
ಮಡಿಕೇರಿ ಮಾ.28 NEWS DESK : ಅಲ್ಲಾರಂಡ ರಂಗಚಾವಡಿಯ ವತಿಯಿಂದ ಕೊಡಗು ಪತ್ರಿಕಾ ಭವನ ಟ್ರಸ್ಟ್ ಸಹಕಾರದೊಂದಿಗೆ ನಗರದ ಪತ್ರಿಕ ಭವನದ ಸಭಾಂಗಣದಲ್ಲಿ ಆಯೋಜಿತ ವಿಶ್ವ ರಂಗಭೂಮಿ ದಿನಾಚರಣೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಶಿಕ್ಷಕರು ಹಾಗೂ ರಂಗಭೂಮಿ ಕಲಾವಿದರಾದ ಕಲಿಯಂಡ ಸರಸ್ವತಿ ಅವರು, ಕೊಡಗಿನಲ್ಲಿ ಪ್ರತಿಭಾವಂತ ರಂಗ ಕಲಾವಿದರುಗಳಿದ್ದಾರೆ. ಇಂತಹವರನ್ನು ಗುರುತಿಸುವ, ಪ್ರೋತ್ಸಾಹಿಸುವ ಪ್ರಯತ್ನಗಳಾಗದಿರುವುದರಿಂದ ರಂಗ ಭೂಮಿ ಇಲ್ಲಿ ಬೆಳೆಯುತ್ತಿಲ್ಲವೆನ್ನುವ ಮನದಾಳದ ಮಾತುಗಳನ್ನಾಡುತ್ತಲೆ, ಶಿಕ್ಷಕರಾದವರು ತಮ್ಮ ವೃತ್ತಿಯನ್ನು ಮತ್ತು ಮಕ್ಕಳನ್ನು ಪ್ರೀತಿಯಿಂದ ಕಣಬೇಕು. ನಮ್ಮ ಜ್ಞಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ನಾಟಕಗಳ ಮೂಲಕ ಅಭಿವ್ಯಕ್ತ್ತಪಡಿಸಿದಾಗ, ವಿಚಾರಗಳು ಮಕ್ಕಳ ಮೇಲೆ ಪ್ರಭಾವ ಬೀರಬಲ್ಲುತ್ತದೆ ಮತ್ತು ಅವು ಶಾಶ್ವತವಾಗಿ ಮನಸ್ಸಿನಲ್ಲಿ ಉಳಿಯುತ್ತದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆ ಪಾಠ ಪ್ರವಚನ- ಅಂಕಗಳ ಒತ್ತಡಗಳ ನಡುವೆ ಸಿಲುಕಿದ್ದು, ಇತರೆ ಅಮೂಲ್ಯ ವಿಚಾರಗಳು ಮರೆಯಾಗುತ್ತಿದೆಯೆಂದು ವಿಷಾದಿಸಿದರು. ಈ ಸಂದರ್ಭ ಅವರು, ತಾವು ಎಂಬತ್ತರ ದಶಕದಲ್ಲಿ ಆಡಿದ ನಾಟಕಗಳು, ಶಿಕ್ಷಕಿಯಾಗಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು, ನಾಟಕಗಳ ಮೂಲಕ ಪಾಠ ಪ್ರವಚನಗಳನ್ನು ಮಾಡುತ್ತಿದ್ದುದನ್ನು ತಿಳಿಸಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯ ರಂಗ ಕರ್ಮಿ ಭರಮಣ್ಣ ಬೆಟ್ಟಗೇರಿ ಅವರು, ಸುಶ್ರಾವ್ಯವಾಗಿ ಮೊಗಳ್ಳಿ ಗಣೇಶ್ರವರ ರಂಗಗೀತೆಯನ್ನು ಹಾಡಿ, ರಂಗ ಭೂಮಿ ಎಂದರೆ ಅದು ಕೇವಲ ನಟನೆಯಲ್ಲ. ಅದು ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನ ಗೊಳಿಸುವ, ಕಾಣಲಾಗÀದ ಚಿಂತನೆಗಳನ್ನು ಕಾಣಿಸುವಂತೆ ಮಾಡುವ ಅತ್ಯಂತ ವಿಶಿಷ್ಟವಾದ ಮಾಧ್ಯಮ ಮಾತ್ರವಲ್ಲ, ಮಕ್ಕಳಿಗೆ ಸತ್ಯದ ಹಾದಿಯನ್ನು, ಚಿಂತನೆಗಳನ್ನು ನೀಡುವ ಕ್ಷೇತ್ರ ರಂಗ ಭೂಮಿ ಎಂದು ವಿಶ್ಲೇಷಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಿವೃತ್ತ ಪ್ರಾಂಶುಪಾಲರಾದ ಡಾ.