
ಮಡಿಕೇರಿ NEWS DESK ಮಾ.21 : ಕೊಡಗು ಕಲಾವಿದರ ಸಂಘದ ವತಿಯಿಂದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಹಾಗೂ ಕೊಡವ ಧಾರಾವಾಹಿಗಳ ನಿರ್ದೇಶಕ ದಿ.ಎ.ಟಿ.ರಘು ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ವಿರಾಜಪೇಟೆಯಲ್ಲಿ ಭಾವಪೂರ್ಣವಾಗಿ ನೆರವೇರಿತು.
ನಗರದ ಕೆ.ಕೆ.ಗ್ರೂಪ್ಸ್ ಸಭಾಂಗಣದಲ್ಲಿ ಕೊಡಗು ಕಲಾವಿದರ ಸಂಘದ ಅಧ್ಯಕ್ಷ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿಮಾ ತಂತ್ರಜ್ಞ ಸುರೇಶ್ ಪಿ. ಹುಲಿಕೇರಿ ಅವರು ರಚಿಸಿರುವ ಎ.ಟಿ.ರಘು ಅವರ ಸಿನಿ ಪಯಣದ “ಹೆಬ್ಬುಲಿ” ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಲೇಖಕಿ ಉಳುವಂಗಡ ಕಾವೇರಿ ಉದಯ ಅವರು ರಚಿಸಿರುವ ಎ.ಟಿ.ರಘು ಸ್ಮರಣಾರ್ಥ ಸಾಹಿತ್ಯವನ್ನು ಟಿ.ಡಿ.ಮೋಹನ್ ಅವರು ಗಾಯನ ರೂಪದಲ್ಲಿ ಪ್ರಸ್ತುತ ಪಡಿಸಿದರು. ತಂದೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಎ.ಟಿ.ರಘು ಅವರ ಪುತ್ರಿ ಬಯವಂಡ ಬಿನು ಸಚಿನ್ ವ್ಯಕ್ತಿ ಜೀವಂತವಾಗಿರುವಾಗ ವ್ಯಕ್ತಿತ್ವದ ಮಹತ್ವ ತಿಳಿಯುವುದಿಲ್ಲ. ಆದರೆ ಅಗಲಿಕೆಯ ನಂತರ ಮಹತ್ವ ಭಾವಪೂರ್ಣವಾಗುತ್ತದೆ. ಕೊಡಗು ಕಲಾವಿದರ ಸಂಘದ ಕಲಾವಿದರಿಂದ ದೊರೆತ ಪ್ರೀತಿ, ಗೌರವಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.
ಸಿನಿಮಾ ತಂತ್ರಜ್ಞ ಸುರೇಶ್ ಪಿ.ಹುಲಿಕೇರಿ ಅವರು ಮಾತನಾಡಿ ಹಿರಿಯರಾದ ಎ.ಟಿ.ರಘು ಅವರೊಂದಿಗಿನ ಕಳೆದ 12 ವರ್ಷಗಳ ಒಡನಾಟ ಅವಿಸ್ಮರಣೀಯವೆಂದರು. ಕಲಾವಿದರಾದ ನೆರವಂಡ ಉಮೇಶ್, ಪುಗ್ಗೇರ ಆಕಾಶ್, ಅಲ್ಲಾರಂಡ ವಿಠಲ್ ನಂಜಪ್ಪ, ಚೆರುವಾಳಂಡ ಸುಜಲ ನಾಣಯ್ಯ ಹಾಗೂ ತಾತಂಡ ಪ್ರಭಾ ನಾಣಯ್ಯ ಅವರು ಎ.ಟಿ.