ಕುಶಾಲನಗರ ನ.22 NEWS DESK : ನಾವು ಕನ್ನಡ ಭಾಷೆಯನ್ನು ಪ್ರತಿನಿತ್ಯ ಬಳಸಿದರೆ ಭಾಷೆಯು ತನ್ನಿಂದ ತಾನೇ ಬೆಳೆಯುತ್ತದೆ. ನಮ್ಮ ಕನ್ನಡ ಭಾಷೆ ಅನ್ನದ ಭಾಷೆಯಾಗಬೇಕು. ನೌಕರರ ನೇಮಕಾತಿಗಳಲ್ಲಿ ಕನ್ನಡ ಭಾಷಿಕರಿಗೆ ಮೊದಲ ಆದ್ಯತೆ ಸಿಗಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಬೆಂಗಳೂರಿನ ಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ ಹೇಳಿದರು. ಕುಶಾಲನಗರ ಪಟ್ಟಣದ ಎ.ಪಿ.ಸಿ.ಎಂ.ಎಸ್. ಕನ್ವೆನ್ನನ್ ಸಭಾಂಗಣದಲ್ಲಿ ಜರುಗಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಬೆಂಗಳೂರು, ವೇದಿಕೆಯ ಕೊಡಗು ಜಿಲ್ಲಾ ಘಟಕ, ಸಂಗಮ ಟಿ.ವಿ. ಹಾಗೂ ವಂಶಿ ನ್ಯೂಸ್ ಸಹಯೋಗದೊಂದಿಗೆ ಕನ್ನಡ ಸುವರ್ಣ ಸಂಭ್ರಮ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭ ಹಾಗೂ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಪ್ರತ್ಯೇಕ ಮೀಸಲಾತಿ ಸಿಗಬೇಕು ಎಂದರು. ಕನ್ನಡ ಸಾಹಿತ್ಯ ಪರಂಪರೆ ಬಹಳ ಅಭೂತಪೂರ್ವವಾದದ್ದು, ವೈಶಿಷ್ಟ ಭಾಷೆಯಾದ ಕನ್ನಡ ಭಾಷೆಯಲ್ಲಿರುವ ಪ್ರಭೇದ, ಪ್ರಕಾರಗಳು, ಷಟ್ಪದಿ, ರಗಳೆಗಳಂತ ಸಾಹಿತ್ಯ ಬೇರೆ ಯಾವ ಭಾಷೆಗಳಲ್ಲೂ ಕಾಣಸಿಗುವುದಿಲ್ಲ. ಜನಪದ ಸಾಹಿತ್ಯ ಮತ್ತು ವಚನ ಸಾಹಿತ್ಯಗಳು ಕನ್ನಡ ಸಾಹಿತ್ಯಕ್ಕೆ ಮಹತ್ವದ ವೇದಿಕೆಯ ಅಡಿಪಾಯ ಹಾಕಿದವು. ಜನಪದರು ಶರಣರು ಅನುಭಾವದ ನೆಲೆಯಲ್ಲಿ ಸಾಹಿತ್ಯವನ್ನು ಕಟ್ಟಿ ಬೆಳೆಸಿದರು ಎಂದರು. ಕೊಡಗಿನಲ್ಲಿ ಕೊಡಗಿನ ರಾಣಿಯಾದ ಗೌರಮ್ಮ ಮೊದಲನೇ ತಲೆಮಾರಿನ ಕಥೆಗಾರ್ತಿಯಾಗಿದ್ದರು, ಕರ್ನಾಟಕದಲ್ಲಿ ಕನ್ನಡ ಭಾಷೆಯ ಜೊತೆಗೆ ಅನೇಕ ಉಪಭಾಷೆಗಳಿವೆ ಆದ್ದರಿಂದ ಇದು ಕನ್ನಡ ರಾಜ್ಯೋತ್ಸವ ಮಾತ್ರವಲ್ಲ ಕರ್ನಾಟಕದ ರಾಜ್ಯೋತ್ಸವ ಎಂದು ಉಪ್ಪಾರ ಬಣ್ಣಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆಯ ಕ್ಷೇತ್ರ ಕಿರಿಕೊಡ್ಲಿ ಮಠದ ಸದಾಶಿವಸ್ವಾಮೀಜಿ ಮಾತನಾಡಿ, ಕನ್ನಡ ಭಾಷೆಯು ನೆಲ- ಜಲದ ಉಳಿವಿಗಾಗಿ ಈ ನಾಡಿನ ಅನೇಕ ಕನ್ನಡ ಪರ ಸಂಘಟನೆಗಳು ನಿರಂತರ ಹೋರಾಟದಲ್ಲಿ ತೊಡಗಿಸಿಕೊಂಡಿವೆ, ಆ ನಿಟ್ಟಿನಲ್ಲಿ ಎಲೆ ಮರೆಯಕಾಯಿಯಂತೆ ಕಾರ್ಯ ನಿರ್ವಹಿಸುತ್ತಿರುವ ಅನೇಕ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನಿಸುತ್ತಿರುವುದು ಪ್ರಶಂಸನೀಯವಾದುದು ಎಂದರು. ಸಾಹಿತಿ ಉ.