ಜೆ.ಸೋಮಣ್ಣ ಅವರು ಮಾತನಾಡಿ, ಮಾನವೀಯ ಮೌಲ್ಯ, ಸಂಸ್ಕøತಿ, ಸಾಮಾಜಿಕ ಬದ್ಧತೆಯನ್ನು ಮೂಡಿಸುವ ಅತ್ಯಂತ ಪ್ರಭಾವಶಾಲಿಯಾದ ಮಾಧ್ಯಮ “ರಂಗ ಕ್ಷೇತ್ರ”ವಾಗಿದೆ. ಇಂತಹ ಮೌಲಿಕವಾದ ಕ್ಷೇತ್ರವನ್ನು ಅಹಪಾಸ್ಯಕ್ಕೀಡು ಮಾಡುತ್ತಿರುವ ನೋವನ್ನು ತೋಡಿಕೊಂಡ ಅವರು, ಸತ್ಯಹರಿಶ್ಚಂದ್ರ ನಾಟಕದ ಪ್ರಭಾವದಿಂದ ಮಹಾತ್ಮಾ ಗಾಂಧೀಜಿಯವರು ತಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ “ಸತ್ಯ” ಮತ್ತು “ಅಹಿಂಸೆ”ಯನ್ನು ಹೋರಾಟದ ಪ್ರಬಲ ಅಸ್ತ್ರವನ್ನಾಗಿಸಿಕೊಂಡಿದ್ದರು. ಪ್ರಸ್ತುತ ಮಹನೀಯರ ಇಂತಹ ನಡೆಗಳನ್ನೆ ವಿಡಂಬನಾತ್ಮಕವಾಗಿ ನೋಡುವ ಬಗ್ಗೆ ಬೇಸರ ವ್ಯಕ್ತಪಡಿಸಿ, ನಾಟಕಗಳು ಮನಸ್ಸಿನ ಪರಿವರ್ತನೆಯೊಂದಿಗೆ ಮಾನವೀಯತೆಯ ಸಮಾಜವನ್ನು ಕಟ್ಟಲು ಸಹಕಾರಿಯಾಗಿದೆ. ಚಿತ್ರರಂಗದಂದಿಗೆ ರಂಗ ಕಲೆಯು ಬೆಳವಣಿಗೆಯನ್ನು ಕಾಣುವುದು ಅತ್ಯವಶ್ಯವೆಂದು ತಿಳಿಸಿದರು. ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ರಂಗ ಶಿಕ್ಷಣ ಅತ್ಯವಶ್ಯವಾಗಿ ಬೇಕಾಗಿದೆಯೆಂದು ದೃಢವಾಗಿ ನುಡಿದ ಜೆ. ಸೋಮಣ್ಣ ಅವರು, ಶಿಕ್ಷಕರು ಭಾಷಾ ವಿಷಯಗಳನ್ನು ಹಾವ ಭಾವಗಳೊಂದಿಗೆ ಜೀವಂತಿಕೆ ತುಂಬಿ ಮಕ್ಕಳಿಗೆ ಉಣ ಬಡಿಸಬೇಕು. ಪ್ರಸ್ತುತ ಶಿಕ್ಷಕರ ಬೋಧನೆ ಶುಷ್ಕವಾಗುತ್ತಿದೆ. ಇಂತಹ ವಿಚಾರಗಳಿಂದ ಕನ್ನಡ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ, ಅವುಗಳೆಡೆಗಿನ ವಿಶ್ವಾಸ ಕಡಿಮೆಯಾಗುತ್ತಿದಯೆಂದು ಅಭಿಪ್ರಾಯಿಸಿ, ಶಿಕ್ಷಕಕರು ರಂಗ ಶಿಕ್ಷಣದೊಂದಿಗೆ ತರಗತಿಗಳಲ್ಲಿ ಜೀವಂತಿಕೆಯನ್ನು ತುಂಬಬೇಕೆಂದು ಕರೆ ನೀಡಿದರು. ರಂಗಕರ್ಮಿ ರಾಧ ಅವರು ಮಾತನಾಡಿ, ಕೊಡಗಿನ ಮಕ್ಕಳಿಗೆ ರಂಗ ಶಿಕ್ಷಣ ದೊರಕದ ಬಗ್ಗೆ ಅತೀವ ಬೇಸರ ವ್ಯಕ್ತಪಡಿಸಿ, ಕೊಡಗಿನಲ್ಲಿ ರಂಗ ಶಿಕ್ಷಣ ದೊರಕಿಸಿಕೊಡುವ, ನಾಟಕಗಳನ್ನಾಡಲು ಅವಕಾಶ ಕಲ್ಪಸುವ ರಂಗ ಭೂಮಿ ತೆರೆಯಬೇಕಾಗಿದೆಯೆಂದು ನುಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಹಲ ದಶಕಗಳ ಹಿಂದೆ ವೆಂಕಟರಾಜ ಶ್ಯಾಮರಾವ್ ಎಂಬವರು ನಾಟಕಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದುದನ್ನು ಸ್ಮರಿಸಿ, ಈಶ ಎಂಬವರು ಜಿಲ್ಲೆಯ ರಂಗ ಭೂಮಿಯ ಬೆಳವಣಿಗೆಗೆ ಕಾರಣವಾಗಿದ್ದಾರೆ. ಪ್ರಸ್ತುತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ನಾಟಕಗಳನ್ನಾಡಿಸುವ ಮೂಲಕ ರಂಗ ಬೂಮಿಯ ಬೆಳವಣಿಗೆಗೆ ಮುಂದಾಗಬೇಕಾಗಿದೆ ಎಂದರು. ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಕಸಾಪದಿಂದ ಮಕ್ಕಳ ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಆ ಮೂಲಕ ಕಲಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ರಂಗಭೂಮಿಯನ್ನು ಉಳಿಸಬೇಕಾಗಿದೆ ಎಂದರು. ಅಲ್ಲಾರಂಡ ರಂಗ ಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಅವರು ಮಾತನಾಡಿ, ಗ್ರೀಕ್ ನಾಟಕಗಳು ರಂಗಭೂಮಿಯ ಅಡಿಪಾಯಗಳೆನ್ನುವ ಭಾವನೆಗಳಿದೆಯಾದರು, ಭಾರತದ ರಂಗಭೂಮಿ ತನ್ನದೇ ಆದ ಸ್ವಂತಿಕೆಯನ್ನು ಹೊಂದಿದ್ದು, ಕೊಡಗು ಜಿಲ್ಲೆಯೂ ಧಾರ್ಮಿಕ ಆಚರಣೆಗಳ ಹಿನ್ನೆಲೆಯೊಳಗೆ ರಂಗ ಭೂಮಿಯ ಆಳವಾದ ಬೇರುಗಳನ್ನು ಹೊಂದಿದೆ. ಪನ್ನಂಗಾಲ ತಮ್ಮೆ, ಕಡಗದಾಳಿನ ನಾಡೆ ಕರೆಯುವ ಪಾರಂಪರಿಕ ಪದ್ಧತಿಗಳು ರಂಗ ಭೂಮಿಯ ಜೀವಂತಿಕೆಗೆ ಸಾಕ್ಷಿಯಾಗಿ ಕಂಡು ಬರುತ್ತಿಯೆಂದು ವಿಶ್ಲೇಷಿಸಿ, ಎಪ್ಪತ್ತರ ದಶಕದಲ್ಲಿ ಕಣಿವೆ, ಹೆಬ್ಬಾಲೆಗಳಲ್ಲಿನ ಪೌರಾಣಿಕ ನಾಟಕಗಳ ಪ್ರದರ್ಶನದ ವಿಚಾರಗಳು, ಗೋಣಿಕೊಪ್ಪಲಿನಲ್ಲಿ ಅಂದಿನ ದಿನಮಾನಗಳಲ್ಲಿ ನಡೆಯುತ್ತಿದ್ದ ನಾಟಕ ಪ್ರದರ್ಶನ, ಎಂಭತ್ತರ ದಶಕದಲ್ಲಿ ನಡೆದ ರಂಗೋತ್ಸವ, ನಾಟಕಗಳಿಗಾಗಿ ಹುಟ್ಟಿಕೊಂಡಿದ್ದ ವಿವಿಧ ತಂಡಗಳನ್ನು ಉಲ್ಲೇಖಿಸುತ್ತಲೆ, ಜಿಲ್ಲೆಯ ರಂಗ ಕ್ಷೇತ್ರದ ಮಸುಕು ಹಾದಿಯನ್ನು ಸ್ಪಷ್ಟಗೊಳಿಸುವ ಪ್ರಯತ್ನ ನಡೆಸಿದರು. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಅವರು ರಂಗಗೀತೆಯನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿ, ರಂಗಭೂಮಿಯ ಸಂರಕ್ಷಣೆ ಅತ್ಯವಶ್ಯವಾಗಿ ನಡೆಯಬೇಕಾಗಿದೆಯೆಂದರು.









