
ಮಡಿಕೇರಿ NEWS DESK ಜು.1 : ಸಚಿವ ಸಂಪುಟ ವಿಸ್ತರಣೆಯ ಸಂದರ್ಭ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ (ಕೆಸಿಎ) ನಿಯೋಗವು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಕೆಸಿಎ ಅಧ್ಯಕ್ಷ ಎ.ಜೆ.ಬಾಬು, ಕಾರ್ಯಾಧ್ಯಕ್ಷ ಆಂಟನಿ ರಾಬಿನ್, ಜಂಟಿ ಕಾರ್ಯದರ್ಶಿ ಬಿಂದು ಸಾರಾ, ನಿರ್ದೇಶಕರಾದ ಜೋಸೆಫ್ ಸ್ಯಾಮ್, ಜಾನ್ಸನ್ (ವಿರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು), ಆಂಟನಿ ಜೋಸೆಫ್, ಲಾಲು ಸ್ಟಾಲಿನ್, ಜೋಬಿ, ವಿನ್ಸೆಂಟ್ ಕುಟ್ಟಪ್ಪನ್ ಹಾಗೂ ಕ್ರೀಡಾ ಕಾರ್ಯದರ್ಶಿ ರಿಜೋಶ್ ಜೋಸೆಫ್ ಅವರುಗಳು ನಿಯೋಗದಲ್ಲಿದ್ದರು. ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಎ.ಜೆ.ಬಾಬು ಅವರು ಸುಮಾರು ಎರಡು ದಶಕಗಳ ಕಾಲ ಕೊಡಗು ಬಿಜೆಪಿಯ ಭದ್ರಕೋಟೆಯಾಗಿತ್ತು. ಡಿ.ಕೆ.ಶಿವಕುಮಾರ್ ಅವರ ನಾಯಕತ್ವದಲ್ಲಿ 2023 ರಲ್ಲಿ ಕಾಂಗ್ರೆಸ್ ಪಕ್ಷ ಜಿಲ್ಲೆಯ ಕ್ಷೇತ್ರಗಳನ್ನು ಮರಳಿ ಗೆದ್ದಾಗ, ವಿರಾಜಪೇಟೆಯ ಐತಿಹಾಸಿಕ ಗೆಲುವಿನ ಮುಂಚೂಣಿಯಲ್ಲಿ ಪೊನ್ನಣ್ಣ ಅವರು ಇದ್ದರು. ಈಗ ಸಚಿವ ಸ್ಥಾನದ ಮೂಲಕ ಪ್ರತಿಫಲ ನೀಡುವುದು ಪ್ರಬಲ ಸಂದೇಶವಾಗುತ್ತದೆ ಎನ್ನುವುದನ್ನು ನಿಯೋಗವು ಮುಖ್ಯಮಂತ್ರಿಗಳಿಗೆ ನೆನಪಿಸಿದೆ ಎಂದರು. ಕೆಸಿಎ ಈ ಹಿಂದೆಯೂ ಮುಖ್ಯಮಂತ್ರಿಗಳು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಾಗೂ ರಾಹುಲ್ ಗಾಂಧಿ ಅವರಿಗೆ ಮನವಿ ಪತ್ರಗಳನ್ನು ಸಲ್ಲಿಸಿತ್ತು. ಮೊದಲ ಸಚಿವ ಸಂಪುಟದಲ್ಲಿ ಕೊಡಗಿನ ಹೆಸರು ಇಲ್ಲದಿದ್ದಾಗ, ವಿಸ್ತರಣೆಯ ಭರವಸೆಯ ಮೇಲೆ ಸಂಘವು ಪ್ರತಿಭಟನೆಯ ಬದಲು ಸಂಯಮವನ್ನು ಆರಿಸಿಕೊಂಡಿತ್ತು. ವಿಸ್ತರಣೆ ಸನ್ನಿಹಿತವಾಗಿರುವ ಈ ಸಂದರ್ಭದಲ್ಲಿ ನೇರವಾಗಿ ಮನವಿಯನ್ನು ಸಲ್ಲಿಸಿ ನಮ್ಮ ಬೇಡಿಕೆಯನ್ನು ಬಲಪಡಿಸಲಾಗಿದೆ. ಪೊನ್ನಣ್ಣ ಅವರು ಪ್ರಥಮ ಬಾರಿಯ ಶಾಸಕರಾದರೂ, ಸಂವಿಧಾನ ತಜ್ಞರು ಹಾಗೂ ಕಾನೂನು ಪರಿಣಿತರೂ ಆಗಿದ್ದಾರೆ. ಇವರ ಕಾನೂನು ಪಾಂಡಿತ್ಯವು ರಾಜ್ಯದಲ್ಲಿ ಮನ್ನಣೆ ಪಡೆದಿದೆ. ಪೊನ್ನಣ್ಣ ಅವರಿಗೆ ತೋಟಗಾರಿಕಾ ಆರ್ಥಿಕತೆ ತಿಳಿದಿದೆ, ಕಾಫಿ ಬೆಳೆಗಾರರ ಸಂಕಷ್ಟ ಅರ್ಥವಾಗಿದೆ ಮತ್ತು ಯುವಜನತೆಯ ಆಕಾಂಕ್ಷೆಗಳನ್ನು ಅರಿತಿದ್ದಾರೆ. ಇಂತಹ ಸಂಪನ್ಮೂಲ ವ್ಯಕ್ತಿಯನ್ನು ಹಿಂದಿನ ಸಾಲಿನಲ್ಲಿ ಕೂರಿಸಲು ಕರ್ನಾಟಕಕ್ಕೆ ಸಾಧ್ಯವಿಲ. ಪೊನ್ನಣ್ಣ ಅವರು ಕಾಂಗ್ರೆಸ್ ಪಕ್ಷದ ಮೌಲ್ಯಗಳಿಗೆ ನಿಷ್ಠರಾಗಿದ್ದು, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬದ್ಧರಾಗಿದ್ದಾರೆ. ತಳಮಟ್ಟದ ಜನರೊಂದಿಗೆ ಹೊಂದಿರುವ ನಿಕಟ ಸಂಪರ್ಕ ಹಾಗೂ ಸಮಸ್ಯೆಗಳನ್ನು ಸಕ್ರಿಯವಾಗಿ ಎತ್ತಿಹಿಡಿಯುವ ಸಾಮರ್ಥ್ಯ ಅವರನ್ನು ಸಚಿವ ಸ್ಥಾನಕ್ಕೆ ಅರ್ಹರನ್ನಾಗಿಸಿದೆ ಎಂದು ಎ.ಜೆ.ಬಾಬು ಅಭಿಪ್ರಾಯಪಟ್ಟರು.









