
ಸೋಮವಾರಪೇಟೆ ಮಾ.30 NEWS DESK : ಮಹಿಳಾ ಸಹಕಾರ ಸಂಘದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸಮಾಜದ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶನಿವಾರಸಂತೆಯ ಸಾಹಿತಿ ಶ.ಗ. ನಯನತಾರ ಮಾತನಾಡಿ, ಮಹಿಳೆಯರು ಇಂದಿನ ದಿನಗಳಲ್ಲಿ ಯಾವುದೇ ಕ್ಷೇತ್ರಕ್ಕೂ ಸೀಮಿತರಾಗದೇ, ಪುರುಷರಿಗೆ ಸರಿಸಮಾನವಾಗಿ ಎಲ್ಲಾ ವಲಯಗಳಲ್ಲಿ ಸಾಧನೆಗೈದು ತಮ್ಮ ಸಾಮಥ್ರ್ಯವನ್ನು ತೋರಿಸುತ್ತಿದ್ದಾರೆ ಎಂದು ಹೇಳಿದರು. ಮಹಿಳಾ ಸಂಘಗಳು ಮಹಿಳೆಯರ ಅಭಿವೃದ್ಧಿಗೆ ಸಹಕಾರಿ ಆಗುವ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳಬೇಕು. ಸಮಾಜದಲ್ಲಿನ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘದ ಸದಸ್ಯರು ಒಗ್ಗಟ್ಟಿನಿಂದ ಮುಂದಾಗಬೇಕೆಂದು ಕರೆ ನೀಡಿದರು. ಉನ್ನತ ಹುದ್ದೆಗಳಲ್ಲಿ ಇರುವ ಮಹಿಳೆಯರೂ ಇಂದಿಗೂ ಹಲವು ಸವಾಲುಗಳನ್ನು ಎದುರಿಸುತ್ತಿರುವುದು ವಾಸ್ತವ. ಕೆಲವರು ಸ್ವಾಭಿಮಾನದಿಂದ ಸ್ವತಂತ್ರ ಜೀವನ ನಡೆಸುತ್ತಿದ್ದರೂ, ವೃದ್ಧಾಪ್ಯದ ಸಂದರ್ಭದಲ್ಲಿ ಇದು ಸಮಸ್ಯೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಕುಟುಂಬ ಜೀವನದಲ್ಲಿ ಹೊಂದಾಣಿಕೆ ಮನೋಭಾವ ಅತ್ಯಂತ ಮುಖ್ಯವಾಗಿದ್ದು, ಪರಸ್ಪರ ಗೌರವ ಮತ್ತು ಸಹಕಾರದಿಂದ ಜೀವನವನ್ನು ಸಮತೋಲನಗೊಳಿಸಬೇಕು ಎಂದು ಸಲಹೆ ನೀಡಿದರು. ಸಂಘದ ಕಾರ್ಯಾಧ್ಯಕ್ಷೆ ಜ್ಯೋತಿ ಶುಭಾಕರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸುಮಾ ಸುದೀಪ್, ಗಾಯತ್ರಿ ನಾಗರಾಜ್, ಗೀತಾ ರಾಜು, ಮಾಯಾ ಗಿರೀಶ್, ಪಂಕಜ ಪ್ರಭಾಕರ್, ಉಮಾ ರುದ್ರಪ್ರಸಾದ್, ಜಯಲಕ್ಷ್ಮೀ ಸುಬ್ರಮಣಿ ಹಾಗೂ ಶೈಲಾ ವಸಂತ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯೆ ಲತಾ ಮಂಜು ಹಾಗೂ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಜಲಾಜಶೇಖರ್ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.









