
ಮಡಿಕೇರಿ ಮಾ.24 NEWS DESK : ಪ್ರಸ್ತುತ ದಿನಗಳಲ್ಲಿ ತೊಟ್ಟಿಲು ತೂಗುವ ಕೈ ಜಗವನ್ನು ಆಳುತ್ತಿದ್ದು, ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೂ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯ ಕೊಡುಗೆ ಅಪಾರ ಎಂದು ಕೊಡಗು 1 ನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಜಿ.ಸುರೇಂದ್ರ ಅವರು ಹೇಳಿದರು. ಮಹಿಳೋದಯ ಮಹಿಳಾ ಒಕ್ಕೂಟ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಶಿಶು ಕಲ್ಯಾಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು, ಮಾತನಾಡಿದರು. 20ನೇ ಶತಮಾನದ ಆರಂಭದಲ್ಲಿ ಉತ್ತರ ಅಮೇರಿಕಾ ಮತ್ತು ಯುರೋಪ್ನಲ್ಲಿ ನಡೆದ ಕಾರ್ಮಿಕ ಚಳುವಳಿಗಳಿಂದ ಇದು ಹುಟ್ಟಿಕೊಂಡಿತು. 1975 ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ಅಧಿಕೃತಗೊಳಿಸಿತು. ಮಹಿಳೆಯರ ಸಾಧನೆಗಳನ್ನು ಗೌರವಿಸುವುದು, ಲಿಂಗ ತಾರತಮ್ಯ ಹೋಗಲಾಡಿಸುವುದು ಮತ್ತು ಸಮಾಜದಲ್ಲಿ ಸಮಾನತೆ ತರುವುದು ಮುಖ್ಯ ಉದ್ದೇಶವಾಗಿದೆ ಎಂದು ಜಿ.ಸುರೇಂದ್ರ ಅವರು ಹೇಳಿದರು.
ಇಂದಿನ ಸಮಾಜದಲ್ಲಿ ಮಹಿಳೆಯರು ಶಿಕ್ಷಣ, ವಿಜ್ಞಾನ, ರಾಜಕೀಯ, ಕ್ರೀಡೆ ಮತ್ತು ವ್ಯಾಪಾರ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದ್ದರಿಂದ ಪೋಷಕರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವಂತೆ ಸಲಹೆ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ಸಿ.ಜೆ.ಎಂ ಹಾಗೂ ಪ್ರಭಾರ ಸದಸ್ಯ ಕಾರ್ಯದರ್ಶಿಗಳಾದ ಸಿ.ವೀರಭದ್ರಯ್ಯ ಅವರು ಮಾತನಾಡಿ, ದೇಶದಲ್ಲಿ ಶೇ.20 ರಷ್ಟು ಮಹಿಳೆಯರು ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. ಪುರುಷರಷ್ಟೇ ಮಹಿಳೆಯರಿಗೂ ಕೂಡ ಸಮಾನ ಅವಕಾಶ ಕಲ್ಪಿಸಿದಲ್ಲಿ ಲಿಂಗ ತಾರತಮ್ಯ ದೂರವಾಗುತ್ತದೆ. ಆದ್ದರಿಂದ ಮಹಿಳೆಯರಿಗೆ ನೀಡಿದ ಕಾನೂನನ್ನು ಸದುಪಯೋಗ ಪಡಿಸಿಕೊಂಡು ವೈಯಕ್ತಿಕ ಅಭಿವೃದ್ಧಿಯ ಜೊತೆಗೆ ದೇಶದ ಅಭಿವೃದ್ಧಿಗೂ ಕಾರಣರಾಗುವಂತೆ ಸಲಹೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್ ಅವರು ಮಾತನಾಡಿ, ಮಹಿಳಾ ದಿನಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಮಹಿಳೆಯರು