
ಮಡಿಕೇರಿ ಮಾ.21 NEWS DESK : ಕೊಡಗಿನ ಕಾಡಾನೆ-ಮಾನವ ಸಂಘರ್ಷ ತಡೆಗೆ ರಾಜ್ಯದಷ್ಟೇ ಕೇಂದ್ರಕ್ಕೂ ಜವಾಬ್ದಾರಿ ಇದ್ದು, ಕೇಂದ್ರದಿಂದ ಏನು ಪರಿಹಾರ ದೊರೆತ್ತಿದೆ, ಸಮಸ್ಯೆ ಬಗೆಹರಿಕೆಗೆ ಎಷ್ಟು ಅನುದಾನ ಒದಗಿಸಿದೆ ಎನ್ನುವುದನ್ನು ಬಿಜೆಪಿ ಮಂದಿ ಬಹಿರಂಗಪಡಿಸಲಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಒತ್ತಾಯಿಸಿದ್ದಾರೆ. ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡಾನೆಗಳ ಹಾವಳಿಯಿಂದ ಯಾರೂ ತೊಂದರೆಗೆ ಒಳಗಾಗಬಾರದು. ಹೀಗಿದ್ದೂ ಸಿದ್ದಾಪುರ, ಕುಶಾಲನಗರ, ಬೆಟ್ಟತ್ತ್ತೂರಿನಲ್ಲಿ ಮೂವರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.ಇದನ್ನೆ ಬಳಸಿಕೊಂಡ ಬಿಜೆಪಿ ಪ್ರತಿಭಟನೆ ಮತ್ತು ರಸ್ತೆ ತಡೆ ಮಾಡಿ ಪ್ರತಿಭಟಿಸುವ ಮೂಲಕ ಸಾವಿನಲ್ಲಿ ರಾಜಕಾರಣ ಮಾಡುತ್ತ್ತಿದೆ. ಬಿಜೆಪಿಯ ಧೋರಣೆಗಳನ್ನು ಗಮನಿಸಿದರೆ, ಅವರು ಸಾವಿಗೆ ಕಾಯುತ್ತಿರುವಂತೆ ಭಾಸವಾಗುತ್ತಿದೆ ಎಂದು ಟೀಕಿಸಿದರು.
*25 ವರ್ಷ ಸಾವೇ ಸಂಭವಿಸಿಲ್ಲವೆ* ಜಿಲ್ಲೆಯಲ್ಲಿ ಕಳೆದ ಇಪ್ಪತ್ತೈದು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿಯ ಅವಧಿಯಲ್ಲಿ ಕಾಡಾನೆಗಳ ಹಾವಳಿಯಿಂದ ಜೀವಹಾನಿಯೇ ಸಂಭವಿಸಿಲ್ಲವೆ ಎಂದು ಪ್ರಶ್ನಿಸಿದ ಪೊನ್ನಣ್ಣ, 2020-21 ನೇ ಸಾಲಿನಲ್ಲಿ 13 ಮಂದಿ, 2022-23ನೇ ಸಾಲಿನಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. ಆ ಸಂದರ್ಭ ಯಾರು ಇಲ್ಲಿ ಶಾಸಕರಾಗಿದ್ದರು, ಯಾರು ಅರಣ್ಯ ಸಚಿವರಾಗಿದ್ದರು ಎಂದು ಪ್ರಶ್ನಿಸಿದರು. ಕಳೆದ 2023-24ನೇ ಸಾಲಿನಲ್ಲಿ ಕಾಡಾನೆ ದಾಳಿಯಿಂದ 10 ಮಂದಿ, 2024-25ನೇ ಸಾಲಿನಲ್ಲಿ 8 ಮಂದಿ ಹಾಗೂ ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೆ 12 ಜೀವಹಾನಿ ಪ್ರಕರಣಗಳು ಸಂಭವಿಸಿದೆ. ಯಾರಿಗೂ ಇಂತಹ ಘಟನೆಗಳು ಮರುಕಳಿಸಬೇಕೆನ್ನುವ ಇಚ್ಛೆ ಇರುವುದಿಲ್ಲ. ಸಮಸ್ಯೆಯನ್ನು ಎಲ್ಲರೂ ಒಗ್ಗೂಡಿ ವೈಜ್ಞಾನಿಕವಾಗಿ ಬಗೆಹರಿಸುವ ನಿಟ್ಟಿನಲ್ಲಿ ಮುಂದುವರೆಯಬೇಕಾಗಿದೆ. ಹೀಗಿದ್ದೂ, ಸಿದ್ದಾಪುರದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಸತ್ತ ವ್ಯಕ್ತಿಯ ಮೃತದೇಹವನ್ನಿರಿಸಿ ಪ್ರತಿಭಟನೆಗೆ ಬಿಜೆಪಿ ಮುಂದಾಗಿತ್ತೆಂದು ಬೇಸರ ವ್ಯಕ್ತಪಡಿಸಿದರು. ಹಿಂದೆ ಶಾಸಕರಾಗಿದ್ದವರು ಅವರ ಅವಧಿಯಲ್ಲಿ ಸಂಭವಿಸಿದ ದುರ್ಘಟನೆಗಳ ಸಂದರ್ಭ ಏನು ಕ್ರಮ ಕೈಗೊಂಡಿದ್ದರು ಎನ್ನುವುದನ್ನು ಸ್ಪಷ್ಟಪಡಿಸಲಿ. ರಸ್ತೆ ತಡೆ ಪ್ರತಿಭಟನೆಯಿಂದ ಬಿಜೆಪಿ ಸಾಧಿಸಿದ್ದಾದರು ಏನು, ಜನತೆ ಖಂಡಿತ ಇದನ್ನು ಒಪ್ಪುವುದಿಲ್ಲ. ಇಂತಹ ಹೋರಾಟಗಳು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಷ್ಟೆ. ಇನ್ನಾದರು ಸಮಸ್ಯೆ ಬಗೆಹರಿಕೆಗೆ ಎಲ್ಲರೂ ಕೈಜೋಡಿಸಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಎ.ಎಸ್.ಪೊನ್ನಣ್ಣ ತಿಳಿಸಿದರು. ಕಾಡಾನೆ ಮತ್ತು ಮಾನವ ಸಂಘರ್ಷ ತಡೆ ಕೇವಲ ರಾಜ್ಯ ಸರ್ಕಾರದ ಜವಾಬ್ದಾರಿಯಲ್ಲ, ಇದರಲ್ಲಿ ಕೇಂದ್ರದ ಪಾತ್ರವೂ ಇದೆ. ಪ್ರಾಜೆಕ್ಟ್ ಎಲಿಫೆಂಟ್, ಪ್ರಾಜೆಕ್ಟ್ ಟೈಗರ್ ಯೋಜನೆಗಳು ಕೇಂದ್ರ್ರ ಸರ್ಕಾರದ್ದು. ಇವುಗಳ ಬಗ್ಗೆ ಗಮನ ಹರಿಸಲು ಕೇಂದ್ರದ ಅರಣ್ಯ ಸಚಿವರು ಇದ್ದಾರೆ, ಕಳೆದ 12 ವರ್ಷಗಳ ಅವಧಿಯಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳಡಿ ಕರ್ನಾಟಕಕ್ಕೆ ಎಷ್ಟು ಅನುದಾನ ಬಂದಿದೆ ಎನ್ನುವುದನ್ನು ಮಾಜಿ ವಿಧಾನ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರು ಬಹಿರಂಗಪಡಿಸಲಿ ಎಂದರು. ಕೇಂದ್ರ ಸರ್ಕಾರದ ಪ್ರಾಯೋಜಿತ ಪ್ರಾಜೆಕ್ಟ್ ಎಲಿಫೆಂಟ್ ಯೋಜನೆಯಡಿ ನೆರೆಯ ಕೇರಳ ರಾಜ್ಯಕ್ಕೆ ಕೇಂದ್ರ್ರ ಸರ್ಕಾರ ದೊಡ್ಡ ಮೊತ್ತದ ನೆರವನ್ನು ನೀಡಿದೆಯಾದರೆ, ರಾಜ್ಯಕ್ಕೆ ನೀಡಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಡಾನೆ-ಮಾನವ ಸಂಘರ್ಷ ತಡೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸೂಕ್ತ ಸ್ಪಂದನೆಯನ್ನು ನೀಡಿಲ್ಲ. ಸಮಸ್ಯೆಯ ಬಗ್ಗೆ ಸಂಸತ್ನಲ್ಲಿ ರಾಜ್ಯದ ಸಂಸದರು ಪ್ರಸ್ತಾಪಿಸಿಲ್ಲವೆಂದು ಲೇವಡಿ ಮಾಡಿದ ಎ.ಎಸ್.ಪೊನ್ನಣ್ಣ ಅವರು ಕಳೆದ ಸಾಲಿನಲ್ಲಿ ಕೇಂದ್ರ ಸರ್ಕಾರ ಪ್ರಾಜೆಕ್ಟ್ ಎಲಿಫೆಂಟ್ ಯೋಜನೆಯಡಿ ಮೀಸಲಿಟ್ಟ ಹಣದಲ್ಲಿ ಶೇ.30 ರಷ್ಟು ಬಳಕೆಯಾಗಿಲ್ಲ.