
ಸುಂಟಿಕೊಪ್ಪ ಏ.14 NEWS DESK : ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲ್ಲೂಕು ಘಟಕ ಕೊಡಮಾಡುವ ‘ನೇಗಿಲಯೋಗಿ’ ಪ್ರಶಸ್ತಿ ಪ್ರದಾನ ಸಮಾರಂಭ ಏ.21 ರಂದು ಕುಶಾಲನಗರದ ಗೌಡ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ. ಕುಶಾಲನಗರ ತಾಲೂಕಿನಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಾಲ್ವರು ಕೃಷಿಕರನ್ನು ತಾಲೂಕು ಪತ್ರಕರ್ತರ ಸಂಘವು ಪ್ರತೀ ವರ್ಷ ‘ನೇಗಿಲಯೋಗಿ’ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಅದರಂತೆ ಈ ಬಾರಿ ಸುಂಟಿಕೊಪ್ಪದ ಪ್ರಗತಿಪರ ಕೃಷಿಕ ಪಟ್ಟೆಮನೆ ಪಿ.ಉದಯಕುಮಾರ್, ನಾಕೂರು ಶಿರಂಗಾಲ ಗ್ರಾಮ ಪಂಚಾಯತ್’ನ ಮಳೂರು ನಿವಾಸಿ ಶಂಕರನಾರಾಯಣ, ಶಿರಂಗಾಲ ಗ್ರಾಮ ಪಂಚಾಯತ್’ನ ಮಣಜೂರು ನಿವಾಸಿ ಭವಾನಿ ಕುಮಾರಸ್ವಾಮಿ ಹಾಗೂ ಗುಡ್ಡೆಹೊಸೂರು ಪಂಚಾಯತ್’ನ ಬಾಳುಗೋಡು ನಿವಾಸಿ ನಂಗಾರು ಜಗ ಅವರನ್ನು ಆಯ್ಕೆ ಮಾಡಲಾಗಿದೆ. ಏ.21 ರಂದು ಪೂರ್ವಾಹ್ನ 11 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಕೊಡಗು ಪತ್ರಿಕಾಭವನ ಟ್ರಸ್ಟಿ, ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್ ಅವರು ಉದ್ಘಾಟಿಸಲಿದ್ದು, ಕುಶಾಲನಗರ ತಾಲೂಕು ಪತ್ರಕರ್ತರ ಘಟಕದ ಅಧ್ಯಕ್ಷ ಬಿ.ಸಿ.ದಿನೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್, ದತ್ತಿದಾನಿಗಳಾಗಿರುವ ಕೃಷಿಕ ಹಾಗೂ ಸಮಾಜ ಸೇವಕ ಟಿ.ಕೆ.ಸಾಯಿಕುಮಾರ್, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಸುಂಟಿಕೊಪ್ಪದ ವಿಜಯ ಪ್ಲಾಂಟೇಷನ್ ಸಪ್ಲೈಸ್’ನ ಮಾಲೀಕ ಎಸ್.ಜಿ.ಶ್ರೀನಿವಾಸ್, ಗುಡ್ಡೆಹೊಸೂರಿನ ಉದ್ಯಮಿ ಮಂಡೆಪಂಡ ಚಿಮ್ಮ ಉತ್ತಪ್ಪ, ರಂಗಸಮುದ್ರದ ಉದ್ಯಮಿ ರಕ್ಷಿತ್ ಮಾವಾಜಿ, ಚಿಕ್ಕಬೆಟ್ಟಗೇರಿಯ ಉದ್ಯಮಿ ರಂಜಿತ್ ಎಂ.ಎಸ್. ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ನಿವೃತ್ತ ಬ್ಯಾಂಕ್ ಉದ್ಯೋಗಿ, ವ್ಯಕ್ತಿತ್ವ ವಿಕಸನ ತರಬೇತಿದಾರ ಹಾಗೂ ವೃತ್ತಿ ಮಾರ್ಗದರ್ಶಕ, ಅಂಕಣಕಾರ ಆರ್.ಕೆ.ಬಾಲಚಂದ್ರ ಅವರು ಕೊಡಗಿನಲ್ಲಿ ಕೃಷಿ ಪ್ರವಾಸೋದ್ಯಮ-ಹಲವು ಆಯಾಮಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.









