
ಸೋಮವಾರಪೇಟೆ ಮಾ.18 NEWS DESK : ಯಡೂರು ಗ್ರಾಮದ ವೈಸಿಸಿ ಕ್ರಿಕೆಟ್ ಕ್ಲಬ್ ವತಿಯಿಂದ ಯಡೂರಿನ ಬಿಟಿಸಿಜಿ ಕಾಲೇಜು ಮೈದಾನದಲ್ಲಿ ನಡೆದ 26ನೇ ವರ್ಷದ ವೈಸಿಸಿ ಕ್ರಿಕೆಟ್ ಕಪ್ನ್ನು ಗರಗಂದೂರಿನ ದಳಪತಿ ಕ್ರಿಕೆಟರ್ಸ್ ತಂಡ ತನ್ನದಾಗಿಸಿಕೊಂಡಿದೆ. ಸೋಮವಾರಪೇಟೆಯ ಹಿಡನ್ ಲೀಫ್ ಕೂರ್ಗ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಪ್ರಥಮ ಸ್ಥಾನ ಪಡೆದ ತಂಡಕ್ಕೆ 30 ಸಾವಿರ ರೂ, ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 20 ಸಾವಿರ ರೂ, ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು. ಪಂದ್ಯಾವಳಿಯ ಬೆಸ್ಟ್ ಬ್ಯಾಟ್ಸ್ಮೆನ್ ಪ್ರಶಸ್ತಿಯನ್ನು ಹಿಡನ್ಲೀಫ್ ತಂಡದ ರಾಜೇಶ್, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ದಳಪತಿ ತಂಡದ ಕವನ್, ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಹಿಡನ್ ಲೀಫ್ನ ಉದಯ್, ಫೈನಲ್ ಪಂದ್ಯದ ಮ್ಯಾನ್ ಆಫ್ದ ಮ್ಯಾಚ್ ಪ್ರಶಸ್ತಿಯನ್ನು ದಳಪತಿ ತಂಡದ ಅಭಿಷೇಕ್, ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿಯನ್ನು ದಳಪತಿ ತಂಡದ ಅನಿಲ್ ಅವರುಗಳು ಪಡೆದುಕೊಂಡರು. ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ವೈಸಿಸಿ ಕ್ಲಬ್ನ ಅಧ್ಯಕ್ಷ ಕಿರಣ್ ಗೌಡ ವಹಿಸಿದ್ದರು. ಕಾರ್ಯದರ್ಶಿ ಲೋಹಿತ್, ಉದ್ಯಮಿ ಡಿ.ಜೆ.ಮಹೇಶ್, ಸಿ.ಡಿ.ಪ್ರವೀಣ್, ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ವೈ.ಎಂ.ನಾಗರಾಜು. ಡಿ.ಎಸ್.ರಘು, ಏಲಕ್ಕಿ ಸಹಕಾರ ಸಂಘದ ನಿರ್ದೇಶಕ ಡಿ.ಸಿ.ರಾಜು, ದೊಡ್ಡತೋಳೂರಿನ ಪ್ರಸಿದ್ಧ್ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟಿಗರಾದ ಯಡೂರು ಗ್ರಾಮದ ಅಸೆಗೋಡಿಮನೆ ಪರಮೇಶ್ ಅವರನ್ನು ಸನ್ಮಾನಿಸಲಾಯಿತು.