ಉಳಿಕೆ ಹಣವನ್ನು ಸ್ಥಳೀಯ ಬಿಜೆಪಿ ಮುಖಂಡರು ಜಿಲ್ಲೆಗೆ ಒದಗಿಸಿ, ಕಾಡಾನೆ ಮಾನವ ಸಂಘರ್ಷ ತಡೆಗೆ ಅಗತ್ಯವಾದ ಕೆಲಸಗಳನ್ನು ಮಾಡಿಸಿ ತಮ್ಮ “ಫೋಟೋ”ವನ್ನು ಬೇಕಾದರೆ ಹಾಕಿಕೊಳ್ಳಲಿ ನಮ್ಮ ಅಭ್ಯಂತರವಿಲ್ಲವೆಂದು ಹೇಳಿದರು. *ರಾಜ್ಯ ಸರಕಾರದ ಕ್ರಮ* ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗೆ ಇಲ್ಲಿಯವರೆಗೆ 139.83 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಬೇಲಿ ಮಾಡಲಾಗಿದ್ದು, ಇನ್ನು 150 ಕಿ.ಮೀ. ಕಾಮಗಾರಿ ಬಾಕಿ ಇದ್ದು, ಇದಕ್ಕಾಗಿ 290 ಕೋಟಿ ರೂ.ಗಳ ಅಗತ್ಯವಿದೆ. ಈ ಬಾರಿ ತಿತಿಮತಿ, ಮಾಲ್ದಾರೆ ವಿಭಾಗದಲ್ಲಿ 22 ಕೊಟಿ ರೂ. ವೆಚ್ಚದಲ್ಲಿ ರೈಲ್ವೆ ಬ್ಯಾರಿಕೇಡ್ ಬೇಲಿ ನಿರ್ಮಾಣಕ್ಕೆ ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಜಿಲ್ಲೆಯಲ್ಲಿ 422 ಕಿ.ಮೀ. ರೈಲ್ವೆ ಕಂದಕ ಮತ್ತು 544 ಕಿ.ಮೀ. ಸೌರ ಬೇಲಿಯ ಅಗತ್ಯವಿದ್ದು, ಈಗಾಗಲೆ ನಿರ್ಮಾಣವಾಗಿರುವ ಕಂದಕ ಮತ್ತು ಸೌರ ಬೇಲಿಯ ನಿರ್ವಹಣೆಗೆ ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾಡಾನೆ ಹಾವಳಿ ನಿಯಂತ್ರಣಕ್ಕೆ 32 ಟಾಸ್ಕ್ ಫೋರ್ಸ್ ಮತ್ತು ರ್ಯಾಪಿಡ್ ಆಕ್ಷನ್ ಫೋರ್ಸ್ಗಳನ್ನು ಸಜ್ಜುಗೊಳಿಸಲಾಗಿದ್ದು, 4 ವಾಹನಗಳನ್ನು ಒದಗಿಸಲಾಗಿದೆಯೆಂದು ವಿವರಿಸಿದರು. ರಾಜ್ಯ ಸರ್ಕಾರ ತನ್ನ ಬಡ್ಜೆಟ್ನಲ್ಲಿ ಕೊಡಗಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದ್ದು, ಆದಿವಾಸಿಗಳು ಮತ್ತು ಕೊಡವ ಸಮುದಾಯದ ಅಭಿವೃದ್ಧಿಗೆ ನಿಗಮವನ್ನು ಸ್ಥಾಪಿಸಿದೆ, ಕಾರ್ಮಿಕರಿಗೆ ಅನುಕೂಲವಾಗುವ ಶ್ರಮಿಕ ಆಸ್ಪತ್ರೆಗಳ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗಿದೆ, ವಿ.ಬಾಡಗದಲ್ಲಿ ಕ್ರೀಡಾ ತರಬೇತಿ ಕೇಂದ್ರದ ಸ್ಥಾಪನೆಗೆ ಒತ್ತು ನೀಡಲಾಗಿದೆಯೆಂದು ತಿಳಿಸಿದರು. ಸುದ್ದಿಗೊಷ್ಠಿಯಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಸಿ.ಎಸ್. ಅರುಣ್ ಮಾಚಯ್ಯ, ಮಾಜಿ ಎಂಎಲ್ಸಿ ಶಾಂತೆಯಂಡ ವೀಣಾ ಅಚ್ಚಯ್ಯ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಕೊಲ್ಲೀರ ಗಿರೀಶ್, ಪಕ್ಷದ ಪ್ರಮುಖರಾದ ಟಿ.ಪಿ.ರಮೇಶ್, ತೆನ್ನಿರ ಮೈನ, ಇಸ್ಮಾಯಿಲ್ ಮೊದಲಾದವರಿದ್ದರು.