ಸ್ವಾವಲಂಬಿಗಳಾಗಬೇಕು. ಸರ್ಕಾರ ಸಂವಿಧಾನಾತ್ಮಕವಾಗಿ ಸಾಕಷ್ಟು ಅವಕಾಶ ನೀಡಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳನ್ನು ನೀಡಿದ್ದು, ಯಾವುದೇ ಸಮಸ್ಯೆಗಳಿದ್ದಲ್ಲಿ ಅಂಗವಾಡಿ ಮತ್ತು ಸಿಡಿಪಿಒ ಕಚೇರಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಸಲಹೆ ನೀಡಿದರು. ಸಂಕಷ್ಟದಲ್ಲಿರುವ ಮಹಿಳೆಯರಿಗೆ 181 ಮಹಿಳಾ ಸಹಾಯವಾಣಿಯು ಆರಂಭಗೊಂಡಿದ್ದು, 24*7 ತಕ್ಷಣದ ನೆರವು ಒದಗಿಸುವ ಟೋಲ್-ಫ್ರೀ, ಉಚಿತ ಸೇವೆ ಲಭ್ಯ ಇರುವುದಾಗಿ ತಿಳಿಸಿದರು. ಮಹಿಳೆಯರು ಗೌರವಯುತವಾಗಿ ಬೆಳೆದರೆ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ. ಮಹಿಳಾ ಒಕ್ಕೂಟ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಹಕಾರ ನೀಡುತ್ತಿದ್ದು, ಅದನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು. ಮೈಸೂರು ಒಡಿಪಿ ಯೋಜನಾ ಸಂಯೋಜಕರಾದ ಮೋಲಿ ಪೊಡ್ತಾದೊ ಅವರು ಮಾತನಾಡಿ, ಮಹಿಳಾ ದಿನವು ಕೇವಲ ಆಚರಣೆಯ ದಿನವಲ್ಲ. ಪ್ರಸ್ತುತ ದಿನಗಳಲ್ಲಿಯೂ ಸಮಾನತೆ, ಸಕ್ಷರತೆ, ಅವಕಾಶ ಮತ್ತು ಸುರಕ್ಷತೆಗಾಗಿ ಹೋರಾಟ ಮುಂದುರೆಯುತ್ತಿದೆ. ಇದಕ್ಕೆ ಮಹಿಳೆಯರೇ ಮುಖ್ಯ ಕಾರಣ. ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಗಂಡು ಹೆಣ್ಣು ಎಂದು ತಾರತಮ್ಯ ಮಾಡಬಾರದು. ಲಿಂಗ ತಾರತಮ್ಯ ಕಡಿಮೆ ಆದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದುತ್ತದೆ. ಆದ್ದರಿಂದ ಮಹಿಳೆಯರು ಸಮಾನತೆ ಮತ್ತು ಗೌರವಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು. ಗೌರವ, ಪ್ರಶಂಸೆ, ಆಪೇಕ್ಷೆಗಳಿಸಬೇಕಾದರೆ ಕೊಡುವುದನ್ನು ಕಲಿಯಬೇಕು. ಆಗ ಮಾತ್ರ ಸಮಾಜದಲ್ಲಿ ಗೌರವ ಲಭ್ಯವಾಗುತ್ತದೆ ಎಂದು ಮೋಲಿ ಪೊಡ್ತಾದೊ ಅವರು ಹೇಳಿದರು. ಮೈಸೂರು ಒಡಿಪಿ ಸಂಸ್ಥೆಯ ಸಹಾಯಕ ನಿರ್ದೇಶಕರಾದ ವಂದನೀಯ ಫಾದರ್ ಜಾನ್ ಫೆರ್ನಾಂಡಿಸ್ ಅವರು, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದರೆ ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸ್ಮರಿಸುವ ದಿನ. ಮಹಿಳಾ ಸಾಧನೆಯನ್ನು ಗುರುತಿಸುವ ದಿನ. ಮಹಿಳೆಯರ ಪಾತ್ರ ಸಮಾಜದಲ್ಲಿ ಹೇಗಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಮಹಿಳೆಯರ ಪಾತ್ರ ಒಂದು ದಿನಕ್ಕೆ ಸೀಮಿತವಾಗಿಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಮಹಿಳೆಯ ಪಾತ್ರ ಪ್ರಮುಖ. ಅವರ ಸರ್ವತೋಮುಖ ಬೆಳವಣಿಗೆಯನ್ನು ಅರಿತುಕೊಳ್ಳಬೇಕು. ಪುರುಷರು ಮಹಿಳೆಯರಿಗೆ ಪ್ರೋತ್ಸಾಹ ನೀಡಬೇಕು. ಪುರುಷರಿಗೆ ಸಮಾನವಾಗಿ ಮಹಿಳೆಯರು ಬರಬೇಕು. ಇದು ಮಾತಿನಲ್ಲಿ ಇರದೆ ಕಾರ್ಯ ಹಾಗೂ ಕ್ರಿಯೆಯಲ್ಲಿರಲಿ ಎಂದು ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರು ಮಾತನಾಡಿ, ಹೆಣ್ಣು ಎನ್ನುವುದು ಕಣ್ಣುಗಳಂತೆ. ಅತ್ತೆಯನ್ನು ತಾಯಿಯಾಗಿ ನೋಡಬೇಕು. ಪೋಷಕರು ಹೆಣ್ಣು ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಲಹೆಗಳನ್ನು ನೀಡಿ ಬೆಳೆಸಬೇಕು. ದೊಡ್ಡವರನ್ನು ಗೌರವಿಸುವ ಕೆಲಸವನ್ನು ಮಾಡಬೇಕು. ಆಗ ಕುಟುಂಬ ಒಗ್ಗಟ್ಟಿನಿಂದ ಇರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಪ್ರಾಸ್ತಾವಿಕ ಮಾತನಾಡಿದ ಒಡಿಪಿ ಸಂಸ್ಥೆಯ ಜಿಲ್ಲಾ ವಲಯ ಸಂಯೋಜಕರಾದ ಜಾಯ್ಸ್ ಮೆನೆಜಸ್ ಅವರು, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಯಾವುದೇ ಒಂದು ದೇಶ ಅಥವಾ ಸಂಘ ಸಂಸ್ಥೆಗಳಿಗೆ ಸೀಮಿತವಾಗಿಲ್ಲ. ಇಡೀ ವಿಶ್ವದಾದ್ಯಂತ ಇದನ್ನು ಆಚರಿಸುವುದರಿಂದ ಈ ದಿನಕ್ಕೆ ವಿಶೇಷವಾದ ಮಹತ್ವವಿದೆ ಮತ್ತು ಇದಕ್ಕೆ ಲಿಂಗ ತಾರತಮ್ಯ ಇರುವುದಿಲ್ಲ. ಮಹಿಳೆಯರಿಗೆ ಶಿಕ್ಷಣ, ಸಂಪನ್ಮೂಲಗಳು, ತರಬೇತಿ ಕಾನೂನಿನ ಅರಿವು ಮತ್ತು ಮಾರ್ಗದರ್ಶನ ನೀಡುವ ಮೂಲಕ ಇಡೀ ಸಮುದಾಯವು ಪ್ರಗತಿ ಹೊಂದುತ್ತದೆ ಎಂದು ಹೇಳಿದರು. ಒಡಿಪಿ ಒಕ್ಕೂಟದ ಮಾಜಿ ಅಧ್ಯಕ್ಷೆ ಜುಲೆಕಾಬಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದಮಯಂತಿ, ಮಹಿಳೋದಯ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಲಲಿತಾ, ಸದಸ್ಯರಾದ ನೀಮಾ, ಹೀನ, ಹಸೀನಾ, ಲೂಸಿ ಜೇಮ್ಸ್, ಮೀನಾ ಕುಮಾರಿ, ರೇಣು ಕುಮಾರಿ, ಮಮತ, ಸಿಬ್ಬಂದಿ ಸಿ.ಎಸ್.ಅಕ್ಷಯ್, ಕಾನೂನು ಪ್ರಾಧಿಕಾರದ ಸಿಬ್ಬಂದಿ ಜಯಪ್ಪ, ಇಲಾಖೆ ಸಿಬ್ಬಂದಿಗಳು ಇದ್ದರು. ಪ್ರಕೃತಿ ಸಂಘದ ಸದಸ್ಯರು ಪ್ರಾರ್ಥಿಸಿದರು. ಒಡಿಪಿ ಸಂಸ್ಥೆಯ ಕಾರ್ಯಕರ್ತೆ ವಿಜಯ ನಾರಾಯಣ, ಜಯಲಕ್ಷ್ಮಿ ನಿರೂಪಿಸಿದರು. ಹಸ್ತ ಸಂಘದ ಅಧ್ಯಕ್ಷೆ ಸರಿತಾ ವಂದಿಸಿದರು.









