
ಮಡಿಕೇರಿ NEWS DESK ಮಾ.25 : 1785 ಡಿ.12 ರಂದು ಕೊಡವರ ನರಮೇಧ ನಡೆದ ದೇವಟ್ ಪರಂಬುವಿನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಪುಷ್ಪನಮನ ಸಲ್ಲಿಸಿತು. ಮರಣ ಹೊಂದಿದ ಹಿರಿಯರನ್ನು ಸ್ಮರಿಸಿದ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿ ಹೋರಾಟಕ್ಕೆ ಜಯ ಕೋರಿದರು. ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಪ್ರಾದೇಶಿಕ ಸ್ವಾಯತ್ತತೆ ನೀಡಬೇಕು, ಬುಡಕಟ್ಟು ಸ್ಥಾನಮಾನ ಕಲ್ಪಿಸಬೇಕು, ಕೊಡವ ಭೂಮಿ, ಭಾಷೆ, ಸಂಸ್ಕೃತಿ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರö್ಯಕ್ಕಾಗಿ ಸಂವಿಧಾನದಡಿ ವಿಶೇಷ ಖಾತರಿ ನೀಡಬೇಕು, ದೇವಟ್ಪರಂಬುವಿನಲ್ಲಿ ಸ್ಮಾರಕ ತಾಣ ಸ್ಥಾಪಿಸಬೇಕು, ವಿಶ್ವ ರಾಷ್ಟ್ರ ಸಂಸ್ಥೆಯ ಹತ್ಯಾಕಾಂಡ ಸ್ಮಾರಕ ಪಟ್ಟಿಯಲ್ಲಿ ದೇವಟ್ ಪರಂಬ್ ಕೊಡವ ನರಮೇಧವನ್ನು ಸೇರಿಸಬೇಕು, ಕೊಡವ ಇತಿಹಾಸ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಬೇಕು, ಕೊಡವ ಇತಿಹಾಸವನ್ನು ತಿರುಚಿ ವಿರೂಪಗೊಳಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, 2027ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವ ಸಮುದಾಯಕ್ಕೆ ಪ್ರತ್ಯೇಕ “ಕೋಡ್” ಮತ್ತು “ಕಾಲಂ” (ಅಂಕಣ) ನೀಡಬೇಕು, ಕೊಡವ ಸಮುದಾಯವನ್ನು ಒಂದು ವಿಶಿಷ್ಟವಾದ ಆದಿಮಸಂಜಾತ ಗುಂಪಾಗಿ ಗುರುತಿಸಬೇಕು, ನಿಖರವಾದ ಪ್ರಾತಿನಿಧ್ಯವನ್ನು ಒದಗಿಸಬೇಕು, ಕೊಡವ ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ರಕ್ಷಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು. ಬುಡಕಟ್ಟು ಜನಾಂಗ ಕೊಡವರ ಹಕ್ಕುಗಳನ್ನು ಸಿಎನ್ಸಿ ಸಂಘಟನೆ ನಿರಂತರವಾಗಿ ಪ್ರತಿಪಾದಿಸುತ್ತಾ ಬರುತ್ತಿದ್ದು, ಶಾಂತಿಯುತ ಹೋರಾಟಗಳನ್ನು ನಡೆಸುತ್ತಿದೆ. ಈ ಹೋರಾಟಕ್ಕೆ ಸರ್ವ ಕೊಡವರ ಬೆಂಬಲ ಬೇಕಾಗಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು. ನಂದಿನೆರವoಡ ರೇಖಾ ನಾಚಪ್ಪ, ಕಲಿಯಂಡ ಪ್ರಕಾಶ್, ಅಳಮಂಡ ಜೈ ಗಣಪತಿ, ಪಟ್ಟಮಾಡ ಕುಶ, ಅರೆಯಡ ಗಿರೀಶ್, ಮಂದಪoಡ ಮನೋಜ್ ಮಂದಣ್ಣ, ಚೀಯಬೆರ ಸತೀಶ್, ಮಂದಪoಡ ಸೂರಜ್, ಮಂಗೇರಿರ ಜಗದೀಶ್ ಹಾಗೂ ಪಟ್ಟಮಾಡ ರಿನಿತ್ ಕಾರ್ಯಪ್ಪ ಹಾಜರಿದ್ದು ಪುಷ್ಪ ನಮನ ಸಲ್ಲಿಸಿದರು.









