
ಮಡಿಕೇರಿ NEWS DESK ಜೂ.30 : ಕೊಡಗು ಜಿಲ್ಲೆಯ ಭೂಮಿಯನ್ನು ಹೊರಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ 10 ವರ್ಷಗಳಲ್ಲಿ ಕೊಡಗಿನ ಭೌಗೋಳಿಕ ಚಿತ್ರಣವೇ ಬದಲಾಗಬಹುದು ಮತ್ತು ಮೂಲ ಸಂಸ್ಕೃತಿಯ ಮೇಲೆ ಪರಿಣಾಮ ಬೀರಬಹುದು ಎಂದು ಕೊಡಗು ಹಾಗೂ ಕಾವೇರಿ ಸಂರಕ್ಷಣಾ ವೇದಿಕೆಯ ಸಂಚಾಲಕ ನಿವೃತ್ತ ಕರ್ನಲ್ ಸಿ.ಪಿ.ಮುತ್ತಣ್ಣ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೊರಗಿನವರು ಭೂಮಿ ಖರೀದಿ ಮಾಡುವುದನ್ನು ನಿಯಂತ್ರಿಸಲು ಸರಕಾರ ಹೊಸ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ಬಳಿಯ ಮಲ್ಮ ಬೆಟ್ಟ ವ್ಯಾಪ್ತಿಯಲ್ಲಿ ಹೊರ ಭಾಗದ ವ್ಯಕ್ತಿಯೊಬ್ಬರು ದೊಡ್ಡ ಪ್ರಮಾಣದ ಭೂಮಿಯನ್ನು ಖರೀದಿಸಿದ್ದಾರೆ. ಈ ಬೆಟ್ಟ ಪವಿತ್ರ ನೆಲೆಯಾಗಿದ್ದು, ಕಾಮಗಾರಿ ನಡೆಸುವ ಸಂದರ್ಭ ವಿರೋಧ ವ್ಯಕ್ತವಾಗಿದೆ. ಈ ಕಾರಣದಿಂದ ಉದ್ದೇಶಿತ ಯೋಜನೆಯನ್ನು ಭೂಮಿ ಖರೀದಿದಾರರು ಕೈಬಿಟ್ಟಿರುವುದಾಗಿ ಘೋಷಿಸಿದ್ದಾರೆ. ಇದು ತಾತ್ಕಾಲಿಕ ಸಮಾಧಾನವಾಗಿದ್ದು, ಮುಂದಿನ ದಿನಗಳಲ್ಲಿ ಹೊರ ರಾಜ್ಯದ ಮಂದಿ ಜಿಲ್ಲೆಯ ದೇವರಕಾಡು ಸೇರಿದಂತೆ ಪವಿತ್ರ ಸ್ಥಳಗಳನ್ನು ಖರೀದಿಸಿ ಪ್ರಕೃತಿಗೆ ವಿರುದ್ಧವಾದ ಕಾಮಗಾರಿ ನಡೆಸುವ ಅಪಾಯವಿದೆ ಎಂದು ತಿಳಿಸಿದರು. ಸೋಮವಾರಪೇಟೆ ತಾಲ್ಲೂಕಿನ ಹಮ್ಮಿಯಾಲ ವ್ಯಾಪ್ತಿಯಲ್ಲಿ ಪಂಜಾಬ್ ಮತ್ತು ಹರಿಯಾಣ ಮೂಲದವರು ಜಾಗ ಖರೀದಿ ಮಾಡಿದ್ದಾರೆ. ಇದರಿಂದ ಸ್ಥಳೀಯರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಬರಲಿದೆ ಎಂದು ಗಮನ ಸೆಳೆದರು. *ಕಾನೂನು ಜಾರಿಗೆ ಆಗ್ರಹ* ಈಗಾಗಲೇ ಜಿಲ್ಲೆಯ ಬೃಹತ್ ಹೋಂಸ್ಟೇಗಳು ಮತ್ತು ರೆಸಾರ್ಟ್ಗಳು ಹೊರ ಭಾಗದವರ ಮಾಲೀಕತ್ವದಲ್ಲಿದೆ. ಇದರಿಂದ ಜಿಲ್ಲೆಯ ಮೂಲ ಸಂಸ್ಕೃತಿ ಮರೆಯಾಗುತ್ತಿದೆ. ಹೊರಗಿನವರು ಭೂಮಿ ಖರೀದಿಸುವುದನ್ನು ತಡೆಯಲು, ಜಮ್ಮಾ ಅಲ್ಲದ ಮತ್ತು ಕೊಡಗಿನ ಸ್ಥಳೀಯ ಸಮುದಾಯಗಳಿಗೆ ಸೇರದ ಜನರಿಗೆ ಭೂಮಿ ಮಾರಾಟ ಮಾಡುವುದನ್ನು ತಡೆಯುವ ಕಾನೂನು ಜಾರಿ ತರುವುದು ಅಗತ್ಯವಾಗಿದೆ. ಈ ಕುರಿತು ಜಿಲ್ಲೆಯ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ ಹಾಗೂ ಸಂಸದ ಯದುವೀರ್ ಒಡೆಯರ್ ಅವರುಗಳು ತುರ್ತು ಕ್ರಮಕ್ಕೆ ಮುಂದಾಗಬೇಕು. ದೇಶದ ಈಶಾನ್ಯ ರಾಜ್ಯಗಳಾದ ಮಿಜೋರಾಂ, ನಾಗಾಲ್ಯಾಂಡ್, ಮಣಿಪುರ, ತ್ರಿಪುರ, ಅರುಣಾಚಲ ಪ್ರದೇಶ, ಉತ್ತರಾಖಂಡದ ಹಲವಾರು ಜಿಲ್ಲೆಗಳಲ್ಲಿ ಇಂತಹ ಕಾನೂನು ಜಾರಿಯಲ್ಲಿದೆ. ಕರ್ನಾಟಕ ರಾಜ್ಯ ಸರಕಾರ ಕೂಡ ಕೊಡಗು ಜಿಲ್ಲೆಗೆ ಇದೇ ರೀತಿಯ ಕಾನೂನು ಜಾರಿಗೆ ತರಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಕನ್ನಿ ಕಾವೇರಿ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಮಲ್ಚೀರ ಶಾನ್ ಬೋಪಯ್ಯ ಅವರು ಮಾತನಾಡಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದೆ ಪರಿಸ್ಥಿತಿ ಹದಗೆಟ್ಟಿದೆ. ಇದರಿಂದ ಕರ್ನಾಟಕ ಮಾತ್ರವಲ್ಲದೇ ಕೇರಳ, ತಮಿಳುನಾಡು ರಾಜ್ಯಗಳು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಪರಿತಪಿಸುವ ಪರಿಸ್ಥಿತಿ ಎದುರಾಗುತ್ತದೆ. ರಾಜ್ಯ ಸರಕಾರ ಕೊಡಗಿನಲ್ಲಿ ಭೂಮಿ ಖರೀದಿ ಮತ್ತು ಮಾರಾಟಕ್ಕೆ ಸಂಬoಧಿಸಿದoತೆ ಹೊಸ ಕಾನೂನು ರೂಪಿಸುವ ಅಗತ್ಯವಿದೆ. ಇದಕ್ಕೆ ಕೊಡಗು ಜಿಲ್ಲೆಯ ಎಲ್ಲಾ ಮೂಲ ನಿವಾಸಿಗಳು ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಹಾಗೂ ಕಾವೇರಿ ಸಂರಕ್ಷಣಾ ವೇದಿಕೆಯ ಸದಸ್ಯ ರಾಯ್ ಬೋಪಣ್ಣ, ಪುಚ್ಚಿಮಂಡ ಅಪ್ಪಯ್ಯ ಹಾಗೂ ಕನ್ನಿ ಕಾವೇರಿ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಕೆ.ಪೂವಯ್ಯ ಉಪಸ್ಥಿತರಿದ್ದರು.








