
ಸುಂಟಿಕೊಪ್ಪ ಮಾ.25 NEWS DESK : ಮಹಿಳೆಯರು ಸ್ವಾಲಂಬಿಗಳಾಗಿ ಬದುಕಲು ಅವಶ್ಯಕವಾಗಿರುವ ಶಿಕ್ಷಣ, ಕರಕುಶಲ, ಸೇರಿದಂತೆ ಹತ್ತಾರು ತರಬೇತಿಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸುವ ಮೂಲಕ ಸಂಸ್ಥೆಯು ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸಹಕಾರಿಯಾಗಿದೆ ಎಂದು ಸಂಜೀವಿನಿ ಒಕ್ಕೂಟದ ಕೃಷಿಸಖಿಯಾದ ಬ್ರಿಜಿಟ್ ಡಿಸೋಜ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾನ್ಬೈಲ್ ತಲಾಕಾವೇರಿ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಮಹಿಳೆಯರಿಗೆ ಸ್ವಾಲಂಬಿ ಬದುಕಿಗಾಗಿ 3 ತಿಂಗಳ ಹೊಲಿಗೆ ತರಬೇತಿಯನ್ನು ನೀಡಲಾಗಿದೆ. ತರಬೇತಿದಾರರಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿದ ಬ್ರಿಜಿಟ್ ಡಿಸೋಜ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಅವಶ್ಯಕತೆ ಇರುವ ಮಾಹಿತಿಗಳನ್ನು ಹಾಗೂ ಸ್ವಾವಲಂಬಿ ಜೀವನವನ್ನು ನಡೆಸಲು ಮಹಿಳೆಯರಿಗೆ ಅಗತ್ಯವಾದ ತರಬೇತಿಗಳ ಸೌಲಭ್ಯವನ್ನು ನೀಡುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಂಡ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಸಹಕಾರವಾಗಿದೆ ಮುಂದಿನ ದಿನಗಳಲ್ಲಿಯೂ ಈ ಭಾಗದ ಮಹಿಳೆಯರು ಇನ್ನಿತರ ತರಬೇತಿಗಳಲ್ಲಿ ಪಾಲ್ಗೊಂಡು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಾಲಿನಿ ಮಾತನಾಡಿ, ಸಂಸ್ಥೆಯ ವತಿಯಿಂದ ಹತ್ತಾರು ಸ್ವಾಲಂಬಿ ಉದ್ಯೋಗ ತರಬೇತಿಗಳನ್ನು ಆಗಿಂದಾಗ್ಗೆ ಪ್ರತಿ ಗ್ರಾಮೀಣ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಈ ತರಬೇತಿಗಳಲ್ಲಿ ತಾವು ಪಡೆದ ತರಬೇತಿಯನ್ನು ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ನೀಡುವ ಮೂಲಕ ಸ್ವಾಲಂಬಿ ಬದುಕು ರೂಪಿಸಿಕೊಳ್ಳಲು ಸಾಧ್ಯವೆಂದು ಮಾಲಿನಿ ಅವರು ಕಿವಿಮಾತು ಹೇಳಿದರು. 3 ತಿಂಗಳುಗಳ ಕಾಲ ಶಾಂತಗಿರಿಯ ಶಿಕ್ಷಕಿ ನಂದಿನಿ ಅವರು 30 ತರಬೇತಿದಾರರಿಗೆ ತರಬೇತಿ ನೀಡಿದರು. ಧರ್ಮಸ್ಥಳ ಸಂಘದಿಂದಲೇ ನಾವು ಬ್ಯಾಂಕಿಂಗ್ ಸೌಲಭ್ಯಗಳ ಬಗ್ಗೆ ವ್ಯವಹಾರ ಜ್ಞಾನದ ಬಗ್ಗೆ ಹಾಗೂ ಸ್ವ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಎಂದು ಸದಸ್ಯರು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕಾನ್ಬೈಲ್ ಸೇವಾ ಪ್ರತಿನಿಧಿ ಯಶೋಧ, ಶಾಂತಗೀರಿ ಒಕ್ಕೂಟದ ಸೇವಾ ಪ್ರತಿನಿಧಿ ನಂದಿನಿ, ಕಾನ್ಬೈಲ್ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ಖತ್ತೀಜ ಇದ್ದರು.









