
ಮಡಿಕೇರಿ NEWS DESK ಜು.10 : ಕೊಡಗಿನ ಪರಿಸರದ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತಿರುವ ಮತ್ತು ಕೊಡವ ಭೂಪ್ರದೇಶದ ಮೇಲೆ ಮಿತಿ ಮೀರಿದ ಒತ್ತಡ ಹೇರುತ್ತಿರುವ ಹೊರಗಿನ ಬಂಡವಾಳಶಾಹಿಗಳ ಮೆಗಾ ಟೌನ್ಶಿಪ್ ಗಳು ಮತ್ತು ರೆಸಾರ್ಟ್ ಗಳನ್ನು ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಶಾಂತಿಯುತ ಸತ್ಯಾಗ್ರಹ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ನಡೆದ ಸತ್ಯಾಗ್ರಹದಲ್ಲಿ ಮೆಗಾ ಟೌನ್ಶಿಪ್ ಗಳು ಮತ್ತು ರೆಸಾರ್ಟ್ಗಳಿಂದ ಕೊಡಗಿನ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ವಿವರಿಸಲಾಯಿತು. ಆದಿಮಸಂಜಾತ, ಏಕ-ಸಂಸ್ಕೃತಿಯ, ಪ್ರಕೃತಿ ಆರಾಧಕರಾದ ಕೊಡವ ಜನರ ಜೀವನ, ಪರಂಪರೆ ಮತ್ತು ಪರಿಸರದ ಮೇಲಾಗುವ ಭವಿಷ್ಯದ ವಿನಾಶಕಾರಿ ಪರಿಣಾಮಗಳನ್ನು ತಡೆಗಟ್ಟಲು ಕೊಡವ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಅಥವಾ ನಿರ್ಮಾಣ ಹಂತದಲ್ಲಿರುವ ಹೊರಗಿನವರ ಎಲ್ಲಾ ಮೆಗಾ ಟೌನ್ಶಿಪ್ಗಳು ಹಾಗೂ ರೆಸಾರ್ಟ್ ಗಳನ್ನು ತಕ್ಷಣ ಧ್ವಂಸಗೊಳಿಸಬೇಕು. ಕಾಫಿ ಭೂಮಿ ಪರಿವರ್ತನೆಯ ಕುರಿತು ಕರ್ನಾಟಕ ಹೈಕೋರ್ಟ್ ತೋರಿದ ಕಳಕಳಿಯಂತೆ ಕೊಡವ ಪ್ರದೇಶ ಮತ್ತು ರಾಷ್ಟ್ರೀಯ ಕಾಫಿ ಭದ್ರತೆಯನ್ನು ರಕ್ಷಿಸಲು ಭೂಪರಿವರ್ತನೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದರು. ಹಿಮಾಚಲ ಪ್ರದೇಶದ ಮಾದರಿಯಲ್ಲಿ ಕೊಡವ ನಾಡಿನಲ್ಲಿ ಹೊರಗಿನವರು ಹೋಂಸ್ಟೇ ಉದ್ಯಮ ನಡೆಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಆದಿಮಸಂಜಾತ ಕೊಡವ ಮಹಿಳೆಯರು ಹಾಗೂ ಪರಿಸರವನ್ನು ರಕ್ಷಿಸಬೇಕು. ಕೇರಳದ ವಯನಾಡು ಪ್ರದೇಶದಲ್ಲಿ 2024ರ ವಿಕೋಪ ಮರುಕಳಿಸಿದೆ. ಇದು ಕೊಡವ ನಾಡಿಗೆ ಎಚ್ಚರಿಕೆಯ ಗಂಟೆಯಾಗಿರುವುದರಿಂದ ಬೆಟ್ಟಗುಡ್ಡಗಳ ಮೇಲಿನ ಕಾಂಕ್ರಿಟೀಕರಣ ಮತ್ತು ಭೂಪರಿವರ್ತನೆಯನ್ನು ತಕ್ಷಣ ನಿಲ್ಲಿಸಬೇಕು. ಕೊಡವ ನಾಡು ಇಂದು ಭಾರತದ “ದಕ್ಷಿಣದ ಟಿಬೆಟ್” ನಂತಾಗಿದೆ. ಆಕ್ರಮಣಕ್ಕೊಳಗಾಗಿರುವ ಭೂಪ್ರದೇಶ, ಪರಿಸರ-ಸೂಕ್ಷ್ಮ ಜಲ ಗೋಪುರ, ಕೊಡವ ಪ್ರದೇಶ ಅಪಾಯದಂಚಿನಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೊಡವ ನಾಡಿನಲ್ಲಿ ಭೂ ಮಾಫಿಯಾ, ಕಪ್ಪು ಹಣದ ಹೂಡಿಕೆ, ಕಾನೂನುಬಾಹಿರ ಭೂನೋಂದಣಿ ಮತ್ತು ಕಡತಗಳ ವಿಲೇವಾರಿಗಾಗಿ ನೋಂದಾಣಾಧಿಕಾರಿಗಳನ್ನು ವಿಮಾನದ ಮೂಲಕ ತಾವಿದ್ದ ಪ್ರದೇಶಗಳಿಗೆ ಕರೆಯಿಸಿಕೊಳ್ಳುವುದರ ವಿರುದ್ಧ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಿದ್ದಾಪುರದ 2400 ಎಕರೆ ಕಾಫಿ ತೋಟದ ಪ್ರದೇಶದಿಂದ ಹಿಡಿದು “ಮಲ್ಮ ಕುಂದ್” ವರೆಗೆ, ಹೊರಗಿನ ಉದ್ಯಮಿಗಳ ಒಡೆತನದ ಮೆಗಾ-ರೆಸಾರ್ಟ್, ಟೌನ್ಶಿಪ್ಗಳು ಮತ್ತು ವಿಲ್ಲಾಗಳು ಇಡೀ ಕೊಡಗನ್ನು ಆವರಿಸುತ್ತಿದ್ದು, ತೀವ್ರ ವಿನಾಶವನ್ನು ಉಂಟು ಮಾಡುತ್ತಿದೆ. ಈ ನಿರ್ಣಾಯಕ ಹಂತದಲ್ಲಿ, ನೆರೆಯ ವಯನಾಡಿನಲ್ಲಿ 2024ರಲ್ಲಿ ಸಂಭವಿಸಿದ ಭೀಕರ ಭೂಸ್ಫೋಟ ಮತ್ತು ಮೇಘಸ್ಫೋಟ ಇದೇ ಜು.7 ರಂದು ಮರುಕಳಿಸಿದೆ. 2018ರಲ್ಲಿ ವಾಯುವ್ಯ ಕೊಡಗಿನಲ್ಲಿ ಕಾಡಿದ ಭೀಕರ ಜಲಪ್ರಳಯ ಮತ್ತು ಪ್ರಾಕೃತಿಕ ವಿಕೋಪಗಳು ಕೊಡಗಿನಲ್ಲಿ ವಯನಾಡಿನ ಮಾದರಿಯಲ್ಲೇ ಮರುಕಳಿಸುವುದಿಲ್ಲ ಎಂಬುವುದಕ್ಕೆ ಯಾವುದೇ ಖಾತರಿ ಇಲ್ಲ. ಆದ್ದರಿಂದ ಆಡಳಿತ ನಡೆಸುವವರು ಕೊಡವ ಭೂಪ್ರದೇಶದ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಪರಿಸರ ಲೂಟಿಯಿಂದಾಗಿ ಪವಿತ್ರವಾದ ಕೊಡವ ಭೂಮಿ ಹಾಗೂ ಆದಿಮಸಂಜಾತ ಕೊಡವರು ಸಂಪೂರ್ಣವಾಗಿ ಕ್ಷೀಣಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದ್ರಾಸ್ ಹೈಕೋರ್ಟ್ ತೀರ್ಪಿಗೆ ಸ್ಪಂದಿಸಿದ ತಮಿಳುನಾಡು ಸರಕಾರ ನೀಲಗಿರಿ ಜಿಲ್ಲೆಯ ಮಸಿನಗುಡಿಯಲ್ಲಿ ಬಂಡವಾಳಶಾಹಿಗಳು ನಿರ್ಮಿಸಿದ್ದ ನೂರಾರು ಪಂಚತಾರಾ ರೆಸಾರ್ಟ್ಗಳನ್ನು ಧ್ವಂಸಗೊಳಿಸಿತು. ಅದೇ ರೀತಿ, ಈ ಪವಿತ್ರ ಕೊಡವ ಭೂಮಿಯನ್ನು ಪಾವನಗೊಳಿಸಲು ಕೊಡಗಿನಲ್ಲಿ ಹೊರಗಿನವರ ಒಡೆತನದ ಎಲ್ಲಾ ಮೆಗಾ-ರೆಸಾರ್ಟ್ ಗಳು ಮತ್ತು ಟೌನ್ಶಿಪ್ಗಳನ್ನು ಧ್ವಂಸಗೊಳಿಸಬೇಕು. ಅಲ್ಲದೆ, ಹಿಮಾಚಲ ಪ್ರದೇಶ ಸರಕಾರ ಅಳವಡಿಸಿಕೊಂಡಿರುವ ಕಟ್ಟುನಿಟ್ಟಾದ ಕ್ರಮಗಳ ಮಾದರಿಯಲ್ಲಿ, ಆದಿಮಸಂಜಾತ ಕೊಡವರು ಮತ್ತು ಸ್ಥಳೀಯ ನಿವಾಸಿಗಳು ಮಾತ್ರ ಹೋಂ-ಸ್ಟೇಗಳನ್ನು ನಡೆಸಲು ಅನುಮತಿಸುವಂತೆ ಕಾನೂನು ರೂಪಿಸಬೇಕು. ಹೋಂ-ಸ್ಟೇ ಪರಿಕಲ್ಪನೆಯ ಮೂಲ ತತ್ವಗಳಿಗೆ ವಿರುದ್ಧವಾಗಿ ಮನೆಗಳನ್ನು ಬಾಡಿಗೆಗೆ ನೀಡುವ ಹೊರಗಿನವರು ನಡೆಸುವ ಹೋಂ-ಸ್ಟೇಗಳ ನೋಂದಣಿಯನ್ನು ರದ್ದುಗೊಳಿಸಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದರು. ಇಡೀ ಕೊಡವ ಪ್ರದೇಶವು ಒಂದು ಅಭಯಾರಣ್ಯವಾಗಿದೆ, ಪ್ರತಿ ಹಳ್ಳಿಯೂ ಒಂದು ಪವಿತ್ರ ಕೊಡವ ಮಂದ್ ಅನ್ನು ಹೊಂದಿದೆ. ಇದು ಕೊಡವ ಪರಂಪರೆಯ ಆದಿಮಸಂಜಾತ, ಏಕ-ಸಂಸ್ಕೃತಿಯ, ಪ್ರಕೃತಿ ಆರಾಧನೆಯ, ಪೂರ್ವಜರ ಪೀಠವಾಗಿದೆ. ಕೊಡವ ಪ್ರದೇಶದ ಪ್ರತಿಯೊಂದು ಗ್ರಾಮವೂ ದೇವರ ವಾಸಸ್ಥಾನವಾಗಿದೆ, ದೇವರ ಸ್ವರ್ಗದಂತಿದೆ. ಆದರೆ ಇಂದು ಕೊಡವ ನಾಡಿನಲ್ಲಿ 3 ಸಾವಿರಕ್ಕೂ ಹೆಚ್ಚು ಮೆಗಾ ರೆಸಾರ್ಟ್ಗಳು ಮತ್ತು ಟೌನ್ಶಿಪ್ಗಳು ಕಾರ್ಯನಿರ್ವಹಿಸುತ್ತಿವೆ ಅಥವಾ ನಿರ್ಮಾಣ ಹಂತದಲ್ಲಿವೆ. ಇವುಗಳೆಲ್ಲ ಹೊರಗಿನ ಉದ್ಯಮಿಗಳು, ಎನ್ಆರ್ಐ ಹಣದ ಚೀಲಗಳು, ಎಂಎನ್ಸಿಗಳು, ತಿರುಪತಿ ದೇವಸ್ಥಾನದ ಸಮಿತಿಯ ಸಾಫ್ಟ್-ಮನಿ ಫಲಾನುಭವಿಗಳು, ಹವಾಲಾ ದಲ್ಲಾಳಿಗಳು, ಆರ್ಥಿಕ ಅಪರಾಧಿಗಳು, ಕಪ್ಪು ಹಣದ ರಾಜಕಾರಣಿಗಳು ಮತ್ತು