
ಮಡಿಕೇರಿ ಏ.6 NEWS DESK : ನಗರದ ಕಲಾ ಕಾವ್ಯ ನಾಟ್ಯ ಶಾಲೆಯ ವತಿಯಿಂದ ಏ.8 ರಂದು ನಗರದ ಮೈತ್ರಿ ಸಭಾಂಗಣದಲ್ಲಿ ಆರು ತಿಂಗಳ ಕಾಲ ತರಬೇತು ಪಡೆದ ವಿದ್ಯಾರ್ಥಿಗಳಿಂದ ಎರಡು ಯಕ್ಷಗಾನ ಪ್ರಸಂಗಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆಯೆಂದು ನಾಟ್ಯ ಶಾಲೆಯ ಪ್ರಮುಖರಾದ ವಿದುಷಿ ಕಾವ್ಯಶ್ರೀ ಕಪಿಲ್ ದುಗ್ಗಳ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿಯನ್ನಿತ್ತ ಅವರು, ಕರಾವಳಿ ಭಾಗದ ಗಂಡು ಕಲೆ ಯಕ್ಷಗಾನದ ಮೂಲ ಪಾಠಗಳತ್ತ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಚಿಂತನೆಯ ಹಿನ್ನೆಲೆಯಲ್ಲಿ 38 ಮಂದಿ ಹೆಣ್ಣು ಮಕ್ಕಳು ಮತ್ತು ಇಬ್ಬರು ಬಾಲಕರನ್ನು ಒಳಗೊಂಡಂತೆ 40 ಮಂದಿಗೆ ಯಕ್ಷಗಾನದ ಹಿರಿಯ ಕಲಾವಿದರಾದ ಬಾಲಕೃಷ್ಣ ನಾಯರ್ ಅವರ ಮೂಲಕ ಆರು ತಿಂಗಳ ಕಾಲ ಯಕ್ಷಗಾನದ ಪ್ರಾಥಮಿಕ ಪಾಠದೊಂದಿಗೆ, ಎರಡು ಯಕ್ಷಗಾನ ಪ್ರಸಂಗಗಳನ್ನು ಕಲಿಸಿರುವುದಾಗಿ ಮಾಹಿತಿಯನ್ನಿತ್ತರು. ಏ.8 ರಂದು ಮಧ್ಯಾಹ್ನ 1 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಳಿಕ 8 ವಿದ್ಯಾರ್ಥಿಗಳು ಗಣಪತಿ ಸ್ತುತಿಯನ್ನು ಪ್ರಸ್ತುತಪಡಿಸಲಿದ್ದಾರೆ. ನಂತರ 2.30 ಗಂಟೆ ಅವಧಿಯ “ಶ್ರೀ ದೇವಿ ಮಹಾತ್ಮೆ” ಕಥಾ ಪ್ರಸಂಗವನ್ನು 20 ಮಕ್ಕಳು ಪ್ರಸ್ತುತ ಪಡಿಸಲಿದ್ದು, 1.30 ಗಂಟೆ ಅವಧಿಯ “ವೀರ ಅಭಿಮನ್ಯು” ಪ್ರಸಂಗವನ್ನು 12 ಮಕ್ಕಳು ನಡೆಸಿಕೊಡಲಿದ್ದಾರೆಂದು ವಿವರಗಳನ್ನಿತ್ತರು. ಈ ಯಕ್ಷಗಾನ ಪ್ರಸಂಗಗಳ ಭಾಗವತಿಕೆಯನ್ನು ರಾಮಪಡ್ರೆ ಅವರು ನಡೆಸಿಕೊಡಲಿದ್ದು, ಚಂಡೆ ಮದ್ದಳೆಯಲ್ಲಿ ಬಾಲಸುಬ್ರಹ್ಮಣ್ಯ ಭಟ್ ಗುತ್ತಿಗಾರು, ಬಾಲಕೃಷ್ಣ ಬೊಮ್ಮಾರ್, ಅಭವ್ ಸೋಣಂಗೇರಿ, ಚಕ್ರತಾಳದಲ್ಲಿ ಗಿರೀಶ್ ಕಕ್ಕೆಬೆಟ್ಟು ಸಾಥ್ ನೀಡಲಿದ್ದಾರೆ. ಯಕ್ಷಗಾನ ಪಾತ್ರಧಾರಿಗಳ ವೇಷಭೂಷಣವನ್ನು ಕಲ್ಮಡ್ಕದ ರಂಗ ಸೌರಭದವರು ನಿರ್ವಹಿಸಲಿದ್ದಾರೆಂದು ತಿಳಿಸಿದರು. :: ಸಭಾ ಕಾರ್ಯಕ್ರಮ :: ಯಕ್ಷಗಾನ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕರಾದ ಸುಬ್ರಾಯ ಸಂಪಾಜೆ, ಸವಣೂರಿನ ಶ್ರವಣರಂಗ ಪ್ರತಿಷ್ಠಾನದ ಯಕ್ಷಗಾನ ಗುರುಗಳಾದ ತಾರಾನಾಥ್ ಸವಣೂರು, ಬಾಲ ಭವನ ಮಡಿಕೇರಿಯ ಪ್ರಮುಖರಾದ ರವೀಂದ್ರ ರೈ ಅವರು ಪಾಲ್ಗೊಳ್ಳಲಿದ್ದಾರೆಂದರು. ನಗರದ ಗೋಷ್ಠಿಯಲ್ಲಿ ನಾಟ್ಯ ಶಾಲೆಯ ವಿದ್ಯಾರ್ಥಿ ಹಾಗೂ ಪೋಷಕರಾದ ಪ್ರೊಫೆಸರ್ ಡಾಕ್ಟರ್ ಶೈಲಾಶ್ರೀ, ಪೋಷಕರಾದ ಪ್ರೀತು ಗಯಾ, ಗಾನಶ್ರೀ ನಿಡ್ಯಮಲೆ, ವಿದ್ಯಾರ್ಥಿಗಳಾದ ಚಂದ್ರಾವತಿ, ಇಂಚರ ಎ. ಉಪಸ್ಥಿತರಿದ್ದರು.