ರಾ. ನಾಗೇಶ್ ಮಾತನಾಡಿ, ರಂಗಭೂಮಿ ಬಯಲಾಟ ಹರಿಕಥೆ, ಕನ್ನಡದಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ , ಮುಂತಾದವುಗಳು ಭಾಷೆಯನ್ನು ಕಟ್ಟಿ ಸಮೃದ್ಧವಾಗಿ ಬೆಳೆಸುವಲ್ಲಿ ಆಮೂಲಾಗ್ರ ಕೊಡುಗೆಯನ್ನು ನೀಡಿವೆ , ಎಲ್ಲಿ ಭಾಷೆ ನಾಶವಾಗುತ್ತಾ ಹೋಗುವುದೋ ಅಲ್ಲಿ ಸಂಸ್ಕೃತಿ ವಿನಾಶದತ್ತ ಸಾಗುತ್ತದೆ, ಈ ನಿಟ್ಟಿನಲ್ಲಿ ಅನ್ಯ ಭಾಷೆಗಳನ್ನು ಪ್ರೀತಿಸುವುದರೊಂದಿಗೆ ಮಾತೃ ಭಾಷೆ ಕನ್ನಡವನ್ನು ಬಳಸಿ ಉಳಿಸಿ ಬೆಳಸಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ರಘು ಕೋಟಿ ಮಾತನಾಡಿ, ಕನ್ನಡ ಭಾಷೆ ಸಂಸ್ಕೃತಿ ಉಳಿವಿಗಾಗಿ ತೆರೆಮರೆಯಲ್ಲಿ ಶ್ರಮಿಸುವ ಕನ್ನಡದ ಕಟ್ಟಾಳುಗಳನ್ನು ಗುರುತಿಸಿ ಸನ್ಮಾನಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಪ್ರಶಸ್ತಿ ಪುರಸ್ಕಾರಗಳು ಲಾಭಿಗಳಾಗಬಾರದು, ಅದು ನಿಜವಾದ ಅರ್ಹರಿಗೆ ಲಭಿಸುವಂತಾಗಬೇಕು ಆದ್ದರಿಂದ ಇಂತಹ ಕಾರ್ಯಕ್ರಮಗಳನ್ನು, ಹಮ್ಮಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮಹಿಳಾ ಆಟೋ ಚಾಲಕಿಯರು ಹಾಗೂ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಡುವೆ ಕಾವ್ಯ ವಾಚನ, ಶಾಲಾ ಮಕ್ಕಳ ನೃತ ಪ್ರದರ್ಶನ, ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ವಿತರಣೆ ಮುಂತಾದ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭ ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಕಿರಣ್ ಜಿ ಗೌರಯ್ಯ,
ಕನ್ನಡದ ಕಿರುತೆರೆ ಕಲಾವಿದೆ ಎಚ್.ಎಂ. ಮೀನಾಕ್ಷಿ, ಮುಂಬೈನ ಉದ್ಯಮಿ. ಸದಾಶಿವ ಬಿ.ಎನ್. ಶೆಟ್ಟಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷೆ ರಾಣಿ ರವೀಂದ್ರ, ಚಿರನಹಳ್ಳಿ ಮಂಜುನಾಥ್, ಹೆಚ್. ಜೆ.ಜವರ, ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣದ ಬಿ.ಎ. ದಿನೇಶ್ ಶೆಟ್ಟಿ , ವಿವಿಧ ಕನ್ನಡಪರ ಸಂಘಟನೆಯ ಪದಾಧಿಕಾರಿಗಳು, ವಿವಿಧ ಶಾಲೆಯ ಶಿಕ್ಷಕರು ಮಕ್ಕಳು ಸಾರ್ವಜನಿಕರು ಉಪಸ್ಥಿತರಿದ್ದರು.