ಭ್ರಷ್ಟ ಅಧಿಕಾರಿಗಳಿಂದ ಇವು ನಡೆಸಲ್ಪಡುತ್ತಿವೆ. ಕರ್ನಾಟಕದ 29 ಜಿಲ್ಲೆಗಳು, ಭಾರತದ 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳು ಮತ್ತು 193 ದೇಶಗಳ ಹೂಡಿಕೆದಾರರು ರಾಜಕೀಯ ಅಲೆಮಾರಿಗಳು, ಅಧಿಕಾರ ದಲ್ಲಾಳಿಗಳು, ಅವರಿಗೆ ಸೌಕರ್ಯ ಒದಗಿಸಿದ ದುಷ್ಟ ಅಧಿಕಾರಶಾಹಿಯೊಂದಿಗಿನ ಒಳ ಒಪ್ಪಂದಗಳ ಮೂಲಕ ಭೂಮಿಯನ್ನು ಕಬಳಿಸಿದ್ದಾರೆ ಮತ್ತು ವಶಪಡಿಸಿಕೊಂಡಿದ್ದಾರೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ಹೊರಗಿನ ಹೂಡಿಕೆದಾರರಿಂದ ವಾಣಿಜ್ಯ ಉದ್ದೇಶಗಳಿಗಾಗಿ ಕಾಫಿ ಮತ್ತು ಕೃಷಿ ಭೂಮಿಯನ್ನು ಬೃಹತ್ ಪ್ರಮಾಣದಲ್ಲಿ ಪರಿವರ್ತಿಸುವುದರಿಂದ ಕೊಡಗಿನ ಜನಸಂಖ್ಯಾ ವಿವರ, ಪರಿಸರ, ಸ್ಥಳಾಕೃತಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬದಲಾಯಿಸುತ್ತದೆ. ಜೊತೆಗೆ ಕಾಫಿ ತೋಟಗಳ ಗಾತ್ರವನ್ನು ಕುಗ್ಗಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ವಿಭು ಬಖ್ರು ಅವರು ನೀಡಿರುವ ಅವಲೋಕನವು ರಾಷ್ಟ್ರಕ್ಕೆ ಒಂದು ಎಚ್ಚರಿಕೆಯ ಸಂದೇಶವಾಗಿದೆ. ಪೆಟ್ರೋಲಿಯಂ ನಂತರ, ಕಾಫಿಯನ್ನು ಪ್ರಪಂಚದಲ್ಲೇ ಎರಡನೇ ಅತಿ ದೊಡ್ಡ ವ್ಯಾಪಾರ ಸರಕು ಎಂದು ಪರಿಗಣಿಸಲಾಗಿದೆ. ಕೊಡಗು, ಭಾರತದ ಕಾಫಿಯ ಉತ್ಪಾದನೆಯಲ್ಲಿ ಶೇಕಡ 32 ರಿಂದ 40 ರಷ್ಟನ್ನು ಉತ್ಪಾದಿಸುತ್ತದೆ. ವಿಶ್ವದ ಅತ್ಯುತ್ತಮ ಕಾಫಿಯ ಮೂಲಕ ರಾಷ್ಟ್ರೀಯ ಬೊಕ್ಕಸಕ್ಕೆ ಅತ್ಯುನ್ನತ ವಿದೇಶಿ ವಿನಿಮಯವನ್ನು ಗಳಿಸಿಕೊಡುತ್ತದೆ. ಆದರೂ ಕಾಫಿ ಬೆಳೆಯನ್ನು ಮತ್ತು ಕಾಫಿ ಭೂಮಿಯನ್ನು ನಾಶಪಡಿಸಲಾಗುತ್ತಿದೆ. ಆದ್ದರಿಂದ ಡಬ್ಲ್ಯೂಟಿಒ ಮತ್ತು ವಾಣಿಜ್ಯ ಸಚಿವಾಲಯ ಮಧ್ಯಪ್ರವೇಶಿಸಬೇಕು. ವಾಣಿಜ್ಯ ದುಸ್ಸಾಹಸಕ್ಕಾಗಿ ಭೂ ಪರಿವರ್ತನೆಯ ನೆಪದಲ್ಲಿ ಸಂಭವಿಸುತ್ತಿರುವ ಈ ಕಾಫಿ ಬೆಳೆಯುವ ಭೂಪ್ರದೇಶದ ಕುಗ್ಗುವಿಕೆಯ ಬಗ್ಗೆ ವಾಣಿಜ್ಯ ಸಚಿವಾಲಯ ಮತ್ತು ಡಬ್ಲ್ಯೂಟಿಒ ತಕ್ಷಣ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಸಿದ್ದಾಪುರದ 2,400 ಎಕರೆ ಕಾಫಿ ತೋಟಗಳ ಪರಿವರ್ತನೆ, ನಾಲಡಿ ಇಗ್ಗುತ್ತಪ್ಪ ಸನ್ನಿಧಿಯ ಸಮೀಪವಿರುವ 300 ಎಕರೆ ಮೆಗಾ ಟೌನ್ಶಿಪ್, ಬೃಹತ್ ರೆಸಾರ್ಟ್ಗಳು, ಮರಂದೋಡ ಗುಡ್ಡಗಳು, ಏಳುನಾಡು ಪ್ರದೇಶ, ಅಸಂಖ್ಯಾತ ಟೌನ್ಶಿಪ್ಗಳು, ಮಡಿಕೇರಿಯ ಹೌಸಿಂಗ್ ಬೋರ್ಡ್ ಕಾಲೋನಿಗಳು, ರೆಸಾರ್ಟ್ಗಳು, ರೋಶನಾರ ಬಳಿ ನಡೆಯುತ್ತಿರುವ ಬೆಟ್ಟ, ಕಾಡು ನಾಶ ಇಡೀ ಕೊಡಗನ್ನು ಆತಂಕಕ್ಕೆ ತಳ್ಳಿದೆ. ಚೇಲಾವರ, ಯವಕಪಾಡಿ, ಬಿರುನಾಣಿ, ಮೋದುರು, ಸುಂಟಿಕೊಪ್ಪ ಹೊರುರುಗಳಲ್ಲಿ ಮೆಗಾ ರೆಸಾರ್ಟ್ಗಳು ಬಂದಿವೆ. ಕತ್ತಲೆಕಾಡಿನಲ್ಲಿ ಮೆಗಾ ರೆಸಾರ್ಟ್ ನಿರ್ಮಾಣ ಹಂತದಲ್ಲಿದೆ. ಇದು ದಕ್ಷಿಣ ಭಾರತದ ಜೀವನಾಡಿಯ ದೀರ್ಘಕಾಲಿಕ ಮೂಲಕ್ಕೆ ಭೀತಿಯನ್ನು ಒಡ್ಡುತ್ತಿದೆ. ಗರ್ವಾಲೆ, ಗಾಳಿಬೀಡು, ಪುಷ್ಪಗಿರಿ, ಕೋಟೆಬೆಟ್ಟ, ಪರಿಸರ ಸೂಕ್ಷ್ಮ ಪರಂಪರೆಯ ಮಂದ್, ಹಳ್ಳಿಗಳು, ರೆಸಾರ್ಟ್ ಮತ್ತು ಟೌನ್ ಶಿಪ್ ಗಳಿಂದ ಆತಂಕವನ್ನು ಎದುರಿಸುತ್ತಿವೆ ಎಂದು ಗಮನ ಸೆಳೆದರು. ಗಾಡ್ಗೀಳ್ ಮತ್ತು ಕಸ್ತೂರಿರಂಗನ್ ವರದಿಗಳ ಮಾದರಿಯಲ್ಲಿ 900 ಮೀಟರ್ಗಿಂತ ಎತ್ತರದಲ್ಲಿರುವ ಕೊಡಗಿನ ಪ್ರದೇಶಗಳನ್ನು “ಕಟ್ಟಡ ರಹಿತ ವಲಯ” ಎಂದು ಘೋಷಿಸಬೇಕು. ಕೊಡಗಿನ ಆಸ್ತಿಗಳಿಗೆ ಸಂಬಂಧಿಸಿದಂತೆ ಕಳೆದ 5 ವರ್ಷಗಳಲ್ಲಿ ಕೊಡಗಿನ ವ್ಯಾಪ್ತಿಯ ಹೊರಗೆ ನಡೆದ ಎಲ್ಲಾ ಭೂ ನೋಂದಣಿಗಳ ಬಗ್ಗೆ ಸಿಬಿಐ/ಇಡಿ ತನಿಖೆ ನಡೆಸಬೇಕು. ನೋಂದಣಿಗಾಗಿ ಕೊಡಗನ್ನು ತೊರೆದ ಎಲ್ಲಾ ಸಬ್-ರೆಜಿಸ್ಟಾçರ್ ಗಳನ್ನು ಅಮಾನತುಗೊಳಿಸಿ ಕಪ್ಪುಪಟ್ಟಿಗೆ ಸೇರಿಸಬೇಕು. ಕೊಡಗಿನಲ್ಲಿ ಎಲ್ಲಾ ನೋಂದಣಿಗಳಿಗೆ ವಿಡಿಯೋ ರೆಕಾರ್ಡಿಂಗ್, ಜಿಪಿಎಸ್ ಟ್ಯಾಗಿಂಗ್ ಕಡ್ಡಾಯಗೊಳಿಸಬೇಕು. ಕೊಡಗು ಜಿಲ್ಲೆಯಲ್ಲಿ ಕೊಡವರಲ್ಲದವರು ಭೂಮಿ ಖರೀದಿಸುವುದನ್ನು 5 ವರ್ಷಗಳವರೆಗೆ ನಿಷೇಧಿಸಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದರು. ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಹನಾ ಎಸ್.ಹಾದಿಮನಿ ಅವರ ಮೂಲಕ ಭಾರತ ಸರಕಾರ, ಕರ್ನಾಟಕ ಸರಕಾರ, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯ ಮೂರ್ತಿಗಳು, ಕರ್ನಾಟಕ ಹೈ ಕೋರ್ಟ್ ಮುಖ್ಯ ನ್ಯಾಯ ಮೂರ್ತಿಗಳು, ವಿಶ್ವ ವ್ಯಾಪಾರ ಸಂಸ್ಥೆ, ಕೇಂದ್ರ ವಾಣಿಜ್ಯ ಸಚಿವಾಲಯ, ಕೇಂದ್ರ ಜಲಸಂಪನ್ಮೂಲ ಮಂತ್ರಾಲಯ ಹಾಗೂ ಸಂಬoಧಿಸಿದ ಇಲಾಖೆಗಳಿಗೆ ಸಲ್ಲಿಸಲಾಯಿತು. ಸತ್ಯಾಗ್ರಹದಲ್ಲಿ ಪುಲ್ಲೇರ ಸ್ವಾತಿ ಕಾಳಪ್ಪ, ಬೊಟ್ಟಂಗಡ ಸವಿತಾ ಗಿರೀಶ್, ಅರೆಯಡ ಸವಿತಾ ಗಿರೀಶ್, ಚೋಳಪಂಡ ಜ್ಯೋತಿ ನಾಣಯ್ಯ, ಮುದ್ದಿಯಡ ಲೀಲಾವತಿ, ಪಟ್ಟಮಾಡ ಕುಶ, ನಂದೇಟಿರ ರವಿ ಸುಬ್ಬಯ್ಯ, ಅಜ್ಜಿಕುಟ್ಟಿರ ಲೋಕೇಶ್, ಅರೆಯಡ ಗಿರೀಶ್ ತಿಮ್ಮಯ್ಯ, ಮಂದಪoಡ ಮನೋಜ್ ಮಂದಣ್ಣ, ಚಂಬಂಡ ಜನತ್ ಕುಮಾರ್, ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ, ಕಿರಿಯಮಡ ಶೆರಿನ್, ಕಾಟುಮಣಿಯಂಡ ಉಮೇಶ್, ಪುಲ್ಲೇರ ಕಾಳಪ್ಪ, ಮಣವಟ್ಟಿರ ಚಿಣ್ಣಪ್ಪ, ಮೇಧುರ ಕಂಠಿ ನಾಣಿಯಪ್ಪ, ಕೂಪದಿರ ಸಾಬು, ಪಾಲೇಕಂಡ ಪ್ರಧಾನ್ ಪೂಣಚ್ಚ, ತೋಲಂಡ ಸೋಮಯ್ಯ, ಕೂತಂಡ ರೋಷನ್, ಮಣವಟ್ಟಿರ ಸ್ವರೂಪ್, ಮಣವಟ್ಟಿರ ನಂದ, ಚೌಂಡಿರ ಬೊಳ್ಳಿಯಪ್ಪ, ಐತಿಚಂಡ ಪೂವಯ್ಯ, ಐಲಪಂಡ ಮಿಟ್ಟು, ಅವರೇಮಾದಂಡ ನವೀನ್ ಮೊಣ್ಣಪ್ಪ, ಅಜ್ಜಿನಿಕಂಡ ಸನ್ನಿ ಮಾಚಯ್ಯ, ಚೋಳಪಂಡ ನಾಣಯ್ಯ, ಚಂಗoಡ ಚಾಮಿ ಪಳಂಗಪ್ಪ, ಕಾಟುಮಣಿಯಂಡ ಲೇಯರ್, ಅವರೆಮಾದಂಡ ಚೆಂಗಪ್ಪ ಹಾಗೂ ಅಳಮಂಡ ನೆಹರು ಪಾಲ್ಗೊಂಡಿದ್ದರು.









