‘ಕೊಡವ ಅಭಿವೃದ್ಧಿ ನಿಗಮ’ ಸ್ಥಾಪನೆಯ ಸಂಕಲ್ಪ ಈಡೇರಿದ ಹಿನ್ನಲೆಯಲ್ಲಿ ಯುನೈಟೆಡ್ ಕೊಡವ ಆರ್ಗನೈಸೇಷನ್ – ಯುಕೊ ಸಂಘಟನೆಯ ಸದಸ್ಯರು ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದಲ್ಲಿ ಇಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿ, ಅನ್ನದಾನಕ್ಕೆ ಅಕ್ಕಿ ಹಾಗು ದೀಪದ ಎಣ್ಣೆ ದಾನ ನೀಡಿ ಹರಕೆ ಸಲ್ಲಿಸಿದರು.
ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಮುಂಗಡಪತ್ರದಲ್ಲಿ ನೂತನವಾಗಿ “ಕೊಡವ ಅಭಿವೃದ್ದಿ ನಿಗಮ”ವು ಘೋಷಣೆಯಾಗಿದ್ದು, ಈ ಒಂದು ಪರಿಕಲ್ಪನೆಯನ್ನು ಹುಟ್ಟುಹಾಕಿ, ಇದಕ್ಕಾಗಿ ಕಳೆದ ಒಂದು ದಶಕದಿಂದ ನಿರಂತರ ಪರಿಶ್ರಮಪಟ್ಟಿರುವ ಯುನೈಟೆಡ್ ಕೊಡವ ಆರ್ಗನೈಸೇಷನ್ – ಯುಕೊ ಸಂಘಟನೆಯ ಸಂಕಲ್ಪ ಈಡೇರಿದ ಹಿನ್ನಲೆಯಲ್ಲಿ ಸಂಘಟನೆಯ ಸದಸ್ಯರು ಹಾಗು ಹಿತೈಶಿಗಳು ಇಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಳಕ್ಕೆ ಬೇಟಿನೀಡಿ ವಿಶೇಷ ಪೂಜೆ ಸಲ್ಲಿಸಿ, ಕೊಡವ ಅಭಿವೃದ್ಧಿ ನಿಗಮ ಘೋಷಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಶಾಸಕ ಹಾಗು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಮತ್ತು ಈ ಒಂದು ಪರಿಕಲ್ಪನೆಯನ್ನು ಯಶಸ್ಸಿನೆಡೆಗೆ ಮುನ್ನಡೆಸಿದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಹಾಗು ಸಂಘಟನೆಯ ಸರ್ವ ಸದಸ್ಯರು, ಹೋರಾಟಕ್ಕೆ ಸ್ಪಂದಿಸಿದ ಎಲ್ಲಾ ಮುಖಂಡರುಗಳು, ಮತ್ತು ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಬೆಂಬಲಿಸಿದ ಎಲ್ಲರಿಗೂ ಒಳಿತಾಗುವಂತೆ ದೇಶ ತಕ್ಕರಾದ ಪರದಂಡ ವಿಠಲ ಕಾವೇರಪ್ಪ ಬೇಡಿಕೊಂಡರು.
ಈ ಸಂದರ್ಭ ಮಾತನಾಡಿದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಕೊಡವ ಜನಾಂಗದ ಸಮಗ್ರ ಅಭಿೃದ್ಧಿಗಾಗಿ ನೂತನವಾಗಿ ‘ಕೊಡವ ಅಭಿವೃದ್ಧಿ ನಿಗಮ’ ಸ್ಥಾಪಿಸಬೇಕೆಂಬ ಪರಿಕಲ್ಪನೆಯನ್ನು ಹುಟ್ಟುಹಾಕಿ ಯುಕೊ ಸಘಟನೆಯು ವ್ಯವಸ್ಥಿತವಾಗಿ ಬೇಡಿಕೆಯನ್ನು ಸರ್ಕಾರಕ್ಕೆ ಮುಟ್ಟಿಸಿ, ನಿರಂತರ ಹೋರಾಟವನ್ನು ಮಾಡುತ್ತಲೇ ಬಂದಿತ್ತು. ಈ ನಿಟ್ಟಿನಲ್ಲಿ ಹಿಂದಿನ ಸರ್ಕಾರ ಕೊಡವ ಜನಾಂಗದ ಸಮಗ್ರ ಶ್ರೇಯೋಭಿವೃದ್ದಿಗೆಂದು 10 ಕೋಟಿ ನೀಡಿತ್ತು. ಆದರೆ ಇದೀಗ ಶಾಸಕ ಎ. ಎಸ್. ಪೊನ್ನಣ್ಣನವರ ಪ್ರಭಾವದಿಂದ ನಮ್ಮ ಕೊಡವ ಅಭಿವೃದ್ಧಿ ನಿಗಮದ ಬೇಡಿಕೆ ಈಡೇರಿದೆ. ಕೊಡಗು ಕರ್ನಾಟಕದೊಂದಿಗೆ ವಿಲೀನದ ನಂತರದಲ್ಲಿ ಕೊಡವರ ಮಹತ್ವದ ಬೇಡಿಕೆಯೊಂದನ್ನು ಸರ್ಕಾರ ಈಡೇರಿಸಿರುವುದರ ಮೂಲಕ ಹೊಸ ಇತಿಹಾಸ ಸೃಷ್ಠಿಯಾಗಿದೆ ಎಂದು ಹೇಳಿದರು.
ಕೊಡವರು ‘ಕೊಡವ ಅಭಿವೃದ್ಧಿ ನಿಗಮ’ವನ್ನು ‘ಕೊಡವ ವ್ಯವಹಾರಗಳ ಮಂತ್ರಾಲಯ’ದಂತೆ ಪರಿಗಣಿಸಬೇಕಿದೆ. ಮುಖ್ಯ ಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರ ಅಷ್ಟೊಂದು ಮಹತ್ತರವಾದ ಕೊಡುಗೆಯನ್ನು ಕೊಡವರಿಗೆ ನೀಡಿದೆ. ಸೂಕ್ಮಾತಿ ಸೂಕ್ಷ್ಮ ಅಲ್ಪ ಸಂಖ್ಯಾತರಾಗಿರುವ ಕೊಡವರಿಗೆ ಇದನ್ನು ಪಡೆದುಕೊಳ್ಳುವುದು ಅಷ್ಟು ಸುಲಬದ ಮಾತಾಗಿರಲಿಲ್ಲ. ಆದರೆ ಅಚಲವಾದ ನಂಬಿಕೆಯಿಂದ ಯುಕೊ ಈ ಹೋರಾಟವನ್ನು ರೂಪಿಸಿ ಯಶಸ್ವೀಯಾಗಿ ಬೇಡಿಕೆಯನ್ನು ಸರ್ಕಾರಕ್ಕೆ ಮುಟ್ಟಿಸಲಾಗಿತ್ತು. ಆದರೆ ಈ ಬಜೆಟಿನಲ್ಲಿ ಘೋಷಣೆಮಾಡುವಲ್ಲಿ ಪೊನ್ನಣ್ಣನವರಜ ಕಾಳಜಿ ಮತ್ತು ಬದ್ಧತೆ ಹಾಗು ಸರ್ಕಾರದಲ್ಲಿ ಅವರಿಗಿರುವ ವರ್ಚಸ್ಸು ಕೆಲಸಮಾಡಿದೆ. ಹಾಗೆಯೇ
ನಮ್ಮ ಯುಕೊ ಸಂಘಟನೆಯ ನಿರಂತರ ಪರಿಶ್ರಮ, ಹಾಗು ತಂತ್ರಗಾರಿಕೆಯ ನಡೆಗೆ ದೊರೆತ ಗೆಲುವು ಇದಾಗಿದೆ. ಎಂದು ಅವರು ವಿಶ್ಲೇಷಿದರು.
ಇದೇ ಸಂದರ್ಭಲ್ಲಿ ಹಿಂದಿನ ಸರ್ಕಾರ ಹಾಗು ಮುಖಂಡರುಗಳು ನೀಡಿದ ಸಹಕಾರವನ್ನೂ ಮರೆಯದೆ ಸ್ಮರಿಸುವುದಾಗಿ ಅವರು ತಿಳಿಸಿದರು.
