
ಮಡಿಕೇರಿ NEWS DESK ಮಾ.20 : ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಏ.1ರಿಂದ 1 ತಿಂಗಳ ಕಾಲ 32ನೇ ವರ್ಷದ ಉಚಿತ ಕ್ರೀಡಾ ಶಿಬಿರವನ್ನು ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆಯೆಂದು ಕ್ಲಬ್ ಅಧ್ಯಕ್ಷ ಕೋಟೇರ ಎನ್.ಮುದ್ದಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಹಾಕಿ ಅಥ್ಲೆಟಿಕ್ಸ್ ಮತ್ತು ಯೋಗವನ್ನು ಒಳಗೊಂಡoತೆ ಶಿಬಿರ ನಡೆಯಲಿದೆ. ಶಿಬಿರ ಇದೇ ಮಾ.29ರಂದು ಆರಂಭಗೊoಡರು, ಹಿರಿಯ ಕ್ರೀಡಾ ಮಾರ್ಗದರ್ಶಕರಾಗಿದ್ದ ದಿ.ಸಿ.ವಿ.ಶಂಕರ್ ಅವರ ಜನ್ಮದಿನವಾದ ಏ.1 ರಂದು ಶಿಬಿರಕ್ಕೆ ಅಧಿಕೃತ ಚಾಲನೆ ನೀಡಲಾಗುತ್ತದೆ. ಸಮಾರೋಪ ಮೇ3 ರಂದು ನಡೆಯಲಿದೆಯೆಂದು ಮಾಹಿತಿಯನ್ನಿತ್ತರು. ಕ್ಲಬ್ನ ಪ್ರಮುಖರಾದ ಬೊಪ್ಪಂಡ ಶ್ಯಾಂ ಮಾತನಾಡಿ, 1934ರಲ್ಲಿ ಆರಂಭಗೊAಡ ವಾಂಡರ್ಸ್ ಸ್ಪೋರ್ಟ್ಸ್ ಕ್ಲಬ್ ಮೂಲಕ ಕಳೆದ 31 ವರ್ಷಗಳಿಂದ ಬೇಸಿಗೆ ಕ್ರೀಡಾ ಶಿಬಿರವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಕ್ರೀಡಾ ಮರ್ಗದರ್ಶಕರಾಗಿದ್ದ ದಿ.ಸಿ.ವಿ.ಶಂಕರ್ ಅವರ ಗರಡಿಯಲ್ಲಿ ಪಳಗಿದ್ದ ಎಂ.ಪಿ.ಗಣೇಶ್, ಬಿ.ಪಿ.ಗೋವಿಂದ ಅವರು ಒಲಂಪಿಯನ್ಗಳಾಗಿದ್ದು, ಹಾಕಿ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಇಲ್ಲಿಯವರೆಗಿನ 11 ಮಂದಿ ಒಲಂಪಿಯನ್ಗಳಲ್ಲಿ 9 ಮಂದಿ ಆಟಗಾರರು ಇದೇ ಮೈದಾನದಲ್ಲಿ ಆಟವಾಡಿ ಸಾಧನೆಯ ಶಿಖರವನ್ನೇರಿದವರೆಂದು ಸಂತಸ ವ್ಯಕ್ತಪಡಿಸಿದರು. ಕ್ರೀಡಾ ಸಾಧಕರಿಗೆ ಮಾರ್ಗದರ್ಶಕರಾಗಿದ್ದ ದಿ.ಸಿ.ವಿ.ಶಂಕರ್ ಅವರ ಗೌರವಾರ್ಥ ಅವರು ಹುಟ್ಟಿದ ದಿನದಂದು ಕ್ರೀಡಾ ಶಿಬಿರವನ್ನು ಉದ್ಘಾಟಿಸಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಮೊಬೈಲ್ ಗೀಳಿಗೆ ಬಿದ್ದ ಮಕ್ಕಳು ಮೈದಾನದತ್ತ ಬರುವುದು ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಮೈದಾನದತ್ತ ಸೆಳೆೆಯುವ ಪ್ರಯತ್ನವಾಗಿ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಶಿಬಿರ ಪ್ರತಿನಿತ್ಯ ಬೆಳಗ್ಗೆ 6 ಗಂಟೆಗೆ ಯೋಗಾಭ್ಯಾಸದೊಂದಿಗೆ ಆರಂಭಗೊಳ್ಳಲಿದ್ದು, ನಂತರ ಮಕ್ಕಳಿಗೆ ಅವರಿಷ್ಟದಂತೆ ಅಥ್ಲೆಟಿಕ್ಸ್ ಮತ್ತು ಹಾಕಿಯ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ. ಹಾಕಿ ತರಬೇತಿಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಸ್ಟಿಕ್ ಮತ್ತು ಬಾಲನ್ನು ತರುವುದು ಕಡ್ಡಾಯವೆಂದು ಸ್ಪಷ್ಟಪಡಿಸಿದರು. ಯೋಗ ತರಬೇತಿಯನ್ನು ಕೆ.ಕೆ.ಮಹೇಶ್ ಕುಮಾರ್, ವೆಂಕಟೇಶ್, ಬಾಬು ಸೋಮಯ್ಯ ಅವರು ನೀಡುತ್ತಾರೆ. ಹಾಕಿ ಮತ್ತು ಅಥ್ಲೆಟಿಕ್ಸ್ ತರಬೇತಿಯನನ್ನು ಅನುಭವಿ ಆಟಗಾರರು ನೀಡಲಿದ್ದಾರೆ. ಕ್ರೀಡೆಯ ಬಗ್ಗೆ ಒಲವಿರುವ, ಮಕ್ಕಳಿಗೆ ಹಾಕಿ ತರಬೇತಿ ನೀಡಲು ಇಚ್ಛಿಸುವವರು ಶಿಬಿರದಲ್ಲಿ ಪಾಲ್ಗೊಳ್ಳಬಹುದೆಂದು ಬೊಪ್ಪಂಡ ಶ್ಯಾಂ ತಿಳಿಸಿ, ಆಸಕ್ತ ಮಕ್ಕಳು ಮಾ.29ರಂದು ಬೆಳಗ್ಗೆ 6 ಗಂಟೆಗೆ ಬಂದು ತರಬೇತಿಯಲ್ಲಿ ಪಾಲ್ಗೊಳ್ಳಬಹುದೆಂದು ಹೇಳಿದರು. ತಿಂಗಳ ಅವಧಿಯ ಕ್ರೀಡಾ ಶಿಬಿರದ ನಡುವೆ ಈ ಬಾರಿ “ತಡಿಯಂಡ ಮೋಳ್” ಬೆಟ್ಟಕ್ಕೆ ಚಾರಣ ತೆರಳುವ ಉದ್ದೇಶವಿದೆ. ಪ್ರತಿವರ್ಷವು ಜಿಲ್ಲೆಯ ಪ್ರಮುಖ ಸ್ಥಳಗಳಿಗೆ ಮಕ್ಕಳನ್ನು ಚಾರಣಕ್ಕೆ ಕರೆದೊಯ್ಯಲಾಗುತ್ತದೆಂದು ತಿಳಿಸಿದರು. ಕ್ಲಬ್ನ ಪ್ರಮುಖರಾದ ಕುಡೆಕಲ್ ಸಂತೋಷ್ ಮಾತನಾಡಿ, ಶಿಬಿರದಲ್ಲಿ 5 ರಿಂದ 15 ವರ್ಷದ ಮಕ್ಕಳು ಪಾಲ್ಗೊಳ್ಳಬಹುದು. ಶಿಬಿರದ ಕೊನೆಯಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳಿಗೆ ಬಹುಮಾನಗಳನ್ನು ನೀಡುವುದಲ್ಲದೆ, ಪಾಲ್ಗೊಳ್ಳುವ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗತ್ತದೆಂದು ಮಾಹಿತಿಯನ್ನಿತ್ತರು. ಗೋಷ್ಠಿಯಲ್ಲಿ ಕ್ಲಬ್ನ ಸಂಚಾಲಕರಾದ ಬಾಬು ಸೋಮಯ್ಯ, ಪ್ರಮುಖರಾದ ಟಿ.ವಿ.ಲೋಕೇಶ್ ಉಪಸ್ಥಿತರಿದ್ದರು.








