ಮಡಿಕೇರಿ, NEWS DESK ಫೆ.27 : ರಾಜ್ಯದ 2026-27ರ ಬಜೆಟ್ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಮಾ.11ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಬೆಂಗಳೂರು ಚಲೋ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಕೊಡಗು ಜಿಲ್ಲೆಯ ನೂರಾರು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಚಲೋ ಪ್ರತಿಭಟನೆಯ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು ಎಸ್ಸಿಎಸ್ಪಿ/ ಟಿಎಸ್ಪಿ ಗೆ ಶೇ.24.1ರಷ್ಟು ಅನುದಾನ ಮೀಸಲಿರಿಸಬೇಕು, ಹಣ ದುರ್ಬಳಕೆ ತಡೆಯಲು ಕಾಯ್ದೆಯ ಸೆಕ್ಷನ್ 7 (ಸಿ) ರದ್ದುಪಡಿಸಬೇಕು, ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿದ ರೂ.25 ಸಾವಿರ ಕೋಟಿಯನ್ನು ಮರಳಿ ನೀಡಬೇಕು, ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರಿಗೆ “ಕರ್ನಾಟಕ ರತ್ನ” ಪ್ರಶಸ್ತಿ ಘೋಷಿಸಬೇಕು, ಅವರ ಜನ್ಮದಿನ ಜೂ.9 ಅನ್ನು ರಜಾರಹಿತ ದಿನವನ್ನಾಗಿ ಆಚರಣೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಪ್ರತಿಭಟನೆಯ ಸಂದರ್ಭ ಮಂಡಿಸಲಾಗುವುದು ಎಂದರು.

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ಖರೀದಿಸುವ ಜಮೀನು ದರ ಅವೈಜ್ಞಾನಿಕವಾಗಿದೆ. ಖಾಸಗಿ ಜಮೀನು ಬೆಲೆ ದುಬಾರಿಯಾಗಿದ್ದು, ವಸತಿ ಇಲಾಖೆ ಹೊರಡಿಸಿರುವ ಆದೇಶವನ್ನು ಪರಿಷ್ಕರಿಸಿ ಭೂಮಿಯ ದರ ಹೆಚ್ಚಿಸಿ ಆದೇಶ ಹೊರಡಿಸಬೇಕು.
ಖಾಲಿ ನಿವೇಶನ(ಖಾಲಿ ಜಾಗ) ಹೊಂದಿರುವ ವಸತಿ ಸೌಲಭ್ಯ ವಂಚಿತರಿಗೆ ವಸತಿ ಮಂಜೂರು ಮಾಡಬೇಕು. ಕಟ್ಟಡ ನಿರ್ಮಾಣ ಸಾಮಾಗ್ರಿಗಳ ದರ ಹೆಚ್ಚಾಗಿರುವುದರಿಂದ ವಸತಿ ನಿರ್ಮಾಣ ವೆಚ್ಚ ಕನಿಷ್ಟ ರೂ.5 ಲಕ್ಷಕ್ಕೆ ಏರಿಕೆ ಮಾಡಬೇಕು.
ಸ್ವಂತ ನಿವೇಶನ ಹೊಂದಿರದ ವಸತಿ ರಹಿತರಿಗಾಗಿ ಸರಕಾರಿ ಭೂಮಿ ಗುರುತಿಸಬೇಕು. ಸರಕಾರಿ ಭೂಮಿ ಲಭ್ಯವಿರದಿದ್ದರೆ ಖಾಸಗಿ ಭೂಮಿ ಖರೀದಿಸಿ ವಸತಿ ಬಡಾವಣೆ ರಚಿಸಿ ವೇಶನ ಹಂಚಿಕೆ ಮಾಡಬೇಕು. ಇದೂ ಸಾಧ್ಯವಾಗದಿದ್ದಲ್ಲಿ ನಿವೇಶನ ಖರೀದಿಸಲು ಪ್ರತಿ ಕುಟುಂಬಕ್ಕೆ ರೂ.5 ಲಕ್ಷ ಆರ್ಥಿಕ ನೆರವು ನೀಡಬೇಕು.
