ಕಣಿವೆ, NEWS DESK ಮಾ.31: ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮದ ಕಾವೇರಿ ನದಿ ದಂಡೆಯ ಐತಿಹಾಸಿಕ ನಂಜುಂಡೇಶ್ವರ ಹಾಗು ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ ಮಂಗಳವಾರ ಶ್ರದ್ದಾಭಕ್ತಿಯಿಂದ ನೆರವೇರಿತು. ಸೋಮವಾರ ಸಂಜೆ ಗ್ರಾಮದ ಪಟೇಲ್ ಮೋಹನ ಕುಮಾರ್ ಎಂಬವರ ಮನೆಯಿಂದ ಕನ್ನಂಬಾಡಮ್ಮ ದೇವರ ಆಭರಣಗಳನ್ನು ಧಾರ್ಮಿಕ ವಿಧಿಗಳೊಂದಿಗೆ ಮಂಗಳವಾದ್ಯ ಹಾಗೂ ಪೂರ್ಣಕುಂಭದೊಂದಿಗೆ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು.
ಬಳಿಕ ಮಂಗಳವಾರ ಬೆಳಗ್ಗೆ ಬಸವೇಶ್ವರ ಹಾಗೂ ಕನ್ನಂಬಾಡಮ್ಮ ದೇವತಾ ಮೂರ್ತಿಗಳನ್ನು ಕಾವೇರಿ ನದಿಗೆ ಕೊಂಡೊಯ್ದು ಗಂಗಾ ಪೂಜೆ ನೆರವೇರಿಸಲಾಯಿತು. ಬಳಿಕ ವೀರಗಾಸೆ ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ದೇವಾಲಯದ ಆವರಣಕ್ಕೆ ದೇವರನ್ನು ತರಲಾಯಿತು.
ಬಳಿಕ ದೇವಾಲಯದ ಮುಂಬದಿ ಅಳವಡಿತ ಕೊಂಡೋತ್ಸವ ಪೂಜೆ ಬಳಿಕ ದೇವತಾ ಮೂರ್ತಿ ಹೊತ್ತೊಯ್ದ ಭಕ್ತರು ವೀರಗಾಸೆಯವರೊಂದಿಗೆ ಬರಿಗಾಲಲ್ಲಿ ಕೊಂಡವನ್ನು ತುಳಿದು ಭಕ್ತಿ ಸಮರ್ಪಿಸಿದರು. ಪೂಜೋತ್ಸವ ದಲ್ಲಿ ವಿರಾಜಪೇಟೆ ಅರಮೇರಿ ಮಠಾಧಿಪತಿ ಶ್ರೀ ಶಾಂತಮಲ್ಲಿಕಾರದಜುನ ಸ್ವಾಮೀಜಿ ಹಾಗೂ ದಿಂಡಗಾಡು ಬಸವಜ್ಯೋತಿ ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ ಆಶೀರ್ವಚನ ನೀಡಿದರು.

ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ, ಕಾರ್ಯದರ್ಶಿ ಕೆ.ವಿ.ಪ್ರೇಮಾನಂದ, ಖಜಾಂಚಿ ಮುರುಳಿ ಮಾದಯ್ಯ ಪದಾಧಿಕಾರಿಗಳಾದ ಕೆ.ಎಸ್.ರತೀಶ್, ಬಾಲಕೃಷ್ಣ, ವಿಜುಚೆಂಗಪ್ಪ, ಲೀಲಾವತಿ, ಬಿ.ಸಿ. ಕಾಳಯ್ಯ, ಕೆಮ್ಮಾರನ ಲೋಕನಾಥ್ ಮೊದಲಾದವರಿದ್ದರು. ಸೋಮವಾರಪೇಟೆಯ ಕೆ.ಪಿ. ಯೋಗೇಶ್, ಎಸ್.ಎ.ಹರೀಶ್ ಪೂಜಾ ವಿಧಿ ನಡೆಸಿಕೊಟ್ಟರು. ಪಾಂಡವಪುರದ ವಿಶ್ವರುದ್ರ, ರವಿಕುಮಾರ್, ಪ್ರಜ್ವಲ್ ತಂಡದಿಂದ ವೀರಗಾಸೆ ಭಕ್ತರನ್ನು ಆಕರ್ಷಿಸಿತು. ನಂತರ ಮಹಾಮಂಗಳಾರತಿ ಯೊಂದಿಗೆ ನೆರೆದ ಭಕ್ತ ಸಂಕುಲಕ್ಕೆ ಪ್ರಸಾದ, ಮಹಾ ಪ್ರಸಾದ ವಿತರಿಸಲಾಯಿತು.







