
ಮಡಿಕೇರಿ ಆ.10 NEWS DESK : ಕೊಡವ ಸಮಾಜ, ಮಡಿಕೇರಿ, ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟ, ಮಡಿಕೇರಿ ಹಾಗೂ ಮಡಿಕೇರಿಯ ಎಲ್ಲಾ ಕೊಡವ ಕೇರಿಗಳ ಸಂಯುಕ್ತ ಆಶ್ರಯದಲ್ಲಿ ನಡೆದ “ಕಕ್ಕಡ ನಮ್ಮೆ ಒತ್ತೊರ್ಮೆ ಕೂಟ” ಕಾರ್ಯಕ್ರಮವು ಮಡಿಕೇರಿ ಕೊಡವ ಸಮಾಜದಲ್ಲಿ ಸಂಭ್ರಮದಿಂದ ನಡೆಯಿತು. ಕೊಡಗು ನೆಲದ ಸಂಸ್ಕೃತಿ, ಸಂಪ್ರದಾಯ ಹಾಗೂ ಪಾರಂಪರಿಕ ಆಹಾರ ಪದ್ಧತಿಯ ವೈವಿಧ್ಯತೆಯನ್ನು ಅನಾವರಣಗೊಳಿಸಿದ ಕಾರ್ಯಕ್ರಮವು ಮರೆಯಾಗುತ್ತಿರುವ ಕೊಡವ ಪಾರಂಪರಿಕ ಆಹಾರ ಪದ್ಧತಿ, ಆಚರಣೆಗಳು, ಜನಪದ ಸಂಸ್ಕೃತಿ ಹಾಗೂ ಪುರಾತನ ಜೀವನಶೈಲಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಅರ್ಥಪೂರ್ಣ ವೇದಿಕೆಯಾಗಿ ಗಮನ ಸೆಳೆಯಿತು. ಕಕ್ಕಡ ತಿಂಗಳ ವಿಶೇಷತೆ :: ಕೊಡವ ಸಂಪ್ರದಾಯದಲ್ಲಿ ಕಕ್ಕಡ ತಿಂಗಳಿಗೆ ವಿಶೇಷ ಮಹತ್ವವಿದೆ. ಮಳೆಗಾಲದ ಈ ಅವಧಿಯಲ್ಲಿ ಪ್ರಕೃತಿಯಲ್ಲಿ ದೊರೆಯುವ ವಿವಿಧ ಸಸ್ಯ, ಸೊಪ್ಪು ಹಾಗೂ ಔಷಧೀಯ ಗುಣಗಳನ್ನು ಹೊಂದಿರುವ ಪದಾರ್ಥಗಳನ್ನು ಬಳಸಿ ತಯಾರಿಸುವ ಪಾರಂಪರಿಕ ಖಾದ್ಯಗಳಿಗೆ ವಿಶೇಷ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಕ್ಕಡ ತೀನಿ ಪೈಪೋಟಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಕಕ್ಕಡ ಪಾಯಸ, ಮದ್ದ್ ಪುಟ್ಟ್, ನಾಟಿ ಕೋಳಿ ಕರಿ, ಞಂಡ್ ಕರಿ, ಪಾಪುಟ್ಟ್, ನಾಡ್ ಕುಮ್ಮು ಕರಿ, ಚಿಟ್ಟಾಣಿ ಪುಟ್ಟ್, ಕೊವುಲೆ ಪುಟ್ಟ್ ಸೇರಿದಂತೆ ಹಲವು ಪಾರಂಪರಿಕ ಖಾದ್ಯಗಳು ಸ್ಪರ್ಧೆಯಲ್ಲಿ ಗಮನ ಸೆಳೆದವು. ಅಪರೂಪದ ಎಳ್ಳಡಿಗೆ, ಬಾಳೆನೂರು ಸೇರಿದಂತೆ ವಿವಿಧ ಸಾಂಪ್ರದಾಯಿಕ ತಿನಿಸುಗಳೂ ಪ್ರದರ್ಶನಗೊಂಡವು. :: ಮರೆಯಾಗುತ್ತಿರುವ ಖಾದ್ಯಗಳ ಪರಿಚಯ :: ಇಂದಿನ ಪೀಳಿಗೆಗೆ ಅಪರಿಚಿತವಾಗುತ್ತಿರುವ ಹಲವು ಕೊಡವ ಪಾರಂಪರಿಕ ಖಾದ್ಯಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡವು. ಹಿರಿಯರು ಹಿಂದಿನ ದಿನಗಳ ಆಹಾರ ಪದ್ಧತಿಯನ್ನು ಮೆಲುಕು ಹಾಕಿದರೆ, ಯುವಜನರು ಕೊಡವ ಆಹಾರ ಸಂಸ್ಕೃತಿಯ ವೈವಿಧ್ಯತೆಯನ್ನು ಪರಿಚಯಿಸಿಕೊಳ್ಳಲು ಕಾರ್ಯಕ್ರಮ ಅವಕಾಶ ಕಲ್ಪಿಸಿತು. :: ಪುರಾತನ ವಸ್ತುಗಳ ಪ್ರದರ್ಶನ :: ಕೊಡವರ ಪಾರಂಪರಿಕ ಜೀವನಶೈಲಿಯನ್ನು ಪರಿಚಯಿಸುವ ಉದ್ದೇಶದಿಂದ ನೂಪ್ಟ್ಟ್ ವರ, ಸೇಕಲ, ಚಂದೂಕ, ಕರಿಚಟ್ಟಿ, ಬಿಂದಿಗೆ, ಚೊಂಬು, ಚಿಟ್ಟಾಣಿ ಪುಟ್ಟ್ ಕಲ್ಲ್, ಎಣ್ಣೆಚರ್ಕ್, ಕಿಂಡಿ ಸೇರಿದಂತೆ ಹಲವು ಪುರಾತನ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಹಿಂದಿನ ಕಾಲದಲ್ಲಿ ಕೊಡವರು ಬಳಸುತ್ತಿದ್ದ ಗೃಹಬಳಕೆಯ ವಸ್ತುಗಳು ಹಾಗೂ ಜೀವನ ಪದ್ಧತಿಯ ಪರಿಚಯವನ್ನು ಈ ಪ್ರದರ್ಶನ ನೀಡಿತು. :: ಸಾಂಸ್ಕೃತಿಕ ಕಾರ್ಯಕ್ರಮ :: ಕಾರ್ಯಕ್ರಮದಲ್ಲಿ ವಿವಿಧ ಕಳಿ ಪೈಪೋಟಿಗಳು, ಚೋದು–ಚೋದ್ಯ, ಕೊಡವ ಸಾಂಪ್ರದಾಯಿಕ ನೃತ್ಯ, ಸಂಗೀತ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಮಹಿಳೆಯರು, ಪುರುಷರು, ಯುವಕರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು. :: ಕಾರ್ಯಕ್ರಮ ಉದ್ಘಾಟನೆ :: ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮುಕ್ಕಾಟಿರ ಗ್ರೀಷ್ಮ ಬೋಜಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಕೊಡವ ಸಮಾಜ ಮಡಿಕೇರಿಯ ಅಧ್ಯಕ್ಷ ಮಂಡುವಂಡ ಪಿ. ಮುತ್ತಪ್ಪ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಜಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಪೊಮ್ಮಕ್ಕಡ ಕೂಟದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಕೊಡವ ಜನಾಂಗದ ಆಚಾರ–ವಿಚಾರ, ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು. ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಉಪನ್ಯಾಸಕಿ ಪೆಮ್ಮಚಂಡ ವಿನಿತ ದೇವಮ್ಮ ಮಾತನಾಡಿ, ಕೊಡಗು ಪ್ರಕೃತಿಯ ಆರಾಧಕರ ನಾಡಾಗಿದ್ದು, ಇಲ್ಲಿನ ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಕಾಡು–ಮೇಡುಗಳಲ್ಲಿ ದೊರೆಯುವ ಔಷಧೀಯ ಸಸ್ಯಗಳು ನಮ್ಮ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಪ್ರಕೃತಿ ಉಳಿದರೆ ಮಾತ್ರ ಸಂಸ್ಕೃತಿಯೂ ಉಳಿಯಲು ಸಾಧ್ಯ. ಆದ್ದರಿಂದ ಪರಿಸರ ಹಾಗೂ ಪಾರಂಪರಿಕ ಜ್ಞಾನವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದು ಹೇಳಿದರು. :: ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ :: ಡಾ. ಮುಕ್ಕಾಟಿರ ಗ್ರೀಷ್ಮ ಬೋಜಮ್ಮ ಮಾತನಾಡಿ, ಕುಟುಂಬದ ಕಾಳಜಿ ವಹಿಸುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು. ಕುಟುಂಬದ ಆರೋಗ್ಯ ಮತ್ತು ನೆಮ್ಮದಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದರು. ಕೊಡವ ಸಮಾಜ ಮಡಿಕೇರಿಯ ಅಧ್ಯಕ್ಷ ಮಂಡುವಂಡ ಪಿ. ಮುತ್ತಪ್ಪ ಮಾತನಾಡಿ, ಜೀವನದಲ್ಲಿ ಎದುರಾಗುವ ಕಷ್ಟ–ಸುಖಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಮಡಿಕೇರಿ ಕೊಡವ ಸಮಾಜವು ಪೊಮ್ಮಕ್ಕಡ ಒಕ್ಕೂಟಕ್ಕೆ ಸಹಕಾರ ನೀಡುತ್ತಿದ್ದು, ಕೂಟವು ಇನ್ನಷ್ಟು ಅಭಿವೃದ್ಧಿ ಹೊಂದುವಂತಾಗಲಿ ಎಂದು ಹಾರೈಸಿದರು. :: ಸನ್ಮಾನ :: ಕಾರ್ಯಕ್ರಮದ ಅಂಗವಾಗಿ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮುಕ್ಕಾಟಿರ ಗ್ರೀಷ್ಮ ಬೋಜಮ್ಮ ಹಾಗೂ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಉಪನ್ಯಾಸಕಿ ಪೆಮ್ಮಚಂಡ ವಿನಿತ ದೇವಮ್ಮ ಅವರನ್ನು ಗೌರವಿಸಲಾಯಿತು. ತೀರ್ಪುಗಾರರಾಗಿ ಸಾಹಿತಿ ಅಂಚೆಟಿರ ಫ್ಯಾನ್ಸಿ ಮುತ್ತಣ್ಣ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಕಳಿಚಂಡ ಡಿಂಪಲ್ ಕಾರ್ಯನಿರ್ವಹಿಸಿದರು. ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಸ್ವಾಗತಿಸಿ, ಪೊಮ್ಮಕ್ಕಡ ಕೂಟದ ಕಾರ್ಯವೈಖರಿ ಹಾಗೂ ಚಟುವಟಿಕೆಗಳ ಕುರಿತು ವಿವರಿಸಿದರು. ಕಾರ್ಯದರ್ಶಿ ಕೂಪದಿರ ಜೂನಾ ವಿಜಯ್, ಖಜಾಂಜಿ ಉಳ್ಳಿಯಡ ಸಚಿತಾ ಗಂಗಮ್ಮ, ಜಂಟಿ ಕಾರ್ಯದರ್ಶಿ ಚೆಟ್ರಂಡ ವಸಂತಿ ಹಾಗೂ ಸಲಹೆಗಾರರಾದ ಮುಕ್ಕಾಟಿರ ಪೊನ್ನಮ್ಮ ವೇದಿಕೆಯಲ್ಲಿದ್ದರು. ಅತಿಥಿ ಪರಿಚಯವನ್ನು ಚೊಟ್ಟೆಯಂಡ ಮಿಥಿಲ, ಕಾಂಡೆ ಲಲ್ಲು ಕುಟ್ಟಪ್ಪ ಹಾಗೂ ಚೋಕಿರ ಅನಿತ ನೆರವೇರಿಸಿದರು. ಚೆಟ್ರಂಡ ವಸಂತಿ ಹಾಗೂ ಬೊಟ್ಟೋಳಂಡ ಶಾಂತಿ ಅಚ್ಚಯ್ಯ ಪ್ರಾರ್ಥನೆ ಸಲ್ಲಿಸಿದರು. ವಿವಿಧ ಕಾರ್ಯಕ್ರಮಗಳನ್ನು ನಿರೂಪಿಸಲಾಯಿತು. ಅಂತಿಮವಾಗಿ ಕೂಪದಿರ ಜೂನಾ ವಿಜಯ್ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ಕೊಡವ ಸಮಾಜ, ಪೊಮ್ಮಕ್ಕಡ ಒಕ್ಕೂಟ ಹಾಗೂ ಮಡಿಕೇರಿಯ ವಿವಿಧ ಕೊಡವ ಕೇರಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.










