
ಮಡಿಕೇರಿ ಮಾ.30 NEWS DESK : ಮಡಿಕೇರಿ ನಗರ ಆಟೋ ಮಾಲೀಕ ಚಾಲಕರ ಸಂಘದ ವತಿಯಿಂದ ಏ.5 ರಿಂದ ಮೂರು ದಿನಗಳ ಕಾಲ ಕ್ರೀಡಾಕೂಟ ಹಾಗೂ ಏ.11 ರಂದು ಡ್ಯಾನ್ಸ್ ಮೇಳ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಟೋ ಮಾಲೀಕ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಡಿ.ಹೆಚ್.ಮೇದಪ್ಪ ಅವರು ವಿವಿಧ ಕ್ರೀಡಾ ಸ್ಪರ್ಧೆಗಳು ಹಾಗೂ ಆಕರ್ಷಕ ಡ್ಯಾನ್ಸ್ ಮೇಳದ ಕುರಿತು ಮಾಹಿತಿ ನೀಡಿದರು. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಖಡ್ಡಾಯವಾಗಿ ಸ್ಥಳೀಯ ಆಟೋ ಸಂಘಟನೆಗಳಲ್ಲಿ ಸದಸ್ಯರಾಗಿರುವ ಕೊಡಗಿನ ಆಟೋ ಚಾಲಕರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈಗಾಗಲೇ 16ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ಉದ್ಘಾಟನಾ ಪಂದ್ಯದಲ್ಲಿ 5 ಓವರ್ ಗಳಿಗೆ ಸೀಮಿತವಾಗಿ ಪೊಲೀಸ್ ಇಲಾಖಾ ಸಿಬ್ಬಂದಿಗಳು, ವಕೀಲರು ಹಾಗೂ ವೈದ್ಯರ ತಂಡವನ್ನು ನಿರೀಕ್ಷಿಸಲಾಗಿದೆ. ವಿಜೇತ ತಂಡಕ್ಕೆ ವಿನ್ನರ್ ಮತ್ತು ರನ್ನರ್ ಟ್ರೋಫಿ ನೀಡಲಾಗುವುದು. ಆಟೋ ಚಾಲಕರ ನಡುವೆ ನಡೆಯುವ ಪಂದ್ಯಾವಳಿಯ ವಿಜೇತ ತಂಡಕ್ಕೆ 40ಸಾವಿರ ರೂ. ನಗದು ಮತ್ತು ಟ್ರೋಫಿ ಹಾಗೂ ರನ್ನರ್ 25ಸಾವಿರ ನಗದು ಮತ್ತು ಟ್ರೋಫಿ, ಮೂರು ಮತ್ತು ನಾಲ್ಕನೇ ಬಹುಮಾನ ಟ್ರೋಫಿ ನೀಡಲಾಗುವುದು ಎಂದರು. ಏ.11ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಗರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಕ್ರೀಡಾಕೂಟ ಮತ್ತು ಡ್ಯಾನ್ಸ್ ಮೇಳ ನಡೆಯಲಿದೆ. ಕ್ರೀಡಾಕೂಟದಲ್ಲಿ ಪುಟಾಣಿ ಮಕ್ಕಳಿಂದ ಕಾಲೇಜು ವಿದ್ಯಾರ್ಥಿಗಳ ವರೆಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕಾಳು ಹೆಕ್ಕುವುದು, ಬೆಲೂನ್ ಒಡೆಯುವುದು, ಬಕೆಟ್ ಗೆ ಚೆಂಡು ಎಸೆಯುವುದು ಕೇರಂ, ಕಬಡ್ಡಿ(ಮಕ್ಕಳಿಗೆ), ಓಟದ ಸ್ಪರ್ಧೆ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ನಡೆಯಲಿದೆ. ಮಹಿಳೆಯರಿಗೆ ಹಗ್ಗ ಜಗ್ಗಾಟ, ಬಾಂಬ್ ಇನ್ ದ ಸಿಟಿ, ಸಂಗೀತ ಕುರ್ಚಿ, ಮಡಿಕೆ ಒಡೆಯುವುದು, ನಿಂಬೆ ಚಮಚ ಓಟ, ಭಾರದ ಗುಂಡು ಎಸೆತ, ಮತ್ತು ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಪುರುಷರಿಗೆ ಹಗ್ಗಜಗ್ಗಾಟ, ತೆಂಗಿನ ಕಾಯಿಗೆ ಕಲ್ಲು ಎಸೆತ, ಭಾರದ ಗುಂಡು ಎಸೆತ, ಮಡಿಕೆ ಒಡೆಯುವುದು, ಹಾಗೆಯೇ ಆಟೋ ಚಾಲಕರಿಗೆ ಮಾತ್ರ ಅನ್ವಯವಾಗುವಂತೆ ಕಬಡ್ಡಿ ಪಂದ್ಯಾವಳಿ, ಸೊಂಟಕ್ಕೆ ಹಗ್ಗ ಕಟ್ಟಿ ಆಟೋ ಎಳೆಯುವುದು ಮತ್ತು 40ವರ್ಷದಿಂದ 70ವರ್ಷದ ಆಟೋ ಚಾಲಕರಿಗೆ ಅನ್ವಯಿಸುವಂತೆ ಅಂಗಿ ಗುಬ್ಬಿ ಹಾಕಿ ಓಟದ ವಿಶೇಷ ಸ್ಪರ್ಧೆ ಕೂಡ ನಡೆಯಲಿದೆ. ಅಂದು ಸಂಜೆ 6ಗಂಟೆಯ ನಂತರ ಆಕರ್ಷಕ ಡ್ಯಾನ್ಸ್ ಮೇಳ ನಡೆಯಲಿದ್ದು, ಭಾಗವಹಿಸುವ ಪ್ರತಿಯೊಬ್ಬರಿಗೂ ಸ್ಮರಣಿಕೆ ನೀಡಲಾಗುವುದು, ಡ್ಯಾನ್ಸ್ ಮೇಳದಲ್ಲಿ ಸ್ಪರ್ಧೆಗೆ ಅವಕಾಶವಿರುವುದಿಲ್ಲ ಎಂದು ಡಿ.ಹೆಚ್.ಮೇದಪ್ಪ ಸ್ಪಷ್ಟಪಡಿಸಿದರು. ಜಿಲ್ಲೆಯ ಆಟೋ ಮಾಲೀಕರು, ಚಾಲಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಡ್ಯಾನ್ಸ್ ಮೇಳದಲ್ಲಿ ಭಾಗವಹಿಸುವ ತಂಡಗಳು ಏಪ್ರಿಲ್ 5ರ ಒಳಗಾಗಿ 6360252689 ಮತ್ತು 9483840637 ಈ ಸಂಖ್ಯೆಗಳನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ನಗರ ಆಟೋ ಮಾಲೀಕ ಚಾಲಕರ ಸಂಘದ ನಗರಾಧ್ಯಕ್ಷ ಸಮ್ಮದ್ ಎ., ಉಪಾಧ್ಯಕ್ಷ ದಿನೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಾರನ ದಿನೇಶ್, ಖಜಾಂಚಿ ಹೆಚ್.ಎಸ್.ನಾಗರಾಜ್ ಹಾಗೂ ನಿರ್ದೇಶಕ ಜೆಸ್ಟಿನ್ ಡಿಸೋಜ ಉಪಸ್ಥಿತರಿದ್ದರು.









