
ಮಡಿಕೇರಿ ಮಾ.13 NEWS DESK : ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಅಮಾಯಕ ಮಾನವ ಜೀವಗಳು ಬಲಿಯಾಗುತ್ತಿದ್ದರೂ ರಾಜ್ಯ ಸರಕಾರ ಹಾಗೂ ಅರಣ್ಯ ಇಲಾಖೆ ಯಾವುದೇ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿ ಅರಣ್ಯ ಭವನದ ಎದುರು ಪ್ರತಿಭಟನೆ ನಡೆಸಿತು. ಸಮೀಪದ ಹೆದ್ದಾರಿ ತಡೆದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಳೆದ ಎರಡು ವಾರಗಳಲ್ಲಿ ಸಿದ್ದಾಪುರ ವಿಭಾಗದಲ್ಲಿ ಇಬ್ಬರು ವ್ಯಕ್ತಿಗಳು ಹಾಗೂ ಬೆಟ್ಟತ್ತೂರು ಗ್ರಾಮದ ವಿದ್ಯಾರ್ಥಿನಿಯೊಬ್ಬಳು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಸಾಲು ಸಾಲು ಸಾವುಗಳು ಸಂಭವಿಸಿದರೂ ಸರಕಾರ ಸಮಸ್ಯೆಯ ಗಂಭೀರತೆಯನ್ನು ಅರಿತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಪ್ರಮುಖರು ಪೊಲೀಸರ ಬ್ಯಾರಿಕೇಡ್ ಗಳನ್ನು ನೂಕಿ ಅರಣ್ಯ ಭವನದ ಕಚೇರಿಗೆ ನುಗ್ಗಲೆತ್ನಿಸಿದ ಘಟನೆಯೂ ನಡೆಯಿತು. *ಬಂದ್ ಗೂ ಸಿದ್ಧ* ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಮಾತನಾಡಿ 2 ವಾರದ ಅವಧಿಯಲ್ಲಿ ಮೂವರು ಕಾಡಾನೆ ದಾಳಿಗೆ ಬಲಿಯಾಗಿದ್ದರು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ. ಕೇವಲ ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವುದನ್ನಷ್ಟೆ ನಾವು ಒಪ್ಪುವುದಿಲ್ಲ, ಸಮಸ್ಯೆಗೆ ಶಾಶ್ವತ ಪರಿಹಾರದ ಅಗತ್ಯವಿದೆ ಎಂದರು. ಜಿಲ್ಲಾ ವ್ಯಾಪ್ತಿಯಲ್ಲಿ ಕಾಡಾನೆ ಮತ್ತು ವನ್ಯ ಜೀವಿಗಳ ಉಪಟಳದಿಂದ ಜೀವಹಾನಿಯೊಂದಿಗೆ ಕೃಷಿಗೆ ಅಪಾರ ಹಾನಿಯಾಗುತ್ತಿದೆ. ಕಾಡುಪ್ರಾಣಿಗಳ ನಿಗ್ರಹಕ್ಕೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಅರಣ್ಯದಿಂದ ಹೊರಬರುವ ವನ್ಯಜೀವಿಗಳ ಉಪಟಳಕ್ಕೆ ಅರಣ್ಯ ಇಲಾಖೆಯೆ ನೇರ ಜವಾಬ್ದಾರಿ. ವನ್ಯಜೀವಿಗಳ ಉಪಟಳ ಸಂದರ್ಭ ಆಯಾ ಭಾಗದ ಅರಣ್ಯ ಅಧಿಕಾರಿಗಳ ವಿರುದ್ಧವೆ ಎಫ್ಐಆರ್ನ್ನು ದಾಖಲಿಸಬೇಕೆಂದು ಆಗ್ರಹಿಸಿದರು.
