
ಮಡಿಕೇರಿ ಜೂ.15 NEWS DESK : ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರ ನಿರ್ದೇಶನ ಮೇರೆಗೆ ಕಾಲೂರು- ಮಾಂದಲಪಟ್ಟಿ ರಸ್ತೆ ದುರಸ್ತಿ ಕಾರ್ಯ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದೆ. ವಾರದ ಹಿಂದೆ ಕಾಲೂರು ಗ್ರಾಮಸ್ಥರು ರಸ್ತೆ ಹಾಳಾಗಿರುವುದರಿಂದ ಬಸ್ ಸಂಚಾರವಿಲ್ಲದೆ ವಿಧ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ಡಾ.ಮಂತರ್ ಗೌಡ ರವರಲ್ಲಿ ಮನವಿ ಮಾಡಿಕೊಂಡಿದ್ದರು. ಮಳೆ ಆರಂಭಗೊಂಡಿರುವುದರಿಂದ ಪೂರ್ಣ ಪ್ರಮಾಣದಲ್ಲಿ ರಸ್ತೆ ನಿರ್ಮಾಣ ಅಸಾಧ್ಯವಾಗಿದ್ದು ಸದ್ಯಕ್ಕೆ ತಾತ್ಕಾಲಿಕ ದುರಸ್ತಿ ಮಾಡಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಶಾಸಕರು ಭರವಸೆ ನೀಡಿದ್ದರು. ಶಾಸಕರು ಭರವಸೆ ನೀಡಿದಂತೆ ಈಗ ತಾತ್ಕಾಲಿಕ ದುರಸ್ತಿ ಆಗುತ್ತಿದೆ. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಿರೀಶ್ ರವರು ಸ್ಥಳದಲ್ಲಿಯೇ ಇದ್ದು ಕಾಮಗಾರಿ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ತಮ್ಮ ಕೋರಿಕೆಗೆ ತಕ್ಷಣವೇ ಸ್ಪಂದನೆ ನೀಡಿದ ಡಾ ಮಂತರ್ ಗೌಡ ರವರ ನಡೆಯ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.









