
ವಿರಾಜಪೇಟೆ ನ.25 NEWS DESK : ಭೌವ್ಯ ಪರಂಪರೆಯ, ವಿವಿಧತೆಯಲ್ಲಿ ಏಕತೆ ಕಂಡ ಜಾನಪದ ಸೊಗಡು ಕಂಡ ಭಾಷೆ ಕನ್ನಡ. ಇತರ ಭಾಷೆಗಳನ್ನು ಗೌರವಿಸಿ ತಾಯಿ ಕನ್ನಡ ಭಾಷೆಯನ್ನು ಧೀಮಂತಗೊಳಿಸುವ ಪ್ರಯತ್ನ ನಿರಂತರವಾಗಿ ಸಾಗಬೇಕು ಎಂದು ಕೊಡಗು ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಅಶೋಕ ಸಂಗಪ್ಪ ಆಲೂರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸೈಂಟ್ ಆನ್ಸ್ ಪದವಿ ಕಾಲೇಜು ಕನ್ನಡ ಭಾಷಾ ವಿಭಾಗ, ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು, ಮತ್ತು ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಕನ್ನಡ ರಾಜ್ಯೋತ್ಸವ ದ ಅಂಗವಾಗಿ ನುಡಿ ನಡೆ ಯುವಜನರ ಕಡೆ ಶೀರ್ಷಿಕೆ ಅಡಿಯಲ್ಲಿ ನುಡಿ ಉತ್ಸವ ಅಂತರ್ ತರಗತಿ ಕನ್ನಡ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಕುಲಪತಿಗಳು ಧೀಮಂತ ಸಂಸ್ಕೃತಿ ಹೊಂದಿರುವ ಕನ್ನಡ ಭಾಷೆಯನ್ನು ಪೋಷಕರು ಮನೆಯಿಂದ, ಶಿಕ್ಷಕರು ವಿದ್ಯಾಲಯದಿಂದ ತಿಳಿಯಪಡಿಸುವಂತಾಗಬೇಕು. ನಾವೇ ಭಾಷೆಗೆ ಗೌರವವಿತ್ತು ಇತರರಿಗೆ ಧಾರೆಯೆರೆಯುವಂತಾಗಬೇಕು. ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಪಡೆದ ಹಲವು ವಿದ್ವಾಂಸರು ಧೀಮಂತ ಸಾಹಿತ್ಯ ರಚನೆ ಮಾಡಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಕನ್ನಡ ವಾಗಿದೆ. ಕನ್ನಡ ಭಾಷೆಯ ಮೇಲೆ ಹಲವು ಭಾಷೆಗಳ ಪ್ರಭಾವದಿಂದಾಗಿ ವಾಕ್ಯ ಬಳಕೆ ಮಾಡುವ ಸಂಧರ್ಭ ಒಂದು ಕನ್ನಡ ಪದವಾದರೇ ಇತರ ಭಾಷೆಗಳ ಬಳಕೆ ಅಧಿಕವಾಗಿ ಬಳಕೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಕನ್ನಡ ರಾಜ್ಯೋತ್ಸವ ಆಚರಣೆ ಸಂಧರ್ಭದಲ್ಲಿ ಪ್ರಸ್ತುತ ನುಡಿ ಗೀತಗಾಯನ ಸ್ಪರ್ಧೆ ಯು ವಿಶೇಷವಾಗಿ ಯುವ ಸಮೂದಾಯವನ್ನು ಪ್ರೇರೆಪಿಸುವ ಕಾರ್ಯಕ್ರಮವಾಗಿದೆ. ಇದು ನಿಮ್ಮಿಂದಲೇ ಆರಂಭವಾಗಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ನಾಡು, ನುಡಿ, ಸಂಸ್ಕೃತಿ, ಜನಪದ ಉಳಿಯಬೇಕು. ಮತ್ತು ಮುಂದಿನ ತಲೆಮಾರಿನ ಯುವ ಪೀಳಿಗೆಯು ಕನ್ನಡ ಭಾಷೆಯನ್ನು ಧೀಮಂತ ಶ್ರೀಮಂತಗೊಳಿಸುವಂತೆ ಕರೆ ನೀಡಿದರು. ಸೈಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ಭಾಷಾ ವಿಭಾಗ ದ ಮುಖ್ಯಸ್ಥರು ಮತ್ತು ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅರ್ಜುನ್ ಮೌರ್ಯ ಅವರು ಪ್ರಾಸ್ತಾವಿಕ ಭಾಷಣದಲ್ಲಿ ಕನ್ನಡ ಭಾಷೆಯನ್ನು ಶ್ರೀಮಂತ ಗೊಳಿಸಲು ಆಡಳಿತ, ಕಲಿಕೆ ಹಾಗೂ ಪ್ರಚಲಿತ ವಿದ್ಯಮಾನಗಳಲ್ಲಿ ಕನ್ನಡ ಭಾಷೆಯನ್ನು ಬಲಿಷ್ಟಗೊಳಿಸಲು ಕಾಲೇಜು ಯುವ ಸಮುದಾಯದಲ್ಲಿ ವಿಶೇಷ ಪ್ರಯತ್ನ ಅಂಗವಾಗಿ ನುಡಿಗೀತಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ. ಎಲ್ಲಾ ಕಾಲೇಜುಗಳಲ್ಲಿ ಅಂತರ್ ತರಗತಿ ಗೀತ ಗಾಯನ ಸ್ಪರ್ಧೆ ನಡೆಸಲಾಗುತ್ತದೆ. ಕನ್ನಡ ರಾಜ್ಯೋತ್ಸವದ ಆಚರಣೆಗಳು ತಿಂಗಳಿಗೆ ಮಾತ್ರ ಸೀಮಿತವಾಗಿರದೆ ನಿರಂತರವಾಗಿ ಸಾಗುವ ಉದ್ದೇಶ ಹೊಂದಿರುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.