

ಕುಶಾಲನಗರ ಮಾ.25 NEWS DESK : ಪ್ರವಾಹ, ಭೂಕಂಪ, ಚಂಡಮಾರುತ ಮೊದಲಾದ ನೈಸರ್ಗಿಕ ವಿಕೋಪಗಳು ಮತ್ತು ಮಾನವ ನಿರ್ಮಿತ ವಿಪತ್ತುಗಳು ಎದುರಾದ ಸಂದರ್ಭಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ತಕ್ಷಣದಲ್ಲಿ ಪರಿಣಾಮಕಾರಿಯಾಗಿ ನಿರ್ವಹಿಸುತ್ತಾ ಬಂದಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರರವರು ಅಭಿಪ್ರಾಯಿಸಿದರು. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮತ್ತು ಕೊಡಗು ವಿಶ್ವವಿದ್ಯಾಲಯ ಸಹಯೋಗದಲ್ಲಿ ಕಾಲೇಜಿನ ಜ್ಞಾನ ಕಾವೇರಿ ಆವರಣದಲ್ಲಿ ನಡೆದ ಯುವ ಆಪತ್ ಮಿತ್ರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ವಿಪತ್ತು ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ಪತ್ತೆಹಚ್ಚಿ ರಕ್ಷಿಸುವಂತಹ ಮತ್ತು ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತಹ ಧೈರ್ಯ ಮತ್ತು ವೃತ್ತಿಪರತೆಯಿಂದ ಜೀವ ರಕ್ಷಣೆ ಮಾಡುತ್ತದೆ. ಗಾಯಗೊಂಡವರಿಗೆ ತಕ್ಷಣದ ಪ್ರಾಥಮಿಕ ಚಿಕಿತ್ಸೆ ಮತ್ತು ತುರ್ತು ವೈದ್ಯಕೀಯ ಆರೈಕೆಯನ್ನು ಒದಗಿಸುತ್ತದೆ. ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ಪರಮಾಣು ವಿಪತ್ತುಗಳನ್ನು ಎದುರಿಸಲು ವಿಶೇಷ ತರಬೇತಿ ನೀಡುತ್ತದೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಗಳು ಸ್ಥಳೀಯ ಪೊಲೀಸರು ಮತ್ತು ಸಮುದಾಯದ ಸ್ವಯಂಸೇವಕರಿಗೆ ವಿಪತ್ತು ನಿರ್ವಹಣೆಯ ತರಬೇತಿ ನೀಡುತ್ತದೆ. ವಿಪತ್ತುಗಳ ಸಮಯದಲ್ಲಿ ತ್ವರಿತವಾಗಿ ಕಾರ್ಯಪ್ರವೃತ್ತರಾಗಲು ನಿಯಮಿತವಾಗಿ ತಾಲೀಮುಗಳನ್ನು ನಡೆಸುವಂತಹ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತಹ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಕೊಡಗು ಜಿಲ್ಲಾ ಮುಖ್ಯ ತರಬೇತಿ ಆಯುಕ್ತರಾದ ಕೆ.ಟಿ. ಬೇಬಿ ಮ್ಯಾಥ್ಯು, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ದೇಶದ ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ಅಗತ್ಯಬಿದ್ದಾಗ ವಿಶ್ವಸಂಸ್ಥೆಯ ಸಮನ್ವಯದೊಂದಿಗೆ ಇತರ ದೇಶಗಳಲ್ಲಿ ಮಾನವೀಯ ನೆರವು ಮತ್ತು ರಕ್ಷಣಾ ಕಾರ್ಯಗಳಲ್ಲಿ ಭಾಗವಹಿಸುತ್ತದೆ. ಪ್ರವಾಹ, ಭೂಕಂಪ, ಚಂಡಮಾರುತ, ಮತ್ತು ಕೈಗಾರಿಕಾ ಅಪಘಾತಗಳಂತಹ ತುರ್ತು ಸಂದರ್ಭಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ನಡೆಸುತ್ತದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕೊಡಗು ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಡಾ.ಸುರೇಶ ಎಂ., ಮಾತನಾಡಿದರು. ಕೊಡಗು ಜಿಲ್ಲಾ ಸ್ಕೌಟ್ ಆಯುಕ್ತರಾದ ಜಿಮ್ಮಿ ಸಿಕ್ವೇರ ಶಿಬಿರದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕೊಡಗು ವಿವಿಯ ಮೌಲ್ಯಮಾಪನ ವಿಶೇಷ ಅಧಿಕಾರಿಗಳಾದ ಪ್ರೊ. ರವಿಶಂಕರ್ ಎಂ.ಎನ್., ಗೈಡ್ಸ್ ಕೊಡಗು ಜಿಲ್ಲಾ ತರಬೇತಿ ಆಯುಕ್ತರಾದ ಮೈಥಿಲಿರಾವ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಕೊಡಗು ಸ್ಥಾನಿಕ ಆಯುಕ್ತರಾದ ಹೆಚ್.ಆರ್.ಮುತ್ತಪ್ಪ, ಜಿಲ್ಲಾ ಸಂಘಟಕರಾದ ದಮಯಂತಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಕುಶಾಲನಗರ ಸ್ಥಳೀಯ ಸಂಸ್ಥೆ ಅಧ್ಯಕ್ಷರಾದ ಡಾ.ಪ್ರವೀಣ್ ದೇವಗುಂಡ ಸೋಮಪ್ಪ, ಕಾರ್ಯದರ್ಶಿ ಗಣೇಶ್ ಎಂ.ಎಸ್., ಖಜಾಂಚಿ ನರೇಶ್ ಕುಮಾರ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ನ ಎಡಿಸಿ ಸುಲೋಚನ, ಕೊಡಗು ಸ್ಕೌಟ್ ವಿಭಾಗದ ಜಿಲ್ಲಾ ತರಬೇತಿ ಆಯುಕ್ತರಾದ ರಂಜಿತ್, ಕೊಡಗು ವಿಶ್ವವಿದ್ಯಾಲಯದ ಯುವ ರೆಡ್ಕ್ರಾಸ್ ನೋಡಲ್ ಅಧಿಕಾರಿ ಡಾ. ಜ಼ಮೀರ್ ಅಹಮದ್, ಕೊಡಗು ವಿವಿ ಕೌಶಲ್ಯ ಅಭಿವೃದ್ಧಿ ಅಕಾಡೆಮಿಯ ಸಂಯೋಜಕರಾದ ಸುದರ್ಶನ್ ಕುಮಾರ್ ಎನ್,ಕೆ., ಕೊಡಗು ವಿವಿ ಸಮುದಾಯ ಕಾರ್ಯಕ್ರಮಗಳ ಸಂಯೋಜಕರುಗಳಾದ ಡಾ. ಲೋಕೇಶ್ ಭರಣಿ, ಮಂಜುನಾಥ್ಗೌಡ ಪಿ.ಸಿ., ಕೊಡಗು ವಿಶ್ವವಿದ್ಯಾಲಯದ ಘಟಕ, ಸರ್ಕಾರಿ, ಸಂಯೋಜಿತ ಮಹಾವಿದ್ಯಾಲಯಗಳ ಶಿಬಿರಾರ್ಥಿಗಳು, ಬೋಧಕ ವೃಂದ, ಬೋಧಕೇತರ ವೃಂದದವರು ಹಾಜರಿದ್ದರು.









