
ಮಡಿಕೇರಿ ಮಾ.30 NEWS DESK : ಬೇತ್ರಿ ಮುಕ್ಕಾಟಿರ ಕುಟುಂಬಸ್ಥರ ವತಿಯಿಂದ ಕೊಡವ ಕುಟುಂಬಗಳ ನಡುವೆ ಏ.3 ರಿಂದ ಮತ್ತು ಮೇ 1 ರವರೆಗೆ ಮೂರ್ನಾಡು ಹಾಗೂ ಅರಮೇರಿಯಲ್ಲಿ 24ನೇ ವರ್ಷದ ‘ಮುಕ್ಕಾಟಿರ ಕ್ರಿಕೆಟ್ ನಮ್ಮೆ-2026’ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇತ್ರಿ ಮುಕ್ಕಾಟಿರ ಕುಟುಂಬದ ವಕ್ತಾರ ರವಿ ಚಿಯಣ್ಣ ಹಾಗೂ ಗೌರವ ಕಾರ್ಯದರ್ಶಿ ಭಜನ್ ಬೋಪಣ್ಣ ಅವರು ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದರು. ಮುಕ್ಕಾಟಿರ ಕ್ರಿಕೆಟ್ ನಮ್ಮೆಯಲ್ಲಿ ಸೆಣಸಾಡಲು ದಾಖಲೆಯ ಒಟ್ಟು 289 ಕೊಡವ ಕುಟುಂಬ ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ಮೂರ್ನಾಡು ವಿದ್ಯಾ ಸಂಸ್ಥೆಯ ಲಾಲು ಮುದ್ದಯ್ಯ ಕ್ರೀಡಾಂಗಣ, ಸರಕಾರಿ ಶಾಲಾ ಮೈದಾನ ಹಾಗೂ ಅರಮೇರಿ ಕಳಂಚೇರಿ ಶಾಲಾ ಮೈದಾನದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಆರು ಓವರ್ ನ ಪಂದ್ಯಾವಳಿ ಇದಾಗಿದ್ದು, ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮಹಿಳಾ ಕ್ರಿಕೆಟ್ ಗೆ ಈಗಾಗಲೇ 44 ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದು, ನೋದಣಿಗೆ ಏ.4 ರವರೆಗೆ ಅವಕಾಶವಿರುವುದರಿಂದ ಮತ್ತಷ್ಟು ಮಹಿಳಾ ತಂಡ ಬರುವ ನಿರೀಕ್ಷೆ ಇದೆ ಎಂದರು. ಮೇ 1 ರಂದು ಅಂತಿಮ ಪಂದ್ಯ ನಡೆಯಲಿದ್ದು, ಪುರುಷರ ವಿಭಾಗದಲ್ಲಿ ವಿಜೇತರಿಗೆ 1 ಲಕ್ಷ ನಗದು ಹಾಗೂ ಟ್ರೋಪಿ, ದ್ವಿತೀಯ 75 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು. ಮಹಿಳಾ ವಿಭಾಗದಲ್ಲಿ ವಿಜೇತರಿಗೆ 1 ಲಕ್ಷ ನಗದು ಹಾಗೂ ಟ್ರೋಪಿ, ದ್ವಿತೀಯ 50 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು. *ಉದ್ಘಾಟನೆ* ‘ಮುಕ್ಕಾಟಿರ ಕ್ರಿಕೆಟ್ ನಮ್ಮೆ-2026’ ನ್ನು ಏ.3 ರಂದು ಬೆಳಿಗ್ಗೆ 11 ಗಂಟೆಗೆ ಮೂರ್ನಾಡು ವಿದ್ಯಾ ಸಂಸ್ಥೆಯ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ಹಿರಿಯ ಹಾಕಿ ಪಟು ಬಾಳೆಯಡ ಕರುಣ್ ಕಾಳಪ್ಪ ಪಾಲ್ಗೊಳ್ಳಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಆಸ್ಪ್ರೇ ಗ್ರೂಪ್ಸ್ ನ ಸಿಎಂಡಿ ಜೆನಿತ್ ಅಯ್ಯಪ್ಪ ಹಾಗೂ ಕೊಡವ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ಕೀತಿಯಂಡ ಎನ್.ಕಾರ್ಯಪ್ಪ ಕಾರ್ಸನ್ ಉಪಸ್ಥಿತರಿರುವರು. ಪ್ರದರ್ಶನ ಪಂದ್ಯ ನಾರ್ತ್ ಕೂರ್ಗ್ ಮತ್ತು ಸೌತ್ ಕೂರ್ಗ್ ತಂಡಗಳ ನಡುವೆ ನಡೆಯಲಿದೆ ಎಂದು ರವಿ ಚಿಯಣ್ಣ ಹಾಗೂ ಭಜನ್ ಬೋಪಣ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬೇತ್ರಿ ಮುಕ್ಕಾಟಿರ ಕುಟುಂಬದ ಅಧ್ಯಕ್ಷ ಮಧು ದೇವಯ್ಯ ಹಾಗೂ ಮಾಧ್ಯಮ ವಕ್ತಾರ ಉತ್ತಮ್ ಬೋಪಣ್ಣ ಉಪಸ್ಥಿತರಿದ್ದರು.