ನುರಿತ ಕಲೆ ಅರಿತ ತೀರ್ಪುಗಾರರಿಂದ ಸ್ಪರ್ಧೆ ಯ ತೀರ್ಪು ನೀಡಲಾಗುತಿದ್ದು ಮುಂದೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಲಾಗುತ್ತದೆ. ಚಾಲನೆ ಕಾರ್ಯಕ್ರಮದಲ್ಲಿ ಆರಂಭದಲ್ಲಿ 10 ತಂಡಗಳು ಭಾಗವಹಿಸಲಿದೆ. ಜಾನಪದ, ಕರ್ನಾಟಿಕ್ ಮತ್ತು ಶಾಸ್ತ್ರೀಯ ಸಂಗೀತ ಕನ್ನಡ ಭಾಷಾ ಆಧಾರಿತ ಗುಂಪು ಗಾಯನ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೈಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕರಾದ ರೆ. ಫಾ. ಮದಲೈ ಮುತ್ತು ಅವರು ಕನ್ನಡ ಭಾಷೆ ಧೀಮಂತವಾಗಿ ಬೆಳೆಯಬೇಕಾದರೆ ಕನ್ನಡ ಭಾಷೆಯ ಮೇಲೆ ಇತರ ಭಾಷೆಗಳ ಪ್ರಭಾವ ಕಡಿಮೆಯಾಗಬೇಕು. ದೇಶ ವಿದೇಶಗಳಲ್ಲಿ ನಾವು ನೆಲೆ ಕಂಡರು ತಾಯಿ ಭಾಷೆಯನ್ನು ಮರೆತು ಜೀವಿಸಬಾರದು. ನಾಡು ನುಡಿ ಮತ್ತು ಸಂಸ್ಕೃತಿಗಳ ಬಗ್ಗೆ ಅಭಿಮಾನ ಪ್ರೀತಿ ತೋರಿದಲ್ಲಿ ಮಾತ್ರ ಕನ್ನಡ ಭಾಷಾಭಿಮಾನ ಉತ್ತುಂಗಕ್ಕೇರುತ್ತದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆಯು ಉತ್ತಮವಾಗಿ ಮೂಡಿಬಂದಿದೆ. ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಪಿ.ರಾಜೇಶ್ ಪದ್ಮನಾಭ, ನುಡಿ ಉತ್ಸವ ಸಮಿತಿ ಸಂಚಾಲಕರಾದ ಅಬ್ದುಲ್ ರೆಹಮಾನ್, ಸೈಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ,ಐ ಕ್ಯೂ ಎ ಸಿ ಸಂಯೋಜಕರಾದ ಹೇಮ ಬಿ.ಡಿ ಅವರುಗಳು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸೈಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ವಿದ್ಯಾರ್ಥಿ ಬಳಗ, ನುಡಿ ಉತ್ಸವ ಸಮಿತಿಯ ಸದಸ್ಯರು, ಪದವಿ ಕಾಲೇಜಿನ ಉಪನ್ಯಾಸಕರುಗಳು, ಕನ್ನಡ ಸಾಹಿತ್ಯ ಪರಿಷತ್ತು ನ ಸದಸ್ಯರು ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ವಿದ್ಯಾರ್ಥಿನಿ ಮೇಘನ ಸ್ವಾಗತಿಸಿದರು, ಉಪನ್ಯಾಸಕರಾದ ಮಾಲಿನಿ ಮುತ್ತಮ್ಮ ಹಾಗೂ ತಮ್ಮಯ್ಯ ನಿರೂಪಿಸಿದರು, ವಿದ್ಯಾರ್ಥಿ ಮುತ್ತಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಎಲ್ಲಾ ವಿಭಾಗಗಳ ತಂಡ ಮತ್ತು ಎಂ.ಕಾಂ. ಸ್ನಾತಕೋತ್ತರ ಪದವಿ ವಿಭಾಗದ 10 ತಂಡಗಳ ವಿಧ್ಯಾರ್ಥಿಗಳು ನುಡಿ ಗೀತಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೊಡಗಿನ ಜಾನಪದ ಕಲೆಗಳಾದ ಪರೆಯ ಕಳಿ ಮತ್ತು ಉಮ್ಮತ್ತಾಟ್ ಪ್ರದರ್ಶನ ವಿಧ್ಯಾರ್ಥಿಗಳಿಂದ ಮೂಡಿಬಂದಿತು. ಚಿತ್ರಕಲಾ ಶಿಕ್ಷಕರಾದ ಬಸವರಾಜ ಬಡಿಗೇರ್ ಮತ್ತು ಶಾಸ್ತ್ರೀಯ ಸಂಗೀತ ಕಲಾವಿದರಾದ ಚಂದ್ರಶೇಖರ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.