ಕ್ರೆಡಿಟ್ ವಾರ್ ಬಗ್ಗೆ ಪ್ರತಿಕ್ರೀಯಿಸಿ ಮಾತನಾಡಿದ ಅವರು, ನಿಜವಾದ ಕ್ರೆಡಿಟ್ ದೊರಕಿರುವುದು ಸಮಸ್ತ ಕೊಡವ ಜನಾಂಗಕ್ಕೆ. 2 ಲಕ್ಷ ಕೊಡವರು ಇದರ ನೇರ ಫಲಾನುಭವಿಗಳು, ಹೀಗಿರುವಾಗ ಕ್ಷುಲ್ಲಕ ನಡವಳಿಕೆಯನ್ನು ಬಿಟ್ಟು ನಿಗಮವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಅವರು ಹೇಳಿದರು. ಹಾಗೆಯೇ ಎಲ್ಲರಿಗೂ ಈ ನಿಗಮದ ಹಿಂದಿನ ಪಾತ್ರಗಳ ಕುರಿತು ಅರಿವಿದೆ, ಆದರೂ ಈ ಯಶಸ್ಸನ್ನು ಅರಗಿಸಿಕೊಳ್ಳಲಾಗದೆ ಕೆಲವರು ಗೊಂದಲ ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಇದೀಗ ಕೊಡವರಿಗಾಗಿಯೇ ಪ್ರತ್ಯೇಕ ನಿಗಮ ಘೋಷಣೆಯಾಗಿದ್ದು, ಕನಿಷ್ಠ 50 ರಿಂದ 100 ಕೋಟಿ ರುಪಾಯಿಗಳ ಅನುದಾನ ದೊರಕುವ ನಿರೀಕ್ಷೆಯಿದೆ. ಇಂತಹ ಸಂದರ್ಭದಲ್ಲಿ, ಕ್ರೆಡಿಟ್ ವಿಚಾರವನ್ನು ಮುನ್ನೆಲೆಗೆ ತಂದು ರಾಜಕೀಯ ಮಾಡುವುದನ್ನು ಬಿಟ್ಟು, ಜನಾಂಗದ ಶ್ರೇಯೋಭಿವೃದ್ದಿಗೆ ನಿಗಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೊಡವರು ಗಮನ ಹರಿಸುವುದೊಳಿತು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭ ದೇಶ ತಕ್ಕರಾದ ಪರದಂಡ ವಿಠಲಕಾವೇರಪ್ಪ ಮಂಜು ಚಿಣ್ಣಪ್ಪಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಯುಕೊ ಸದಸ್ಯರಾದ, ಚೆಪ್ಪುಡಿರ ಸುಜು ಕರುಂಬಯ್ಯ, ನೆಲ್ಲಮಕ್ಕಡ ಜೆಫ್ರಿ ಮಾದಯ್ಯ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಅಪ್ಪಾರಂಡ ವೇಣು ಪೊನ್ನಪ್ಪ, ಮಚ್ಚಾಮಾಡ ರಮೇಶ್,ಕಾವಡಿಚಂಡ ದೀಪಕ್ ಉತ್ತಯ್ಯ, ತೀತಿಮಾಡ ಬೋಸ್ ಅಯ್ಯಪ್ಪ, ಪಳಂಗಿಯಂಡ ದರ್ಶನ್, ಮುಕ್ಕಾಟಿರ ರಾಬಿನ್,
ಚೆಪ್ಪುಡಿರ ಪ್ರತಿಮಾ ಕರುಂಬಯ್ಯ, ಬೊಳ್ಳಚೆಟ್ಟಿರ ಮೈನಾ ಕಾಳಪ್ಪ, ಕುಂಜಿಲಂಡ ಗ್ರೇಸಿ ಪೂಣಚ್ಚ, ಪಾಂಡಂಡ ಸ್ವಾತಿ ಗಣೇಶ್, ಕಾವಡಿಚಂಡ ಪವಿತ್ರ ಉತ್ತಯ್ಯ, ಮಚ್ಚಾಮಾಡ ರೇಶ್ಮಾ ರಮೇಶ್, ಶ್ರಾವ್ಯ ಗಂಗಮ್ಮ ಉಪಸ್ಥಿತರಿದ್ದರು.







