
ಮಡಿಕೇರಿ ಜು.4 NEWS DESK : ಕಾವೇರಿ ತಾಯಿಯ ಪವಿತ್ರ ನೆಲವಾದ ಕೊಡಗು ಜಿಲ್ಲೆಯಾದ್ಯಂತ ಕನ್ನಡ ನಾಡು-ನುಡಿ ಹಾಗೂ ಕನ್ನಡಿಗರ ಸಾರ್ವಭೌಮತ್ವದ ರಕ್ಷಣೆಗಾಗಿ ಮತ್ತು ಸರ್ಕಾರದ ಅಧಿಕೃತ ಕಾಯ್ದೆಯನ್ನು ತಳಮಟ್ಟದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಮನವಿ ಮಾಡಿದೆ. ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಮನವಿ ಸಲ್ಲಿಸಿದ ಬಣದ ಪ್ರಮುಖರು, ಕನ್ನಡ ನಾಮಫಲಕ ಇಲ್ಲದ ಸಂಸ್ಥೆಗಳಿಗೆ ಯಾವುದೇ ಕಾರಣಕ್ಕೂ ಲೈಸೆನ್ಸ್ ನೀಡಬಾರದು” ಎಂದು ಮನವಿ ಮಾಡಿದರು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಈ ಕುರಿತು ತಕ್ಷಣವೇ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು, ತಮ್ಮ ವ್ಯಾಪ್ತಿಯಲ್ಲಿ ಸರ್ಕಾರದ ಆದೇಶ ಉಲ್ಲಂಘನೆಯಾಗುತ್ತಿದ್ದರೆ, ಆಯಾ ಪಂಚಾಯಿತಿಯ ಪಿಡಿಒ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ, ಅವರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಬೇಕು, ಕೊಡಗು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಣಿಜ್ಯ ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು, ಹೋಟೆಲ್ಗಳು, ಪ್ರವಾಸೋದ್ಯಮ ಉದ್ಯಮಗಳು, ರೆಸಾರ್ಟ್ಗಳು, ಹೋಂ ಸ್ಟೇಗಳು ಹಾಗೂ ರಸ್ತೆ ಬದಿಯ ಸಾರ್ವಜನಿಕ ಬ್ಯಾನರ್ಗಳ ಮೇಲ್ಭಾಗದಲ್ಲಿ ಸರ್ಕಾರದ ಆದೇಶದ ಪ್ರಕಾರ ಶೇಕಡಾ 60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು, ಜಿಲ್ಲಾ ಪಂಚಾಯತ್ ವತಿಯಿಂದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಹೊರಡಿಸಲಾಗುವ ತುರ್ತು ಅಧಿಕೃತ ಆದೇಶದ ಒಂದು ಪ್ರತಿಯನ್ನು ಕರವೇ ಸ್ವಾಭಿಮಾನಿ ಬಣದ ಸಂಘಟನೆಗೆ ಆದಷ್ಟು ತಕ್ಷಣವೇ ಕಳುಹಿಸಿಕೊಡಬೇಕು ಎಂದು ಆಗ್ರಹಿಸಿದರು. ಮನವಿ ಸಲ್ಲಿಸಿ ಮಾತನಾಡಿದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ಬಿ.ಎ.ಫ್ರಾನ್ಸಿಸ್ ಡಿಸೋಜ, “ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ ಪ್ರತಿಯೊಂದು ಉದ್ಯಮದ ನಾಮಫಲಕದ ಮೇಲ್ಭಾಗದಲ್ಲಿ ಶೇ.60 ರಷ್ಟು ಕನ್ನಡ ಇರಲೇಬೇಕು. ಕೊಡಗಿನಲ್ಲಿ ಕೇವಲ ಹೊರರಾಜ್ಯದ ಪ್ರವಾಸಿಗರನ್ನು ಆಕರ್ಷಿಸಲು ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಇನ್ಮುಂದೆ ಸರ್ಕಾರದ ನಿಯಮವನ್ನು ಉಲ್ಲಂಘಿಸಿ, ಶೇ.60 ರಷ್ಟು ಕನ್ನಡವಿರದ ನಾಮಫಲಕವನ್ನು ಅಳವಡಿಸದ ಎಲ್ಲಾ ಅಂಗಡಿ ಮುಂಗಟ್ಟುಗಳು ಹಾಗೂ ಜಿಲ್ಲಾದ್ಯಂತ ಇರುವ ಎಲ್ಲಾ ಹೋಂ ಸ್ಟೇಗಳ ವ್ಯಾಪಾರ ಪರವಾನಗಿಯನ್ನು ಯಾವುದೇ ಮುನ್ಸೂಚನೆ ನೀಡದೆ ತಕ್ಷಣವೇ ರದ್ದುಗೊಳಿಸಬೇಕು. ಹೊಸದಾಗಿ ಪರವಾನಗಿ ನೀಡುವಾಗ ಹಾಗೂ ಹಳೆಯ ಪರವಾನಗಿಯನ್ನು ನವೀಕರಿಸುವಾಗ ಪಂಚಾಯಿತಿ ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಕನ್ನಡ ನಾಮಫಲಕ ಇರುವುದನ್ನು ನೋಡಿ ಅನುಮೋದನೆ ನೀಡಬೇಕು ಎಂದು ತಿಳಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ರಾಜಶೇಖರ್ ಗೌಡ ಮಾತನಾಡಿ, “ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯ ನಿಯಮಗಳಿಗೆ ಕೆಲವು ವ್ಯಾಪಾರಸ್ಥರು, ಅಂಗಡಿ ಮುಂಗಟ್ಟಿನ ವರ್ತಕರು ಗೌರವ ನೀಡುತ್ತಿಲ್ಲ. ಜಿಲ್ಲಾ ಪಂಚಾಯಿತಿಯು ತಕ್ಷಣವೇ ಎಲ್ಲಾ ಪಂಚಾಯ್ತಿಗಳಿಗೂ ಕನ್ನಡ ಶೇ. 60 ಇರಬೇಕೆಂದು ಆದೇಶ ನೀಡಬೇಕು ಎಂದು ಆಗ್ರಹಿಸಿದರು. ಕರವೇ ಹೋರಾಟಕ್ಕೆ ತಕ್ಷಣವೇ ಸ್ಪಂದಿಸಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅಬ್ದುಲ್ ನಬಿ ಅವರು, “ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಶೀಘ್ರದಲ್ಲೇ ಶೇ.60 ಕನ್ನಡ ಕಡ್ಡಾಯಗೊಳಿಸುವ ಬಗ್ಗೆ ಅಧಿಕೃತ ಸುತ್ತೋಲೆಯನ್ನು ಕಳಿಸಿಕೊಡಲಾಗುವುದು. ಹಾಗೂ ಆ ಪ್ರತಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳಿಗೂ ತಲುಪಿಸಲಾಗುವುದು, ಇದನ್ನು ಶೀಘ್ರವಾಗಿ ಮಾಡುತ್ತೇವೆ” ಎಂದು ಭರವಸೆ ನೀಡಿದರು. ಕರವೇ ಸ್ವಾಭಿಮಾನಿ ಬಣದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಜಯಶ್ರೀ ಮುರುಗೇಶ್, ಕುಶಾಲನಗರ ತಾಲೂಕು ಅಧ್ಯಕ್ಷರಾದ ಶಿವು, ಕುಶಾಲನಗರ ತಾಲ್ಲೂಕು ಉಪಾಧ್ಯಕ್ಷರಾದ ನಾಸಿರ್, ಕುಶಾಲನಗರ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರವಿಕಿರಣ್, ಕುಶಾಲನಗರ ತಾಲೂಕು ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಮಣಿಕಂಠ, ಮಡಿಕೇರಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ನಂದಿನಿ, ಸುಂಟಿಕೊಪ್ಪ ಹೋಬಳಿ ಮಹಿಳಾ ಘಟಕದ ಅಧ್ಯಕ್ಷರಾದ ಭವ್ಯ ಮತ್ತು ಪದಾಧಿಕಾರಿಗಳಾದ ರವೀಂದ್ರ, ವಿಲ್ಸನ್, ನಂಜಪ್ಪ, ರಮೇಶ್ ಮತ್ತು ಬಾಲಕೃಷ್ಣ ಈ ಸಂದರ್ಭ ಪಾಲ್ಗೊಂಡಿದ್ದರು.









