
ವಿರಾಜಪೇಟೆ ಮಾ.13 NEWS DESK : ಪೂರ್ವಜರು ಪ್ರಕೃತಿಯೊಂದಿಗೆ ಒಡನಾಟದೊಂದಿಗೆ ಬಾಳಿ ಬದುಕು ಕಂಡಿದ್ದರು. ಸುಖಿ ಜೀವನ ನಡೆಸುತ್ತಿದ್ದರು. ಇದೀಗ ಆಧುನಿಕತೆ ಎಲ್ಲಡೆ ಪಸರಿಸಿ ಪೂರ್ವಜರು ನಡೆಸಿಕೊಂಡು ಬಂದ ಜೀವನ ಪದ್ಧತಿಯು ಕಣ್ಮರೆಯಾಗುತ್ತಿರುವುದನ್ನು ನಾವು ಮನ ಕಾಣುತ್ತಿದ್ದೇವೆ ಎಂದು ಮಡಿಕೇರಿ ಆಕಾಶವಾಣಿಯ ಉದ್ಘೋಷಕ ವಿನೋದ್ ಮೂಡಗದ್ದೆ ಅವರು ವಿಷಾದ ವ್ಯಕ್ತಪಡಿಸಿದರು. ಕೊಡಗು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಸಂತ ಅನ್ನಮ್ಮ ಪದವಿ ಕಾಲೇಜು ವಿರಾಜಪೇಟೆ ಆಶ್ರಯದಲ್ಲಿ ಕಲ್ತೋಡು ನಾಂಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 06 ದಿನಕಾಲ ವಾರ್ಷಿಕ ವಿಶೇಷ ಶಿಬಿರ ಆಯೋಜನೆಗೊಂಡಿತ್ತು. ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಮಾರಂಭ ಉದ್ದೇಶಿಸಿ ಮಾತನಾಡಿದ ವಿನೋದ್ ಅವರು ಸೇವೆ ಎಂಬುದು ಜೀವನದ ಅವಿಭಾಜ್ಯ ಅಂಗ ಎಂದು ಪರಿಗಣಿಸುವಂತಾಗಬೇಕು. ಸೇವಾ ಮನೋಭಾವ ಮತ್ತು ಪರಿಸರ ಜಾಗೃತಿ ವಿದ್ಯಾರ್ಥಿಗಳ ಜೀವನದಲ್ಲಿ ಜಾಗೃತವಾಗಬೇಕು ಎನ್ನುವ ಸದುದ್ದೇಶದಿಂದ ಗಾಂಧಿಜೀ ಅವರ ತತ್ವ ಸಿದ್ದಾಂತ ಜೀವಂತವಾಗಿರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಅರಂಭಿಸಿತು. ಶಿಬಿರವು ಒಂದು ವಾರಕ್ಕೆ ಮಾತ್ರ ಸೀಮಿತವಾಗದೇ ಜೀವನದ ಪ್ರತಿಯೊಂದು ಹಂತಗಳಲ್ಲೂ ಅಳವಡಿಸಿಕೊಳ್ಳಬೇಕು. ವಿಜ್ಞಾನ ಎಷ್ಟೇ ಮುಂದುವರೆದಿದ್ದರು ಪರಿಸರ ಮುನಿಸಿದಲ್ಲಿ ಸರ್ವ ನಾಶಕ್ಕೆ ನಾಂದಿಯಾಗುವುದು ಶಥಸಿದ್ದ, ಪರಿಸರವನ್ನು ಉಳಿಸಿಕೊಂಡು ವಿಜ್ಞಾನವನ್ನು ಬೆಳಸುವುದು ಸೂಕ್ತ. ಗ್ರಾಮೀಣ ಭಾಗದಲ್ಲಿ ಕೂಡು ಕುಟುಂಭದಿಂದ ಕೃಷಿ ಪದ್ದತಿಗಳು ಜೀವಂತವಾಗಿರಿಸಿತು. ಆದರೆ ಪ್ರಸ್ತುತ ಕುಟುಂಭಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ಕೃಷಿಯತ್ತ ಮುಖ ಮಾಡುವವರ ಸಂಖ್ಯೆ ವಿರಳವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲಾ ಸ್ಥಳ ದಾನಿಗಳು ಕೃಷಿಕರಾದ ಕುಪ್ಪಂಡ ಗೋಪಾಲ್ ಬೋಪಯ್ಯ ಅವರು ಮಾತನಾಡಿ, ಆಧುನಿಕತೆ ಮತ್ತು ಹಣ ಮಾಡುವ ಚಿಂತನೆಯಿಂದಾಗಿ ಮಕ್ಕಳು ತಮ್ಮ ಪೋಷಕರನ್ನು ಮರೆಯುವ ಹಂತಕ್ಕೆ ತಲುಪಿದೆ. ಜೀವನದಲ್ಲಿ ಎಲ್ಲದನ್ನು ಪಡೆಯಲು ಅವಕಾಶವಿದೆ. ಆದರೆ ತಂದೆ ತಾಯಿಯನ್ನು ಪಡೆಯಲು ಅಸಾಧ್ಯ. ಜೀವನ ನಡೆಸಲು ಮಾತ್ರ ಶಿಕ್ಷಣ ಸೀಮಿತವಾಗಬೇಕು ವಿನ: ವಿನಾಶಕ್ಕೆ ಉಪಯೋಗವಾಗಬಾರದು. ಗ್ರಾಮ ಭಾಗದಲ್ಲಿ ಶಿಬಿರವನ್ನು ಆಯೋಜನೆ ಮಾಡಿರುವುದನ್ನು ಶ್ಲಾಘಸಿದರು. ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್.ಎಸ್.ಎಸ್ ಘಟಕದ ಶಿಬಿರಾಧಿಕಾರಿಗಳಾದ ಬಿ.ಎನ್ .ಶಾಂತಿಭೂಷಣ್ ಅವರು ಶಿಬಿರದ ವರದಿಯನ್ನು ವಾಚಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ ಮತ್ತು ಸ.ಹಿ.ಪ್ರಾ. ಶಾಲೆಯ ಮುಖ್ಯೋಪಾದ್ಯಯರಾದ ಫ್ಯಾನ್ಸಿ ಲೋಬೋ ಅವರು ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಆಶಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಪ್ಪಂಡ ಗೋಪಾಲ್ ಬೋಪಯ್ಯ, ಆಶಾ,
ಫ್ಯಾನ್ಸಿ ಲೋಬೋ ಹಾಗೂ ಬಿ.ಎನ್ .ಶಾಂತಿ ಭೂಷಣ್ ಅವರುಗಳನ್ನು ಸನ್ಮಾನಿಸಲಾಯಿತು. ಬಳಿಕ ಶಿಬಿರಾರ್ಥಿಗಳು ಶಿಬಿರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಎನ್.ಎಸ್.ಎಸ್.ಘಟಕದ ಶಿಬಿರಾರ್ಥಿಗಳು, ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕರು, ಸ.ಹಿ.ಪ್ರಾ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು. ಸಂತ ಅನ್ನಮ್ಮ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಪ್ರತಿಮಾ ರೈ ಸ್ವಾಗತಿಸಿದರು, ಶಿಬಿರದ ನಾಯಕ ಮುತ್ತಪ್ಪ ವಂದಿಸಿದರು.