ಸಮಸ್ಯೆ ಬಗೆಹರಿಕೆಗೆ ಉನ್ನತ ಮಟ್ಟದ ಸಭೆ ಕರೆಯಬೇಕು ಎನ್ನುವುದು ಸೇರಿದಂತೆ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಡೆಸಿರುವ ಈ ಹೋರಾಟ ಆರಂಭವಷ್ಟೆ. ಸೂಕ್ತ ಸ್ಪಂದನ ದೊರಕದಿದ್ದಲ್ಲಿ ರಸ್ತೆ ತಡೆ ಸೇರಿದಂತೆ ಕೊಡಗು ಜಿಲ್ಲಾ ಬಂದ್ ಗೂ ಕರೆ ನೀಡುವುದಾಗಿ ರವಿ ಕಾಳಪ್ಪ ಎಚ್ಚರಿಕೆ ನೀಡಿದರು.
ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸುವುದರೊಂದಿಗೆ, ಸಿ ಮತ್ತು ಡಿ ಜಮೀನನ್ನು ಅರಣ್ಯಕ್ಕೆ ವರ್ಗಾಯಿಸುವ ಸುತ್ತೋಲೆಗಳಿಂದ ಸುಮಾರು 15 ಸಾವಿರ ಕುಟುಂಬಗಳು ಬೀದಿಗೆ ಬರುವ ಅಪಾಯವಿದೆ ಎಂದರು. ಖಾಸಗಿ ಜಮೀನುಗಳಲ್ಲಿನ ಮರಗಳ ಸರ್ವೇ ಕುರಿತ ಸುತ್ತೋಲೆ ಸೇರಿದಂತೆ ಜಿಲ್ಲೆಯ ಜನತೆಗೆ ಮಾರಕವಾಗಿರುವ ಸುತ್ತೋಲೆಗಳನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರಲ್ಲದೆ, ಬೆಳೆಗಾರರಿಗೆ ಅವರ ಜಾಗದಲ್ಲಿ ಬೆಳೆದ ಮರದಲ್ಲಿ ಸ್ವಂತ ಬಳಕೆಗೆ 100 ಸಿಎಫ್ಟಿ ಮರವನ್ನು ಬಳಸಲು ಅನುಮತಿ ನೀಡುವ ಅಧಿಕಾರ ರೇಂಜ್ ಫಾರೆಸ್ಟ್ ಆಫೀಸರ್ ಗೆ ಇತ್ತು. ಇದನ್ನು ಇದೀಗ ಹಿಂದಕ್ಕೆ ಪಡೆದಿರುವ ಉದ್ದೇಶವೇನೆಂದು ಪ್ರಶ್ನಿಸಿದರು. ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಾವು ಅಧಿಕಾರಕ್ಕೆ ಬಂದರೆ ಆರು ತಿಂಗಳಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದಾಗಿ ತಿಳಿಸಿತ್ತು, ಆದರೆ ಅದು ಕಾರ್ಯಗತವಾಗಿಲ್ಲ. ವನ್ಯಜೀವಿಗಳ ಹಾವಳಿ ತಡೆಗೆ ಕಳೆದ ಬಾರಿ 120 ಕೊಟಿ ರೂ.ಗಳನ್ನು ಘೋಷಿಸಿತ್ತು. ಆದರೆ, ಇಲ್ಲಿಯವರೆಗೆ ಇದರಲ್ಲಿ ನಯಾ ಪೈಸೆಯು ಖರ್ಚಾಗಿಲ್ಲವೆಂದು ಟೀಕಿಸಿದರು. ರಾಜ್ಯ ಸರಕಾರ ತನ್ನ ಬಡ್ಜೆಟ್ನಲ್ಲಿ ಕಾಡಾನೆ ಮಾನವ ಸಂಘರ್ಷ ತಡೆಗೆ 5 ವರ್ಷಗಳ 1500 ಕೋಟಿ ಯೋಜನೆಯನ್ನು ಪ್ರಕಟಿಸಿದ್ದು, ಈ ವರ್ಷಕ್ಕೆ 269 ಕೋಟಿ ನೀಡುವುದಾಗಿ ತಿಳಿಸಿದೆ. ಇದೊಂದು ಬೊಗಳೆ ಬಡ್ಜೆಟ್, ಮುಂದಿನ ಚುನಾವಣೆಗೆ ಇನ್ನು ಎರಡು ವರ್ಷಗಳ ಅವಧಿಯೂ ಇಲ್ಲ. ಈ ಹಂತದಲ್ಲಿ ಐದು ವರ್ಷದ ಅವಧಿಯ ಯೋಜನೆಯ ರೂಪಿಸಿದ್ದಾದರು ಹೇಗೆಂದು ಅಸಮಾಧಾನ ವ್ಯಕ್ತಪಡಿಸಿದರು. *ಹೆದ್ದಾರಿ ತಡೆ* ಸ್ಥಳಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ಅವರು ಬಾರದ್ದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು, ಮತ್ತೆ ಅರಣ್ಯ ಕಚೇರಿಗೆ ನುಗ್ಗಲು ಯತ್ನಿಸಿದರು. ಪೊಲೀಸರು ತಡೆದ ನಂತರ ಪ್ರತಿಭಟನಾಕಾರರು ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಕೆಲ ಕಾಲ ತಡೆದು ಪ್ರತಿಭಟನೆ ನಡೆಸಿದರು. *ಉನ್ನತ ಮಟ್ಟದ ಸಭೆ* ರಸ್ತೆ ತಡೆಯ ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ಅವರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಪ್ರಮುಖರು, ವನ್ಯಜೀವಿ-ಮಾನವ ಸಂಘರ್ಷ ತಡೆಗೆ ಶಾಶ್ವತ ಪರಿಹಾರ ಕ್ರಮಗಳನ್ನು ಕಂಡುಕೊಳ್ಳಲು ಮುಖ್ಯಮಂತ್ರಿ, ಅರಣ್ಯ ಸಚಿವರು, ಅರಣ್ಯಾಧಿಕಾರಿಗಳು ಹಾಗೂ ಜಿಲ್ಲೆಯ ಪ್ರಮುಖರ ಉನ್ನತ ಮಟ್ಟದ ಸಭೆ ಕರೆಯುವಂತೆ ಆಗ್ರಹಿಸಿದರು. ಕಾಡಾನೆ ದಾಳಿಯಿಂದ ಮೃತಪಟ್ಟವರ ಸಂತ್ರಸ್ತ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು, ವನ್ಯಜೀವಿಗಳಿಗೆ ಅರಣ್ಯದಲ್ಲೆ ಅಗತ್ಯ ಆಹಾರ ದೊರಕುವ ವ್ಯವಸ್ಥೆ ಮಾಡಬೇಕು ಮತ್ತು ಅಧಿಕ ಸಂಖ್ಯೆಯಲ್ಲಿರುವ ಕಾಡುಪ್ರಾಣಿಗಳನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ಎಸ್.ಜಿ.ಮೇದಪ್ಪ, ಮಡಿಕೇರಿ ನಗರಸಭಾ ಅಧ್ಯಕ್ಷೆ ಪಿ.ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ರಾಬಿನ್ ದೇವಯ್ಯ, ಪಕ್ಷದ ಪ್ರಮುಖರಾದ ತಳೂರು ಕಿಶೋರ್ ಕುಮಾರ್, ಬಿ.ಕೆ.ಅರುಣ್ ಕುಮಾರ್, ಹೊಸೂರು ಸತೀಶ್ ಜೋಯಪ್ಪ, ಬಿ.ಕೆ.ಜಗದೀಶ್, ಅರುಣ್ ಶೆಟ್ಟಿ, ಮಹಿಳಾ ಬಿಜೆಪಿ ಅಧ್ಯಕ್ಷೆ ಅನಿತಾ ಪೂವಯ್ಯ, ಸವಿತಾ ರಾಕೇಶ್, ಡೀನ್ ಬೋಪಣ್ಣ, ಕಾಂತಿ ಸತೀಶ್ ಸೇರಿದಂತೆ ಹಲ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.









