
ಮಡಿಕೇರಿ NEWS DESK ಜು.17 : ಪ್ರಸ್ತುತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲಾ ಕಾರ್ಯಗಳು ಜನಪ್ರತಿನಿಧಿಗಳಿಂದಲೇ ಆಗುತ್ತದೆ ಎನ್ನುವ ಭ್ರಮೆಯಿಂದ ಜನರು ಹೊರ ಬಂದು ಗ್ರಾಹಕರ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಕರ್ನಾಟಕದ ಗ್ರಾಹಕ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟದ ಸ್ಥಾಪಕ ಮುಖ್ಯ ಪೋಷಕ ಸೋಮಶೇಖರ್ ವಿ.ಕೆ ಅವರು ಕರೆ ನೀಡಿದ್ದಾರೆ. ಕರ್ನಾಟಕದ ಗ್ರಾಹಕ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟದ ವತಿಯಿಂದ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಹಾಗೂ ಕೊಡಗು ಜಿಲ್ಲಾ ಗ್ರಾಹಕರ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಮಡಿಕೇರಿಯ ಸರಕಾರಿ ಪಿಯು ಕಾಲೇಜು ಸಭಾಂಗಣದಲ್ಲಿ ‘ಟೆಲಿಕಾಂ ಮತ್ತು ಬ್ರಾಡ್ಕಾಸ್ಟಿಂಗ್ ನಲ್ಲಿ ಶುಲ್ಕ ಹಾಗೂ ಬಿಲ್ಲಿಂಗ್’ ವಿಷಯದ ಕುರಿತು ಗ್ರಾಹಕ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೋಮಶೇಖರ್ ವಿ.ಕೆ ಗ್ರಾಹಕರು ಎಂಬುವುದು ಜಾತಿ, ಮತ, ಧರ್ಮ, ಬಣ್ಣ, ಪಕ್ಷ ಭೇದವಿಲ್ಲದ ಒಂದು ಒಗ್ಗಟ್ಟಿನ ವರ್ಗವಾಗಿದೆ. ಗ್ರಾಹಕರ ಹಕ್ಕುಗಳಿಗಾಗಿ ಗ್ರಾಹಕ ಚಳುವಳಿ ನಿರಂತರವಾಗಿರಬೇಕು ಎಂದರು. ಇoದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ಜನರಿಂದ ಜನರಿಗಾಗಿ’ ಎನ್ನುವ ಚಿಂತನೆ ಭ್ರಮೆಯಾಗಿ ಮಾರ್ಪಟ್ಟಿದೆ. ಒಂದು ಮತ ಹಾಕಿದ ತಕ್ಷಣ ಪ್ರಜಾಪ್ರಭುತ್ವವನ್ನು ಉಳಿಸುವುದು ಶಾಸಕರ, ಸಂಸದರ ಮತ್ತಿತರ ಜನಪ್ರತಿನಿಧಿಗಳ ಜವಾಬ್ದಾರಿ ಎಂದು ಜನರು ಸುಮ್ಮನಾಗಬಾರದು ಮತ್ತು ತಮ್ಮ ಜವಾಬ್ದಾರಿಯನ್ನು ಮರೆಯಬಾರದು. ಪ್ರಜೆಗಳಿಂದಲೇ ಪ್ರಜಾಪ್ರಭುತ್ವ ಉಳಿಯಬೇಕಾಗಿದೆ, ಇಂದು ಪ್ರತಿಯೊಬ್ಬ ಪ್ರಜೆಯೂ ಗ್ರಾಹಕನಾಗಿರುವುದರಿಂದ ಗ್ರಾಹಕರ ಹಕ್ಕುಗಳ ಪ್ರತಿಪಾದನೆ ಅತಿ ಮುಖ್ಯವಾಗಿದೆ ಎಂದು ತಿಳಿಸಿದರು.
