
ಸುಂಟಿಕೊಪ್ಪ ಜು.10 NEWS DESK : ಕೊಡಗರಹಳ್ಳಿಯ ಜನವಸತಿ ಪ್ರದೇಶದಲ್ಲಿ ಕಾಡಾನೆಯೊಂದು ಸಂಚರಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಕಾಡಾನೆಯೊಂದು ರಾತ್ರಿ ವೇಳೆ ತೋಟಗಳಿಗೆ ಲಗ್ಗೆಯಿಟ್ಟು ಕೃಷಿ ಫಸಲನ್ನು ನಾಶಗೊಳಿಸುತ್ತಿರುವುದು ಮಾತ್ರವಲ್ಲದೆ ರಾಜಾರೋಷವಾಗಿ ಜನ ವಸತಿ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಸಂಚಾರ ನಡೆಸಿ, ಗ್ರಾಮದ ಬೊಸಂಡ ಮುತ್ತಪ್ಪ ಅವರ ತೋಟ, ಕಂಬಿಬಾಣೆಯ ಪಂಚಾಯಿತಿ ನೌಕರ ಧನಂಜಯ ಎಂಬವರ ಮನೆ ಸಮೀಪದ ತೋಟದ ಒಳಗೆ ಲಗ್ಗೆ ಇಟ್ಟಿದೆ. ಅದೃಷ್ಟವಶತ್ ಮುಖ್ಯ ರಸ್ತೆ ಬದಿಯಲ್ಲಿ ವಾಹನಗಳು ನಿಂತಿದ್ದು, ಜನತೆಯ ಓಡಾಟ ವಿರಳವಾಗಿತ್ತು. ಕಾಡಾನೆ ಹೊರಗೆ ಬರುತ್ತಿದ್ದಂತೆ ಘೀಳು ಇಟ್ಟ ಹಿನ್ನಲೆಯಲ್ಲಿ ಸುತ್ತ ಮುತ್ತಲಿನ ನಿವಾಸಿಗಳು ಎಚ್ಚೆತ್ತುಕೊಂಡಿದ್ದಾರೆ. ಸಂಬಂಧಿಸಿದ ಇಲಾಖೆ ಕಾಡಾನೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.









