಸಾಧ್ಯ ಎಂದು ಜಿಲ್ಲಾ ಎಸ್.ಎನ್.ಡಿ.ಪಿ ಅಧ್ಯಕ್ಷ ವಿ.ಕೆ. ಲೋಕೇಶ್ ಹೇಳಿದರು. ಕರ್ನಾಟಕ ಪಬ್ಲಿಕ್ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಸೌಹಾರ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆ ಆರ್ಥಿಕವಾಗಿ ಸದೃಢವಾಗಲು ಮೂಲ ಕಾರಣ. ಸಮಾಜದಲ್ಲಿ ಯಾವುದೇ ಧರ್ಮ, ಜಾತಿ, ರಾಜಕೀಯವಿಲ್ಲದೆ ಕ್ರೀಡಾ ಪ್ರತಿಭೆಗಳಿಗೆ ಗೌರವ ಸಿಗುವುದು ಕ್ರೀಡೆಯಿಂದ ಮಾತ್ರ.ವಿವಿಧ ಭಾಗಗಳಿಂದ ಆಗಮಿಸುವ ಕ್ರೀಡಾಪಟುಗಳಿಗೆ ಪರಸ್ಪರ ಸೌಹಾರ್ದಯುತ ವಾಗಿ ಒಗ್ಗೂಡಲು ಕ್ರೀಡೆ ಒಂದು ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು. ಜಿಲ್ಲಾ ಎಸ್ಎನ್ಡಿಪಿ ಸಂಘಟನೆ ಕಾರ್ಯದರ್ಶಿ ಪ್ರೇಮಾನಂದ ಮಾತನಾಡಿ ಎಸ್ಎನ್ಡಿಪಿ ಸಂಘಟನೆ 1903ರಲ್ಲಿ ಮಾನವತಾವಾದಿ ಶ್ರೀ ನಾರಾಯಣ ಗುರುಗಳು ಹುಟ್ಟು ಹಾಕಿದ ಬಲಿಷ್ಠ ಸಂಘಟನೆಯಾಗಿದೆ. ಈ ಸಂಘಟನೆಯು ಇಂದು ಕೊಡಗಿನ ಜಿಲ್ಲಾದ್ಯಂತ 18 ಸಾವಿರಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಿದ್ದು ಶ್ರೀ ನಾರಾಯಣ ಗುರು ಅವರ ಆದರ್ಶಗಳನ್ನು ಪಾಲಿಸಿ ಹತ್ತು ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದರು. ಶ್ರೀ ಪೊನ್ನುಮುತ್ತಪ್ಪ ದೇವಾಲಯದ ಅಧ್ಯಕ್ಷ ಎ.ಕೆ.ಚಂದ್ರನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎನ್.ಡಿ.ಪಿ ನಾಪೋಕ್ಲು ಶಾಖೆಯ ಅಧ್ಯಕ್ಷ ಟಿ.ಸಿ ಲವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಭಾಗಮಂಡಲ ಎಸ್ ಎನ್ ಡಿ ಪಿ ಉಪಾಧ್ಯಕ್ಷ ಕೆ.ಎಸ್.ಸುರೇಶ್, ನಾಪೋಕ್ಲು ಆಟೋ ಚಾಲಕರ ಸಂಘದ ಅಧ್ಯಕ್ಷ ಟಿ.ಪಿ.ಸುಕುಮಾರ್, ಆಚರಣೆ ಸಮಿತಿಯ ಅಧ್ಯಕ್ಷ ಶ್ರೀಧರ್, ಮಾಜಿ ಅಧ್ಯಕ್ಷ ರಾಜೀವ್, ಸಿದ್ದಾಪುರ ಬ್ಯಾಂಕ್ ನಿರ್ದೇಶಕ ಆನಂದ್, ನಾಪೋಕ್ಲು ಎಸ್ ಎನ್ ಡಿಪಿ ಶಾಖೆಯ ಕಾರ್ಯದರ್ಶಿ ಕಿಶೋರ್, ಅಜಿತ್ ಸೇರಿದಂತೆ ಎಸ್ ಎನ್ ಡಿ ಪಿ ಶಾಖೆಯ ಪದಾಧಿಕಾರಿಗಳು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.