ಭಾರತ ಸರಕಾರ ಜಾರಿಗೊಳಿಸಿರುವ ಗ್ರಾಹಕ ಸಂರಕ್ಷಣಾ ಕಾಯ್ದೆ–2019 ಗ್ರಾಹಕರಿಗೆ ಹಲವು ಪ್ರಮುಖ ಹಕ್ಕುಗಳನ್ನು ನೀಡಿದೆ. ಸುರಕ್ಷಿತ ವಸ್ತುಗಳನ್ನು ಪಡೆಯುವ ಹಕ್ಕು, ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳುವ ಹಕ್ಕು, ಆಯ್ಕೆ ಮಾಡುವ ಹಕ್ಕು, ದೂರು ಸಲ್ಲಿಸಿ ಪರಿಹಾರ ಪಡೆಯುವ ಹಕ್ಕು ಸೇರಿದಂತೆ ಅನೇಕ ಹಕ್ಕುಗಳನ್ನು ಈ ಕಾಯ್ದೆ ಒದಗಿಸಿದೆ. ಆದರೆ ಈ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಜಾಗೃತಿ ಅತ್ಯಗತ್ಯವಾಗಿದೆ. “ಜಾಗೃತ ಗ್ರಾಹಕನೇ ಸುರಕ್ಷಿತ ಗ್ರಾಹಕ” ಎಂಬ ಸಂದೇಶವನ್ನು ಪ್ರತಿಯೊಬ್ಬರಿಗೂ ತಲುಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆಹಾರ, ಔಷಧಿ, ಶಿಕ್ಷಣ, ಆರೋಗ್ಯ, ಬ್ಯಾಂಕಿoಗ್, ವಿಮೆ, ಆನ್ಲೈನ್ ಸೇವೆಗಳು ಸೇರಿದಂತೆ ನಾವು ಪಡೆಯುವ ಪ್ರತಿಯೊಂದು ಸೇವೆ ಮತ್ತು ವಸ್ತುವಿನಲ್ಲೂ ಗ್ರಾಹಕರ ಹಕ್ಕುಗಳು ರಕ್ಷಿಸಲ್ಪಡಬೇಕು. ಆದರೆ ಜಾಗೃತಿಯ ಕೊರತೆಯಿಂದ ಅನೇಕರು ಮೋಸಕ್ಕೆ ಒಳಗಾಗುತ್ತಿದ್ದಾರೆ. ಪ್ರತಿಯೊಬ್ಬ ಗ್ರಾಹಕ ಜಾಗೃತನಾದಾಗ ಮಾತ್ರ ವಂಚನೆಯಿoದ ತಪ್ಪಿಸಿಕೊಳ್ಳಬಹುದು ಎಂದು ಸೋಮಶೇಖರ್ ವಿ.ಕೆ ತಿಳಿಸಿದರು. ಕರ್ನಾಟಕದ ಗ್ರಾಹಕ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಬಿ.ಪಿ.ಕೃಷ್ಣಮೂರ್ತಿ ಅವರು ಉಪನ್ಯಾಸ ನೀಡಿ ಹಣ ನೀಡಿ ವಸ್ತುಗಳನ್ನು ಖರೀದಿಸುವ ಗ್ರಾಹಕನಿಗೆ ಗುಣಮಟ್ಟ ಪರಿಶೀಲಿಸುವ, ಬೆಲೆಯ ಬಗ್ಗೆ ಖಾತ್ರಿ ಪಡಿಸಿಕೊಳ್ಳುವ ಅಥವಾ ವಂಚನೆಗೆ ಒಳಗಾದಾಗ ಸಂಬAಧಪಟ್ಟ ಇಲಾಖೆಗೆ ದೂರು ನೀಡುವ ಹಕ್ಕಿದೆ. ಇದು ಕೇವಲ ಹಕ್ಕು ಮಾತ್ರವಲ್ಲ, ಜವಾಬ್ದಾರಿ ಮತ್ತು ಅಧಿಕಾರವೂ ಆಗಿದೆ ಎಂದರು.
ಖರೀದಿಸಿದ ವಸ್ತುವನ್ನು, ಅದರ ಮೇಲೆ ಬರೆದಿರುವ ಬೆಲೆಯನ್ನು, ತೆರಿಗೆಯನ್ನು, ದಿನಾಂಕವನ್ನು, ಗುಣಮಟ್ಟವನ್ನು ಪರಿಶೀಲಿಸಬೇಕು. ಇಂದು ಪ್ಯಾಕೇಜ್, ಟ್ಯಾರಿಫ್ ಯುಗದಲ್ಲಿ ನಾವಿದ್ದೇವೆ, ದೂರ ಸಂಪರ್ಕ ವ್ಯವಸ್ಥೆಯಲ್ಲಿ ಇದು ಹೆಚ್ಚು ಬಳಕೆಯಾಗುತ್ತದೆ. ಇವುಗಳ ಬಗ್ಗೆ ಕೂಡ ಗ್ರಾಹಕರು ಜಾಗೃತರಾಗಬೇಕು ಎಂದ ಅವರು, ಗ್ರಾಹಕರ ಜವಾಬ್ದಾರಿ, ಟೆಲಿಕಾಂ ಮತ್ತು ಬ್ರಾಡ್ಕಾಸ್ಟಿಂಗ್ ನಲ್ಲಿ ಶುಲ್ಕ ಹಾಗೂ ಬಿಲ್ಲಿಂಗ್ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ ಸಂಶೋಧನಾ ಅಧಿಕಾರಿ ಕೆ.ಮುರುಳೀಧರ, ಸರಕಾರಿ ಪಿಯು ಕಾಲೇಜು ಉಪ ಪ್ರಾಂಶುಪಾಲ ಚಿದಾನಂದ, ಜಿಯೋ ಸಂಸ್ಥೆಯ ಪ್ರಮುಖರಾದ ಶರತ್, ಆತ್ಮಾನಂದ, ಏರ್ಟೆಲ್ ಸಂಸ್ಥೆಯ ನಾಗಪ್ಪ, ಬಿಎಸ್ಎನ್ಎಲ್ ನ ಅಧಿಕಾರಿ ಸರ್ಪರಾಜ್ ಆಲಂ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