ರಘು ಅವರ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ಉಳುವಂಗಡ ಕಾವೇರಿ ಉದಯ್ ಕವನ ವಾಚನ ಮಾಡಿದರು. ತಾತಂಡ ಶ್ರೇಯ ಸೋಮಣ್ಣ ಅವರು ಭರತನಾಟ್ಯದ ಮೂಲಕ ಗಮನ ಸೆಳೆದರು. *ಅಧ್ಯಕ್ಷರಾಗಿ ವಿಠಲ್ ನಾಣಯ್ಯ ಆಯ್ಕೆ*ಇದೇ ಸಂದರ್ಭ ಕೊಡಗು ಕಲಾವಿದರ ಸಂಘವನ್ನು ಪುನರ್ ರಚಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ವಾಂಚಿರ ವಿಠಲ್ ನಾಣಯ್ಯ, ಕಾರ್ಯದರ್ಶಿಯಾಗಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಹಾಗೂ ಸಹ ಕಾರ್ಯದರ್ಶಿಯಾಗಿ ಮಲ್ಲಮಾಡ ಶ್ಯಾಮಲ ಸುನಿಲ್ ಅವಿರೋಧವಾಗಿ ಆಯ್ಕೆಯಾದರು. ಇತರ ಪದಾಧಿಕಾರಿಗಳನ್ನು ಮುಂದಿನ ದಿನಗಳಲ್ಲಿ ಆಯ್ಕೆ ಮಾಡಲಾಗುವುದು ಎಂದು ಪ್ರಮುಖರು ತಿಳಿಸಿದರು. ಕಾರ್ಯದರ್ಶಿ ಈರಮಂಡ ಹರಿಣಿ ವಿಜಯ್ ಅವರು ಕಳೆದ ಸಭೆಯ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್, ಪುಗ್ಗೇರ ಆಕಾಶ್, ಸೋಮಯಂಡ ಎಸ್.ಬೆಳ್ಯಪ್ಪ, ಅನಂತಶಯನ ಬಿ.ಜಿ, ಚೋಕಂಡ ನಾಜಿರ್, ಬಿದ್ದಂಡ ಉತಮ್ ಪೊನ್ನಪ್ಪ, ಆಚೆಯಡ ಗಗನ್ ಗಣಪತಿ, ಈರಮಂಡ ವಿಜಯ್, ನಾಪಂಡ ಆಶಾ ರವಿ, ಪೆಮ್ಮಚಂಡ ಉಷಾ ಗಣೇಶ್, ಸಂಕೇತ್ ಶಿವಪ್ಪ, ಜಾದೂಗಾರ್ ವಿಕ್ರಂ ಶೆಟ್ಟಿ, ಕಾಳಮಂಡ ಜಗತ್, ಕಾಳಮಂಡ ನಯನ, ಬಾಳೆಯಡ ಪ್ರತೀಶ್ ಪೂವಯ್ಯ, ತಾತಂಡ ನೈನಾ ಸೋಮಣ್ಣ ಸೇರಿದಂತೆ ಅನೇಕ ಕಲಾವಿದ ಸದಸ್ಯರುಗಳು ಉಪಸ್ಥಿತರಿದ್ದರು. ಟಿ.ಡಿ.ಮೋಹನ್, ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಕೊಟ್ರಂಡ ಶ್ರೀಕಾಂತ್ ಪೂವಣ್ಣ, ಕ್ಯಾ.ಬಿದ್ದಂಡ ನಾಣಿ ದೇವಯ್ಯ, ಹೆಚ್.ಬಿ.ಗೋಪಾಲ್ ಅವರಿಂದ ಹಾಡು ಹಾಗೂ ಆಂಡಮಾಡ ಪವನ್ ಅಯ್ಯಪ್ಪ ಅವರಿಂದ ನಡೆದ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಬಯವಂಡ ಬೀನಾ ಸಚಿನ್ ಪ್ರಾರ್ಥಸಿ ಟಿ.ಡಿ.ಮೋಹನ್ ಸ್ವಾಗತಿಸಿ, ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ನಿರೂಪಿಸಿ, ತಾತಂಡ ಪ್ರಭಾ ನಾಣಯ್ಯ ವಂದಿಸಿದರು. “ಹೆಬ್ಬುಲಿ” ಪುಸ್ತಕಕ್ಕೆ ಕಲಾವಿದ ಅಲ್ಲಾರಂಡ ವಿಠಲ್ ನಂಜಪ್ಪ ಅವರು ಸಹಕಾರ ನೀಡಿದ್ದಾರೆ.










