
ಮಡಿಕೇರಿ ಮಾ.9 NEWS DESK : ಕೊಡಗಿನ ಸಂಸ್ಕೃತಿಯ ಮೂಲ ಸ್ವರೂಪ ಪ್ರಕೃತಿ ಆರಾಧನೆ, ನೀರು, ಕಾಡು, ಪರಿಸರಗಳನ್ನು ಪೂಜಿಸುವುದು ಮತ್ತು ವೀರ ಪರಂಪರೆ ಇವು ಕೊಡಗಿನ ಸಂಸ್ಕೃತಿ ಎಂದು ಕೊಡಗು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಧೋಶ್ ಪೂವಯ್ಯ ನುಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗೋಣಿಕೊಪ್ಪಲು ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ 2025-26ನೇ ಸಾಲಿನ ದಿ.ಇರುವೈಲು ರಘುರಾಮ ಅಸ್ರಣ್ಣ ಮತ್ತು ಲೀಲಾ ಅಸ್ರಣ್ಣ ಜ್ಞಾಪಕಾರ್ಥ ದತ್ತಿ ಕಾರ್ಯಕ್ರಮದ ಆಶಯದಂತೆ ಕೊಡಗಿನ ಸಾಂಸ್ಕೃತಿಕ ಚಿಂತನೆ ಕುರಿತು ಉಪನ್ಯಾಸ ನುಡಿದರು. ಕೊಡಗಿನ ಬೇರೆ ಬೇರೆ ಜನಾಂಗಗಳು ತಮ್ಮದೇ ಆದ ರೀತಿಯಲ್ಲಿ ಜನಪದ ಹಾಡು ಮತ್ತು ನೃತ್ಯಗಳ ಮೂಲಕ ಕೊಡಗಿನ ಸಂಸ್ಕೃತಿಗೆ ಕೊಡುಗೆ ನೀಡಿದ್ದಾರೆ. ಕೊಡವ ಜನಾಂಗದ ದುಡಿಕೊಟ್ಟ್ ಪಾಟ, ಬಾಳೋಪಾಟ, ಮಂಗಲಪಾಟ, ದೇವಡಪಾಟ, ಬೆಂದುಪಾಟ, ಕೊಡಗಿನ ಜಾನಪದ ನೃತ್ಯಗಳಾದ ಉಮ್ಮತ್ತಾಟ್, ಬೊಳ್ಕಾಟ್, ಕತ್ತಿಯಾಟ್, ಪುತರಿ ಕೋಲಾಟ್ ಮುಂತಾದ ಸಮರಕಲೆಗಳು, ಅರೆ ಭಾಷೆ ಜನಾಂಗದವರ ಸೋಬಾನೆ ಹಾಡು, ಒಕ್ಕಲಿಗ ಜನಾಂಗದ ಸಿಡಿಯಾಟ್, ಸುಗ್ಗಿ ಕುಣಿತ,ಯಾರವ ಮತ್ತು ಕುರುಬರ ಹಾಡು ಮತ್ತು ನೃತ್ಯಗಳು ಅಲ್ಲದೆ ಹೊರ ಜಿಲ್ಲೆಗಳಿಂದ ಬಂದು ನೆಲೆ ನಿಂತಿರುವ ಹಲವಾರು ಜನಾಂಗಗಳು ಕೊಡಗಿನ ಸಾಂಸ್ಕೃತಿಕ ಲೋಕಕ್ಕೆ ಕೊಡುಗೆಗಳನ್ನು ನೀಡಿದೆ. ರಂಗಭೂಮಿ ಮತ್ತು ಜನಪದ ರಂಗಭೂಮಿ, ಸಿನೆಮಾ ಕೂಡ ಕೊಡಗಿನ ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತ್ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ವಿಷಯಗಳನ್ನು ಅಭಿವೃದ್ಧಿ ಗೊಳಿಸುವ ಕಾರ್ಯಕ್ರಮಗಳನ್ನು ನಡೆಸುವುದೇ ಸಾಹಿತ್ಯ ಪರಿಷತ್ತಿನ ದತ್ತಿ ಕಾರ್ಯಕ್ರಮಗಳ ಧ್ಯೇಯ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಗೋಣಿಕೊಪ್ಪಲು ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಕೆ.ಚಿನ್ನಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ಶಾಲೆಯ ವಿದ್ಯಾರ್ಥಿಗಳಿಗ ಕೊಡಗಿನ ಸಂಸ್ಕೃತಿಯ ಪರಿಚಯ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತೋಷದ ವಿಚಾರ ಎಂದರು. ದತ್ತಿದಾನಿಗಳ ಆಶಯದಂತೆ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ 2024-25 ನೇ ಸಾಲಿನ 10ನೇ ತರಗತಿಯ ಕನ್ನಡ ಮಾಧ್ಯಮ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸೋಮವಾರಪೇಟೆ ತಾಲೂಕಿನ ನೀಡ್ತಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕು. ಜೆ ಎಸ್ ಪೂರ್ವಿಕ ರವರನ್ನು ಗೌರವಿಸಲಾಯಿತು. ಗೋಣಿಕೊಪ್ಪಲು ಪ್ರೌಢಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಕುಪ್ಪಂಡ ಗಣೇಶ ತಿಮ್ಮಯ್ಯ, ಶಾಲೆಯ ಪ್ರಾಂಶುಪಾಲ ಕೃಷ್ಣ ಚೈತನ್ಯ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ವಿದ್ಯಾರ್ಥಿಗಳಿಗೆ ನಾಡು ನುಡಿಯ ಪರಿಚಯದ ಜೊತೆಗೆ ಸಾಮಾನ್ಯ ಜ್ಞಾನದ ಕುರಿತು ಅಭ್ಯಾಸ ಮಾಡುವ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಮೊಬೈಲ್ ನಿಂದ ಹೊರಬಂದು ಗ್ರಂಥಾಲಯದ ಕಡೆಗೆ ಮುಖ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಟಿ.ಆರ್.ವಿನೋದ್ ಪೂರ್ವಿಕಾ ಅವರ ಪೋಷಕರಾದ ಸುರೇಶ್ ಮತ್ತು ಲೀಲಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೋಣಿಕೊಪ್ಪಲು ಪ್ರೌಢಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಅಧ್ಯಾಪಕರು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.









