
ಸುಂಟಿಕೊಪ್ಪ ಏ.6 NEWS DESK : ಮಾದಕ ವಸ್ತುಗಳ ಸೇವನೆಯನ್ನು ಸಂಪೂರ್ಣ ನಿರ್ಮೂಲನೆಗೊಳಿಸಲು ಪ್ರತಿಯೊಬ್ಬರು ಪಣತೊಡಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದ್ದಾರೆ. ಸುಂಟಿಕೊಪ್ಪ ಸಲಾಫಿ ಮಸೀದಿ ಆವರಣದಲ್ಲಿ ಕೊಡಗು ಜಿಲ್ಲಾ ವಿಸ್ಡಂ ಇಸ್ಲಾಮಿಕ್ ಆರ್ಗನೈಷಶನ್ ಸಂಸ್ಥೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಸ್ವತಃ ವೈಧ್ಯನಾಗಿರುವ ನಾನು ಮಾದಕ ವಸ್ತುಗಳ ಸೇವನೆ ಮತ್ತು ದುಷ್ಪಾರಿಣಾಮಗಳಿಂದ ಚಿಕಿತ್ಸೆಗೆ ಒಳಗಾಗಿರುವ ಮತ್ತು ಆಸ್ಪತ್ರೆಗೆ ಸೇರಿರುವ ಅನೇಕರನ್ನು ನೋಡಿದ್ದೇನೆ. ದುರಾದೃಷ್ಟಕರ ವಿಚಾರವೆಂದರೇ ಒಂದು ಸಲ ರುಚಿ ನೋಡೊಣ ಎಂದು ಮಾದಕ ವಸ್ತುಗಳ ಸೇವನೆಯನ್ನು ಆರಂಭಿಸಿದರೆ ನಂತರ ಮಾದಕ ವಸ್ತುಗಳೇ ನಮ್ಮನ್ನು ತಿಂದು ಹಾಕುತ್ತದೆ ಎಂದರು. ಮಾದಕ ವಸ್ತುಗಳ ಚಟ ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮನ್ನು ಅವುಗಳ ದಾಸರನ್ನಾಗಿ ಮಾಡಿ ಬಿಡುತ್ತದೆ. ಸಣ್ಣದಾಗಿ ಶುರುವಾಗುವ ಈ ಅಭ್ಯಾಸವು ಬೃಹತ್ ಕಾಯಿಲೆಯಾಗಿ ಮಾರ್ಪಟ್ಟು ಕುಟುಂಬ ಕಂಟಕವಾಗಿ ಪರಿಣಮಿಸುತ್ತದೆ. ಪೋಷಕರು, ಶಿಕ್ಷಕರು, ಸಮಾಜ ಸೇವಕರು ಮತ್ತು ಪೊಲೀಸರು ಈ ಬಗ್ಗೆ ತೀವ್ರ ನಿಗಾವಹಿಸಬೇಕೆಂದು ಕರೆ ನೀಡಿದರು. ಮಾದಕ ವಸ್ತುಗಳ ಸೇವನೆ ಪತ್ತೆ ಹಚ್ಚುವಿಕೆ ಹಾಗೂ ಕಾನೂನಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತನ್ನ ಸಂಪೂರ್ಣ ಸಹಕಾರ ಇದೆ ಎಂದು ಡಾ.ಮಂತರ್ ಗೌಡ ನುಡಿದರು. ಕುಶಾಲನಗರ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಈ ಹಿಂದೆ ಅವಿಭಕ್ತ ಕುಟುಂಬಗಳಿದ್ದು, ಮಕ್ಕಳು ಮನೆ ಮಂದಿ ಎಲ್ಲಾರೂ ಒಟ್ಟಾಗಿ ಕುಟುಂಬದ ಸಾಮರಸ್ಯವನ್ನು ಎತ್ತಿ ಹಿಡಿಯುತ್ತಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ಸಾಮಾನ್ಯ ಬದಲಾವಣೆಗಳನ್ನು ಕಾಣುತ್ತಿದ್ದು, ಈಗಿನ ಮಕ್ಕಳು ವಿದ್ಯಾಭ್ಯಾಸ ಮುಗಿಸಿದ ಅಥವಾ ಆಗ ತಾನೇ ಕೆಲಸಕ್ಕೆ ಸೇರಿದವರು ನಾವು ನಮಗೆ ಇಷ್ಟ ಬಂದ ಯುವಕ ಅಥವಾ ಯುವತಿಯೊಂದಿಗೆ ಸಂಬಂಧದಲ್ಲಿದ್ದೇವೆ ಎಂದು ಹೇಳುತ್ತಿದ್ದಾರೆ. ಸಮಾಜ ಎಲ್ಲಿಗೆ ತಲುಪಿದೆಯೆಂದು ನಾವು ಆಲೋಚಿಸಬೇಕಾಗಿದೆ ಎಂದು ಹೇಳಿದರು. ತಂದೆ ತಾಯಿಗಳು ತಮ್ಮ ಮಕ್ಕಳನ್ನು ತಪ್ಪಸ್ಸಿನಂತೆ ಸಾಕುತ್ತಾರೆ. ತಾವು ಸಾಧಿಸಲಾಗದನ್ನು ತಮ್ಮ ಮಕ್ಕಳು ಸಾಧಿಸಲೆಂದು ಅವರನ್ನು ಹೆಗಲ ಮೇಲೆ ಹೊತು ನಡೆಯುತ್ತಾರೆ ಆದರೆ ಮಕ್ಕಳು ತಂದೆ ತಾಯಿಗಳ ಕನಸ್ಸಿಗೆ ಕೊಳ್ಳಿಇಟ್ಟು ಮಾದಕ ವಸ್ತುಗಳ ಜಾಲಕ್ಕೆ ಸಿಲುಕಿ ಭವಿಷ್ಯವನ್ನೇ ನಾಶ ಮಾಡಿಕೊಳ್ಳುತ್ತಾರೆಂದು ವಿ.ಪಿ.ಶಶಿಧರ್ ಹೇಳಿದರು. ನಾವು ಸ್ವತಃ ಬದಲಾಗುವವರೆಗೆ ಸೃಷ್ಟಿಕರ್ತನು ಕೂಡ ನಮ್ಮನ್ನು ಬದಲಾಯಿಸುವುದಿಲ್ಲ ಎಂದು ಅವರು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಉಸೈನ್ ಶಾಲಾಫಿ ಶಾರ್ಜ, ಶಿಯಾಬ್ ಎಡತ್ತಾರ, ಡಾ.ಅಬ್ದುಲಾ ಬಸಿಲ್, ಅನಿಲ್ ತಲಾಪಾಡಿ ಮುಖ್ಯ ಭಾಷಣಕಾರರಾಗಿ ಡ್ರಗ್ಸ್ ಮುಕ್ತರಾಗೋಣ, ನಮ್ಮ ಕುಟುಂಬಗಳನ್ನು ರಕ್ಷಿಸೋಣ ಎಂಬ ವಿಷಯದ ಮೇರೆ ಪ್ರವಚನಗಳನ್ನು ನೀಡಿದರು. ಕಾರ್ಯಕ್ರಮದ ಸಂಘಟಕರಾದ ಶಬ್ಬೀರ್, ಹೆಚ್.ಯು.ರಫೀಕ್ಖಾನ್ ಡಾ.ಮಂತರ್ಗೌಡ ಮತ್ತು ವಿ.ಪಿ.ಶಶಿಧರ್ ಅವರನ್ನು ಗೌರವಿಸಿದರು. ವೇದಿಕೆಯಲ್ಲಿ ವಿಸ್ಡಂ ಇಸ್ಲಮಿಕ್ ಆರ್ಗನೈಷಶನ್ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸ್ವಯಂ ಸೇವಕರು ಪಾಲ್ಗೊಂಡಿದ್ದರು.