ಬಗರ್ ಹುಕುಂ ಸಾಗುವಳಿದಾರರು ಸಕ್ರಮಕ್ಕಾಗಿ ಸಲ್ಲಿಸಿರುವ ನಮೂನೆ-57ರ ಅರ್ಜಿಗಳನ್ನು ಸೂಕ್ತ ಕಾರಣವನ್ನು ನೀಡದೆ ಏಕಪಕ್ಷೀಯವಾಗಿ ತಿರಸ್ಕಾರ ಮಾಡುತ್ತಿರುವುದರಿಂದ ಬೇರೆ ಭೂಮಿ ಇಲ್ಲದೆ, ಇದೇ ಭೂಮಿಯಲ್ಲಿ ಸಾಗುವಳಿ ಮಾಡಿ ಉಪ ಜೀವನ ಸಾಗಿಸುತ್ತಿರುವ ಬಡವರನ್ನು ಭೂ ಹಕ್ಕಿನಿಂದ ಒಕ್ಕಲೆಬ್ಬಿಸದೆ ಸಕ್ರಮಗೊಳಿಸಿ ಹಕ್ಕು ಪತ್ರ ನೀಡಬೇಕು. ಪರಿಶಿಷ್ಟ ಜಾತಿ /ಪರಿಶಿಷ್ಟ ವರ್ಗಗಳ ಭೂ ಪರಭಾರೆ ನಿಷೇಧ ಕಾಯ್ದೆಯಲ್ಲಿ ಪ್ರಸ್ತುತ ಬಳಸಿರುವ ಪದವನ್ನು ಬದಲಾಯಿಸಿ ನಿರ್ದಿಷ್ಟ ಜಾಗ ಎಂದು ತಿದ್ದುಪಡಿ ಮಾಡಬೇಕು.
ಅರಣ್ಯ ಮತ್ತು ಅರಣ್ಯಾಧಾರಿತ ಆದಿವಾಸಿ ಕುಟುಂಬಗಳ ವಸತಿ ರಹಿತರಿಗಾಗಿ ಮುಖ್ಯಮಂತ್ರಿ ಆದಿವಾಸಿ ಗೃಹಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಬೇಕು. ಸಾಮಾಜಿಕ ಭದ್ರತಾ ಯೋಜನೆಗಳಡಿ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ದೇವದಾಸಿಯರು, ವಿಧವಾ ಮಹಿಳೆಯರು ಹಾಗೂ ಅಂಗವಿಕಲರಿಗೆ ನೀಡುತ್ತಿರುವ ಮಾಸಾಶನ ರೂ 5000 ವರೆಗೆ ಹೆಚ್ಚಿಸಬೇಕು. ಸಮಾಜ ಕಲ್ಯಾಣ ಕಲ್ಯಾಣ ಇಲಾಖೆ ಅಧೀನದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆರ್ಥಿಕ ಅಭಿವೃದ್ಧಿಗಾಗಿ ಅನುಷ್ಠಾನಗೊಳಿಸುತ್ತಿರುವ ಗಂಗಾ ಕಲ್ಯಾಣ, ಭೂ ಒಡೆತನ, ನೇರಸಾಲ, ಉದ್ಯಮಶೀಲತಾ, ಸ್ವಾವಲಂಬಿ ಸಾರಥಿ ಯೋಜನೆ ಸಾಲ ಸೌಲಭ್ಯ ಯೋಜನೆಗಳ ಘಟಕ ವೆಚ್ಚ ದ್ವಿಗುಣವಾಗಿಸಿ ಗುರಿ ಹೆಚ್ಚಳ ಮಾಡಬೇಕು.
ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ (ಲಿಡ್ಕರ್) ನಿಗಮಕ್ಕೆ ರೂ.500 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಪರಿಶಿಷ್ಟ ಜಾತಿಯ ಚರ್ಮ ಕುಶಲ ಕರ್ಮಿಗಳ ಉತ್ಪನ್ನಗಳ ಮಾರುಕಟ್ಟೆಯ ಪ್ರಗತಿಗಾಗಿ ಆರ್ಥಿಕ ಇಲಾಖೆಯಿಂದ ಟೆಂಡರ್ ವಿನಾಯಿತಿಗಾಗಿ ರೂ.100 ಕೋಟಿಗೆ ಮೀಸಲಿರಿಸಿ ಆದೇಶ ಹೊರಡಿಸಬೇಕು ಹಾಗೂ ನಿಗಮದ ಎಲ್ಲಾ ಟೆಂಡರ್ ಗಳನ್ನು ಪರಿಶಿಷ್ಟ ಜಾತಿಯ ಚರ್ಮ ಕುಶಲ ಕರ್ಮಿಗಳ ಘಟಕಕ್ಕೆ ವಿನಾಯಿತಿಯೊಂದಿಗೆ ನೀಡಬೇಕು.
ಸಮಾಜ ಕಲ್ಯಾಣ ಇಲಾಖೆ ಅಧೀನ ಬರುವ ವಸತಿ ಶಾಲೆ ಮತ್ತು ವಸತಿ ನಿಲಯಗಳಲ್ಲಿ ಕಳೆದ 5 ವರ್ಷಗಳ ಮೇಲ್ಪಟ್ಟು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ /ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು. ಬೆಲೆ ಏರಿಕೆಗೆ ತಕ್ಕಂತೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಮಾಸಿಕ ಭೋಜನ ವೆಚ್ಚ ರೂ.3 ಸಾವಿರದ ವರೆಗೆ ಹೆಚ್ಚಳ ಮಾಡಬೇಕು.

ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳನ್ನು ವಸತಿ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸಬೇಕು ಹಾಗೂ ಹಾಸ್ಟೆಲ್ ಪ್ರವೇಶ ಬಯಸಿ ಅರ್ಜಿ ಹಾಕಿದ ವಿದ್ಯಾರ್ಥಿಗಳ ಬೇಡಿಕೆಗನುಗುಣವಾಗಿ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಸತಿ ನಿಲಯ ಮತ್ತು ವಸತಿ ಶಾಲೆ ಸ್ಥಾಪಿಸಬೇಕು.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಜಾರಿಗೊಳಿಸಿದ “ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ- 2020″ಅನ್ನು ತಕ್ಷಣ ರದ್ದುಪಡಿಸಬೇಕು ಮತ್ತು ಭಾರತದಿಂದ ವಿದೇಶಗಳಿಗೆ ಆಗುತ್ತಿರುವ ದನ ಮಾಂಸ ರಫ್ತು ನಿಲ್ಲಿಸಬೇಕು ಎಂದು ಪ್ರತಿಭಟನೆಯ ಸಂದರ್ಭ ಒತ್ತಾಯಿಸುವುದಾಗಿ ಗಾಯತ್ರಿ ನರಸಿಂಹ ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯಲ್ಲಿರುವ ಆದಿವಾಸಿಗಳು ಹೀನಾಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದು, ಇವರಿಗೆ ನಿವೇಶನ ಮತ್ತು ವಸತಿ ಸೌಲಭ್ಯ ನೀಡಿ ಸ್ವತಂತ್ರವಾಗಿ ಬದುಕು ಸಾಗಿಸಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಭೋಜ ಪಿ., ಮಡಿಕೇರಿ ತಾಲ್ಲೂಕು ಮಹಿಳಾ ಸಂಚಾಲಕಿ ಗೌರಮ್ಮ ಹೆಚ್.ಹೆಚ್, ಪೊನ್ನಂಪೇಟೆ ತಾಲ್ಲೂಕು ಸಂಚಾಲಕ ಗಣೇಶ ಪಿ.ಜಿ, ಸದಸ್ಯರುಗಳಾದ ನಿತಿನ್ ಪಿ.ಪಿ ಹಾಗೂ ಕಾವೇರಿ ಪಿ.ಕೆ ಉಪಸ್ಥಿತರಿದ್ದರು.







