ಮಡಿಕೇರಿ, NEWS DESK ಆ.27: ಕಸ್ತೂರಿರಂಗನ್ ವರದಿಯಿಂದ ಕೊಡಗಿನ ಜನತೆ ಆತಂಕಪಡುವ ಅಗತ್ಯವಿಲ್ಲ. ಈ ಕುರಿತು ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಯ ನೀಡಿದ್ದಾರೆ.
ಮಡಿಕೇರಿಯಲ್ಲಿ ಸಂಸದರ ನೇತೃತ್ವದಲ್ಲಿ ವಿವಿಧ ಸಂಘ-ಸAಸ್ಥೆಗಳ ಪ್ರತಿನಿಧಿಗಳು, ರೈತ ಮುಖಂಡರು ಹಾಗೂ ಪರಿಸರ ಪ್ರೇಮಿಗಳೊಂದಿಗೆ ಕಸ್ತೂರಿರಂಗನ್ ವರದಿ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು.
ಸಂವಾದದಲ್ಲಿ ಮಾತನಾಡಿದ ಸಂಸದ ಯದುವೀರ್ ಒಡೆಯರ್, ಕಸ್ತೂರಿರಂಗನ್ ವರದಿ ಇನ್ನೂ ಕರಡು ಅಧಿಸೂಚನೆಯ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಹಲವು ಹಂತದ ಚರ್ಚೆಗಳು ನಡೆಯಬೇಕಿದೆ ಎಂದು ತಿಳಿಸಿದರು.
ಕೊಡಗಿನ ಜನರು ಪ್ರಕೃತಿಯನ್ನು ರಕ್ಷಿಸುವ ಹಾಗೂ ಗೌರವಿಸುವ ಮನೋಭಾವ ಹೊಂದಿದ್ದಾರೆ. ಹೀಗಿರುವಾಗ ಅವರನ್ನು ಅನ್ಯಾಯವಾಗಿ ಅರಣ್ಯ ಕಾಯ್ದೆಯ ವ್ಯಾಪ್ತಿಗೆ ತಳ್ಳುವುದು ಸರಿಯಲ್ಲ. ಕೇರಳದಲ್ಲಿ ಕೈಗೊಂಡಿರುವ ಕ್ರಮದಂತೆ ಕೊಡಗಿನಲ್ಲಿಯೂ ಬಫರ್ ಜೋನ್ ಅನ್ನು ಶೂನ್ಯ ಕಿಲೋಮೀಟರ್ಗೆ ನಿಗದಿಪಡಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜನವಸತಿ ಪ್ರದೇಶಗಳು ಹಾಗೂ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಅರಣ್ಯ ವ್ಯಾಪ್ತಿ ಅಥವಾ ಪರಿಸರ ಸೂಕ್ಷö್ಮ ವಲಯಕ್ಕೆ ಸೇರ್ಪಡೆ ಮಾಡಬಾರದು. ಕಸ್ತೂರಿರಂಗನ್ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವುದು ಅಸಾಧ್ಯ ಎಂದು ಸಂಸದರು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಂಟಿಯಾಗಿ ಭೌತಿಕ ಪರಿಶೀಲನೆ ನಡೆಸಬೇಕು ಎಂಬ ಒತ್ತಾಯವೂ ಸಭೆಯಲ್ಲಿ ಕೇಳಿಬಂತು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಸಮ್ಮತಿ ಸೂಚಿಸಿದ್ದು, ರಾಜ್ಯದಲ್ಲಿಯೂ ಭೌತಿಕ ಪರಿಶೀಲನೆ ನಡೆಸುವಂತೆ ಒತ್ತಾಯಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಕಸ್ತೂರಿ ರಂಗನ್ ವರದಿ ವಿರೋಧ ಹೋರಾಟ ಸಮಿತಿ, ರೈತ ಹೋರಾಟ ಸಮಿತಿ, ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್, ರೈತ ಸಂಘ, ಜೆಡಿಎಸ್ ಪಕ್ಷ ಸೇರಿದಂತೆ ವಿವಿಧ ಸಂಘಟನೆಗಳು, ರೈತರು, ಕೃಷಿಕರು, ಬೆಳೆಗಾರರು ಸಭೆಯಲ್ಲಿ ಪಾಲ್ಗೊಂಡು ಕಸ್ತೂರಿ ರಂಗನ್ ವರದಿ ಕುರಿತು ಅಭಿಪ್ರಾಯ ಹಂಚಿಕೊAಡರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಕೇರಳ ಮಾದರಿಯಲ್ಲಿ ಇಲ್ಲಿಯೂ ಭೌತಿಕ ಸರ್ವೇ ಕಾರ್ಯ ನಡೆಸಬೇಕು. ರಾಜ್ಯ ಸರಕಾರ ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಮುಂದಿನ ತಿಂಗಳ 26ನೇ ತಾರೀಖಿನವರೆಗೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶವಿದೆ. ಅದರ ಒಳಗೆ ನ್ಯಾಯಾಧಿಕರಣ ಮುಂದೆ 6 ಜಿಲ್ಲೆಗಳ ಸರ್ವೇ ಕಾರ್ಯಕ್ಕೆ ಕಾಲಾವಕಾಶ ಕೋರಬೇಕು. ಈಗಾಗಲೇ ಕೇಂದ್ರ ಸರಕಾರ ಕಾಲಾವಕಾಶ ಕೋರಿದೆ. ಆದರೆ ರಾಜ್ಯ ಸರಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಕಸ್ತೂರಿ ರಂಗನ್ ವರದಿ ವಿರೋಧ ಹೋರಾಟ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ 8ನೇ ಅಧಿಸೂಚನೆ ಜಾರಿಯಾಗುವ ಮೊದಲು ಈ ಕುರಿತು ಮತ್ತೊಂದು ಪಕ್ಷಾತೀತ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಅರಣ್ಯ ಸಚಿವರು ವರದಿಯನ್ನು ತಿರಸ್ಕರಿಸುವದಾಗಿ ಹೇಳಿದ್ದಾರೆ. ಅದು ಅಸಾಧ್ಯವಾಗಿದ್ದು ಕೇರಳ ಮಾದರಿಯಲ್ಲಿ ಸರ್ವೇ ನಡೆಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ ಜನ ವಸತಿ ಪ್ರದೇಶ, ಕೃಷಿ ಭೂಮಿ, ಅರಣ್ಯ ಎಂದು ವರ್ಗೀಕರಿಸುವ ಸರ್ವೇ ನಡೆಯಬೇಕಿದ್ದು ಈ ಕುರಿತು ರಾಜ್ಯ ಸರಕಾರಕ್ಕೆ ಜವಾಬ್ದಾರಿ ಇದೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಜಂಟಿಯಾಗಿ ಈ ಕಾರ್ಯಕ್ಕೆ ಮುಂದಾಗಬೇಕು. ಬೃಹತ್ ರೆಸಾರ್ಟ್ಗಳಿಗೆ ಭೂ ಪರಿವರ್ತನೆ ಮಾಡುವುದಕ್ಕೆ ನಿಷೇಧ ಹೇರಬೇಕು ಎಂದು ಹೇಳಿದರು.
*ಕಾಂಗ್ರೆಸ್ ಶಾಸಕರ ಗೈರಿಗೆ ಬಿಜೆಪಿ ಅಸಮಾಧಾನ*
ಇದೇ ವೇಳೆ, ಕಸ್ತೂರಿರಂಗನ್ ವರದಿಯಂತಹ ಕೊಡಗಿನ ಜ್ವಲಂತ ಸಮಸ್ಯೆ ಕುರಿತು ಪಕ್ಷಾತೀತವಾಗಿ ಸಭೆ ಆಯೋಜಿಸಲಾಗಿದ್ದರೂ ಕೊಡಗಿನ ಇಬ್ಬರು ಕಾಂಗ್ರೆಸ್ ಶಾಸಕರು ಸಭೆಗೆ ಗೈರಾಗಿರುವುದಕ್ಕೆ ಬಿಜೆಪಿ ಕೊಡಗು ಅಸಮಾಧಾನ ವ್ಯಕ್ತಪಡಿಸಿದೆ.
ಸಂಸದರ ನೇತೃತ್ವದಲ್ಲಿ ಪಕ್ಷಾತೀತವಾಗಿ ಆಯೋಜಿಸಿದ್ದ ಸಭೆಗೆ ಶಾಸಕರು ಗೈರಾಗಿರುವುದು ಅವರ ಕೊಡಗಿನ ಮೇಲಿನ ಕಾಳಜಿ ಹಾಗೂ ರೈತರ ಸಮಸ್ಯೆಗಳ ಬಗ್ಗೆ ಅವರ ನಿಲುವಿನ ಕುರಿತು ಪ್ರಶ್ನೆ ಮೂಡಿಸಿದೆ ಎಂದು ಬಿಜೆಪಿ ಟೀಕಿಸಿದೆ.
ಕಸ್ತೂರಿರಂಗನ್ ವರದಿ ಕುರಿತು ರಾಜಕೀಯ ಮಾಡಬಾರದು, ಎಲ್ಲರೂ ಒಗ್ಗಟ್ಟಾಗಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಹೇಳಿದ್ದ ಕಾಂಗ್ರೆಸ್ ನಾಯಕರು, ಇದೀಗ ಪಕ್ಷಾತೀತ ಸಭೆಗೆ ಗೈರಾಗಿರುವುದೇಕೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.








