
ಮಡಿಕೇರಿ ಏ.11 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೊಡಮಾಡಲಾಗುವ ಪ್ರತಿಷ್ಠಿತ “ವಿಜಯಾ ವಿಷ್ಣು ಭಟ್ ದತ್ತಿ ಪ್ರಶಸ್ತಿ”ಯನ್ನು ಈ ಬಾರಿ ಉಪನ್ಯಾಸಕರು ಹಾಗೂ ಲೇಖಕರಾದ ಪ್ರತಿಮಾ ಹರೀಶ್ ರೈರವರಿಗೆ ಶನಿವಾರ ಪ್ರದಾನ ಮಾಡಲಾಯಿತು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ಆಯೋಜಿತ ಪ್ರಶಸ್ತಿ ಪ್ರದಾನ ಮತ್ತು ಜಲಜಾ ಶೇಖರ್ ಹಾಗೂ ಜೆ.ಸಿ.ಶೇಖರ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ, ಕಾಲೇಜಿನ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಸ್ಥರು ಹಾಗೂ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪುರಸ್ಕøತೆ ಪ್ರೊ.ನಯನ ಕಶ್ಯಪ್ ಅವರು, “ಅಂತರಗಂಗೆ” ಅಂಕಣ ಬರಹಗಳ ಪುಸ್ತಕವನ್ನು ರಚಿಸಿರುವ ಪ್ರತಿಮಾ ಹರೀಶ್ ರೈ ಅವರಿಗೆ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಹಾಗೂ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಮನೆ ಮನಗಳಲ್ಲಿ ಕನ್ನಡಕ್ಕಿರಲಿ ಆದ್ಯತೆ- ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿದ ಪೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮೇಜರ್ ಡಾ. ರಾಘವ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡದೆಡೆಗೆ ಯುವ ಸಮೂಹದಿಂದ ಕಂಡು ಬರುತ್ತಿರುವ ನಿರ್ಲಕ್ಷ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಪ್ರತಿಯೊಬ್ಬ ಪೋಷಕರು ತಮ್ಮ ಮನೆಗಳಲ್ಲಿ ಇಂಗ್ಲೀಷ್ ಭಾಷಾ ವ್ಯಾಮೋಹದಿಂದ ಹೊರ ಬಂದು ಕನ್ನಡದಲ್ಲೆ ತಮ್ಮ ಕುಟುಂಬದ ಸದಸ್ಯರೊಂದಿಗೆ ವ್ಯವಹರಿಸಿದಾಗ ಕನ್ನಡದ ಬೆಳವಣಿಗೆ ಸಾಧ್ಯವಾಗುತ್ತದೆಂದು ವಿಶ್ವಾಸ ವ್ಯಕ್ತಪಡಿಸಿ, ಮನೆ ಮನಗಳಲ್ಲಿ ಕನ್ನಡದತ್ತ ಒಲವು ಮೂಡಿ ಬರಲಿ ಎಂದು ಕರೆ ನೀಡಿದರು. ತಮ್ಮ ಹೆಸರು ಶಾಶ್ವತವಾಗಿರಬೇಕೆನ್ನುವ ಭಾವನೆಯಿಂದ ಕೆಲವರು ತಾವು ಹೋದೆಡೆಗಳಲ್ಲಿನ ಕಲ್ಲು ಬಂಡೆಗಳಲ್ಲಿ ತಮ್ಮ ಹೆಸರನ್ನು ಕೆತ್ತುವುದನ್ನು ಕಾಣುತ್ತೇವೆ. ನಿಜಕ್ಕಾದರೆ, ಸಾವಿನ ಬಳಿಕವೂ ನಮ್ಮ ಹೆಸರು ಶಾಶ್ವತವಾಗಿರಬೇಕಾದರೆ ಜನ ಓದುವ ಕೃತಿಗಳ ರಚನೆ ಮಾಡಬೇಕು. ಇಲ್ಲವೆ ಜನ ಒಪ್ಪುವ ಕೆಲಸ ಮಾಡಬೇಕೆಂದು ತಿಳಿಸಿ, ಕನ್ನಡದಲ್ಲಿ ಸಾಹಿತ್ಯ ರಚನೆಗೆ ಪ್ರತಿಯೊಬ್ಬರು ಆಸಕ್ತರಾಗಬೇಕೆಂದು ತಿಳಿಸಿದರು. ವಚನಗಳ ಕಲಿಕೆಯಿಂದ ಮನುಜರಾಗಿ…. ಜಲಜಾ ಶೇಖರ್ ಹಾಗೂ ಶ್ರೀ ಜೆ.ಸಿ.ಶೇಖರ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ, ವಚನ ಸಾಹಿತ್ಯದ ಹಿರಿಮೆಯ ಕುರಿತು ಮಾತನಾಡಿದ ಜಿಲ್ಲಾ ಕಸಾಪ ನಿರ್ದೇಶಕರು ಹಾಗೂ ಶಿಕ್ಷಕರಾದ ಮೇ.ನಾ.ವೆಂಕಟನಾಯಕ್, ನವ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ 12ನೇ ಶತಮಾನದ ಶರಣರ ವಚನಗಳನ್ನು ಪ್ರಸ್ತುತ ದಿನಮಾನಗಳಲ್ಲಿ ದಿನಕ್ಕೊಂದು ಕಲಿತರೆ ನಾವೆಲ್ಲರೂ “ಮನುಷ್ಯ”ರಾಗಬಹುದು, ಉತ್ತಮ ಸಮಾಜ ನಿರ್ಮಾಣವಾಗಬಲ್ಲುದೆಂದು ದೃಢವಾಗಿ ನುಡಿದರು. ಹನ್ನೊಂದನೇ ಶತಮಾನದ ಕೊನೆಯ ಭಾಗ ಮತ್ತು 12ನೇ ಶತಮಾನದಲ್ಲಿದ್ದ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ನಮ್ಮ ಸುತ್ತಮುತ್ತಲ ಸಮಾಜದ ಡಾಂಬಿಕತವನ್ನು ಬಯಲಿಗೆಳೆಯುವ ಮೂಲಕ ನವ ಸಮಾಜದ ನಿರ್ಮಾಣಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ವಚನಕಾರ ದೇವರದಾಸಿಮಯ್ಯ ಸಮಾಜದ ಡಾಂಬಿಕತನವನ್ನು ತಮ್ಮ ವಚನಗಳಲ್ಲಿ ವಿಡಂಬನೆ ಮಾಡಿರುವುದನ್ನು ಉಲ್ಲೇಖಿಸಿ, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯರ ವಚನಗಳನ್ನು ಉಲ್ಲೇಖಿಸಿ, ಇವರೆಲ್ಲರು ಮಾನವ ಜನ್ಮ ಅತ್ಯಂತ ಶ್ರೇಷ್ಠವಾದದ್ದು, ಅದನ್ನು ವ್ಯರ್ಥಮಾಡದೆ, ಸಮಾನತೆಯ ಪರಿಕಲ್ಪನೆಯೊಂದಿಗೆ, ಕಾಯಕ ತತ್ತ್ವದ ಮೂಲಕ ಅದನ್ನು ಸಾರ್ಥಕಗೊಳಿಸುವಂತೆ ಕರೆ ನೀಡಿದ್ದರು. ಅವರೆಲ್ಲರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆಯೆಂದು ನುಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ನಾಲ್ವಡಿ ಕೃಷ್ಣ ರಾಜ ಒಡೆಯರ್ರಿಂದ 1915 ರಲ್ಲಿ ಸ್ಥಾಪಿಸಲ್ಪಟ್ಟ ಕನ್ನಡ ಸಾಹಿತ್ಯ ಪರಿಷತ್ತು 110 ವರ್ಷಗಳನ್ನು ಪೂರೈಸಿದೆ. ಪ್ರಸ್ತುತ ರಾಜ್ಯದಾದ್ಯಂತ ಪರಿಷತ್ತು 3 ಸಾವಿರಕ್ಕೂ ಹೆಚ್ಚಿನ ದತ್ತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕೊಡಗು ಜಿಲ್ಲೆಯಲ್ಲಿ 40 ದತ್ತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ವಿಜಯ ವಿಷ್ಣು ಭಟ್ ಅವರು ಜಿಲ್ಲೆಯಲ್ಲಿ ಸುದೀರ್ಘಾವಧಿ ಶಿಕ್ಷಕರಾಗಿ ಸೇವೆ ಸಲ್ಲಿಸಿದವರಾಗಿದ್ದು, ಅವರ ಅಪೇಕ್ಷೆಯಂತೆ ದತ್ತಿ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಕಳೆದ ಸಾಲಿನಲ್ಲಿ ಮೊದಲ ಬಾರಿಗೆ ಈ ದತ್ತಿ ಪ್ರಶಸ್ತಿಯನ್ನು ಲೇಖಕಿ ಸ್ಮಿತಾ ಅಮೃತರಾಜ್ ಅವರಿಗೆ ಪ್ರದಾನ ಮಾಡಲಾಗಿತ್ತು, ಈ ಬಾರಿ ಪ್ರತಿಮಾ ಹರೀಶ್ ರೈ ಅವರಿಗೆ ನೀಡುತ್ತಿರುವುದಾಗಿ ಮಾಹಿತಿ ನೀಡಿದರು. ಮಕ್ಕಳಲ್ಲಿ ಕನ್ನಡ ಸಾಹಿತ್ಯದತ್ತ ಒಲವು ಮೂಡಿಸುವ ಚಿಂತನೆಗಳ ಹಿನ್ನೆಲೆಯಲ್ಲಿ ಕಸಾಪ ಹೆಚ್ಚಿನ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ಆಯೋಜಿಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್, ದತ್ತಿ ದಾನಿಗಳಾದ ಜಲಜಾ ಶೇಖರ್ ಮತ್ತು ಜೆ.ಸಿ.ಶೇಖರ್, ಮೈಸೂರಿನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರತಿಭಾ ಡಿ.ಎಸ್., ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷರಾದ ಪುದಿಯನೆರವನ ರೇವತಿ ರಮೇಶ್ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿನಿಯರಾದ ಸ್ವಪ್ನ, ಚೋಂದಮ್ಮ ನಾಡಗೀತೆಯನ್ನು ಹಾಡಿದರು. ವಿದ್ಯಾರ್ಥಿನಿ ಶಿಲ್ಪ ಸ್ವಾಗತಿಸಿದರು.









